ಬೆಂಗಳೂರಿನ ಖಾಲಿ ಪ್ಲಾಟ್ಗಳಲ್ಲಿ ಸುಂದರ ಉದ್ಯಾನವನ
ಬೆಂಗಳೂರು, ಡಿಸೆಂಬರ್.01: ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ. ಖಾಲಿ ಸೈಟ್ ಗಳು ಕಂಡರೆ ಸಾಕು ಜನರು ಕಸ ಎಸೆಯುವುದಕ್ಕೆ ಶುರು ಮಾಡಿ ಬಿಡುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗವೊಂದನ್ನು ಮಾಡಲಾಗಿದ್ದು, ಖಾಲಿ ಸೈಟ್ ಗಳಲ್ಲಿ ಇನ್ಮುಂದೆ ಸುಂದರ ಉದ್ಯಾನವನಗಳು ತಲೆ ಎತ್ತಲಿವೆ.
ಕೋರಮಂಗಲದಲ್ಲಿ ಖಾಲಿ ಸೈಟ್ ಗಳಲ್ಲಿ ಸುಂದರ ಉದ್ಯಾನವನ ನಿರ್ಮಿಸುವ ಮೂಲದ ಸುತ್ತಮುತ್ತಲಿನ ವಾತಾವರಣಕ್ಕೆ ಸ್ಥಳೀಯರೇ ಹೊಸ ಕಳೆ ನೀಡಿದ್ದಾರೆ. ಕೋರಮಂಗಲದ 1ನೇ ಬ್ಲಾಕ್ ಖಾಲಿ ಸೈಟ್ ಗಳಲ್ಲಿ ಹಣ್ಣು, ತರಕಾರಿ, ಸೊಪ್ಪು ಮತ್ತು ಹೂವಿನ ಗಿಡಗಳನ್ನು ನೆರೆಹೊರೆಯ ಜನರೇ ಬೆಳೆಯುತ್ತಿದ್ದಾರೆ.
ಲಾಲ್ ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಕೋರಮಂಗಲ ನಿವಾಸಿಗಳ ಕಲ್ಯಾಣ ಸಂಘದ ಹೊಸ ಪರಿಕಲ್ಪನೆಯೇ ಈ "ಪ್ರಥಮ್ ಸಮುದಾಯ ಉದ್ಯಾನವನ". ಕೋರಮಂಗಲದ ಮೂರು ಕಡೆಗಳಲ್ಲಿ 60X40 ವಿಸ್ತೀರ್ಣದ ಖಾಲಿ ಜಾಗದಲ್ಲಿ ಹೊಸ ಪರಿಕಲ್ಪನೆಗೆ ಜೀವ ತುಂಬಲಾಗಿದೆ.
ಹೊಸ ಪರಿಕಲ್ಪನೆಯಿಂದ ನಗರಕ್ಕೆ ಹೊಸ ರೂಪ:
ಕೋರಮಂಗಲದ ಸುತ್ತಮುತ್ತಲಿನಲ್ಲಿ ಖಾಲಿ ಸೈಟುಗಳನ್ನು ಹೊಂದಿರುವ 12ಕ್ಕೂ ಹೆಚ್ಚು ಮಾಲೀಕರ ಜೊತೆಗೆ ಪ್ರಥಮ್ ಸಮುದಾಯ ಉದ್ಯಾನವನ ಪರಿಕಲ್ಪನೆ ಬಗ್ಗೆ ಚರ್ಚೆ ನಡೆಸಿದ್ದೆವು. ಈ ಪೈಕಿ ಕೆಲವರು ನಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಿದರು. ಅದರಲ್ಲಿ ಕೆಲವರು ತಮ್ಮ ಖಾಲಿ ಸೈಟುಗಳನ್ನು ಸಮುದಾಯ ಉದ್ಯಾನವನವಾಗಿ ಪರಿವರ್ತಿಸುವುದಕ್ಕೆ ಸಮ್ಮತಿಸಿದರು ಎಂದು ಕೋರಮಂಗಲ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷೆ ಪದ್ಮಶ್ರೀ ತಿಳಿಸಿದ್ದಾರೆ.
ಸಮುದಾಯ ಉದ್ಯಾನವನ ನಿರ್ಮಾಣ ಕಾರ್ಯದಲ್ಲಿ ನೆರೆಹೊರೆಯವರು ಕೂಡಾ ಬೆಂಬಲ ನೀಡಿದ್ದಾರೆ. ತಾವುಗಳು ಸಂಗ್ರಹಿಸಿಟ್ಟ ಗಿಡದ ಸಸಿಗಳನ್ನು ನೀಡುವುದರ ಜೊತೆಗೆ ಅವುಗಳಿಗೆ ನೀರುಣಿಸಲು ಸಮ್ಮತಿಸಿದ್ದಾರೆ. ಬಿಬಿಎಂಪಿ ತೋಟಗಾರಿಕಾ ವಿಭಾಗದಿಂದ ಸಸಿಗಳು ಮತ್ತು ಫಲವತ್ತಾದ ಮಣ್ಣು ಹಾಗೂ ಸಸಿ ನೆಡುವ ಕಾರ್ಯದಲ್ಲಿ ನೆರವಾಗುವುದಕ್ಕೆ ಶಾಸಕ ರಾಮಲಿಂಗಾ ರೆಡ್ಡಿಯವರು ಸಹಕಾರ ನೀಡಿದ್ದಾರೆ ಎಂದು ಪದ್ಮಶ್ರೀ ಹೇಳಿದ್ದಾರೆ.
ವಾಣಿಜ್ಯಕ್ಕಾಗಿ ಸಮುದಾಯ ಉದ್ಯಾನವನ ಬಳಸುವಂತಿಲ್ಲ:
ಕೋರಮಂಗಲದ ಮೂರು ಕಡೆಗಳಲ್ಲಿ ಆರಂಭಿಸಲಾಗಿರುವ ಉದ್ಯಾನವನದಲ್ಲಿ ಮಕ್ಕಳಿಗೆ ಕೃಷಿಗೆ ಸಂಬಂಧಿಸಿದಂತೆ ಬೋಧನೆ ಮಾಡಲಾಗುತ್ತದೆ. ಇದರಿಂದ ಕೃಷಿಯ ಕುರಿತು ಮಕ್ಕಳಲ್ಲಿಯೂ ಆಸಕ್ತಿ ಹೆಚ್ಚಿಸಿದಂತೆ ಆಗುತ್ತದೆ. ಇದರ ಜೊತೆಗೆ ಮೂರು ಸಮುದಾಯ ಉದ್ಯಾನವನಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವಂತಿಲ್ಲ. ಕೋರಮಂಗಲದ ನಿವಾಸಿಗಳಿಗೆ ಈ ಉದ್ಯಾನವನದಲ್ಲಿ ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. 100 ರೂಪಾಯಿಗೆ ಎರಡು ಪಪ್ಪಾಯಿ ಹಣ್ಣು ಅಥವಾ ಒಂದೂವರೆ ಡಜನ್ ಬಾಳೆಹಣ್ಣು ಮಾರಾಟ ಮಾಡಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಣವನ್ನು ಮತ್ತೆ ಉದ್ಯಾನವದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಕೋರಮಂಗಲ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷೆ ಪದ್ಮಶ್ರೀ ಹೇಳಿದ್ದಾರೆ.