ಕುಮಾರಸ್ವಾಮಿ ಅಲ್ಲ, ಅವರಪ್ಪನೂ ಮಾತು ಕೇಳಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ
ಬೆಂಗಳೂರು, ಜೂನ್ 25: ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗಿದೆ. ಸುಮಾರು 14 ದಿನಗಳ ಪಾದಯಾತ್ರೆ ಬಳಿಕ ನಗರದ ಫ್ರೀಡಂ ಪಾರ್ಕ್ನಲ್ಲಿ ಸೇರಿಕೊಂಡ ವಾಲ್ಮೀಕಿ ಸಮುದಾಯದ ಪ್ರತಿಭಟನಾಕಾರರ ಒತ್ತಡಕ್ಕೆ ಸರ್ಕಾರ ಬಹುತೇಕ ಮಣಿದಿದ್ದು, ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದೆ.
ಭರವಸೆ ನೀಡಿ ಅದನ್ನು ಮುಂದೂಡುತ್ತಾ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಸ್ವಾಮೀಜಿ ಆದೇಶಿಸಿದರೆ ಇದೇ ವೇದಿಕೆಯಲ್ಲಿ ರಾಜೀನಾಮೆ: ಶ್ರೀರಾಮುಲು
ಸಮುದಾಯದವರನ್ನು ಸಂಘಟಿಸಿ ಪಾದಯಾತ್ರೆಯ ನೇತೃತ್ವ ವಹಿಸಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಿದ್ದಾರೆ. ಈ ಭರವಸೆ ಈಡೇರಿಸುವಲ್ಲಿ ವಿಫಲರಾದರೆ ಸರ್ಕಾರವನ್ನು ಉರುಳಿಸುವ ಹಾಗೂ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ವಾಲ್ಮೀಕಿ ಸಮುದಾಯದ ಎಲ್ಲ ಶಾಸಕರೂ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೇಡಿಕೆಯ ಕುರಿತು ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಅವರಪ್ಪನೂ ಮಾತು ಕೇಳಬೇಕು
ಮೀಸಲಾತಿ ವಿಚಾರದಲ್ಲಿ ಸರ್ಕಾರ ನಮ್ಮ ಮಾತು ಕೇಳಬೇಕು. 17 ಜನ ಶಾಸಕರು ನಮ್ಮ ಸಮುದಾಯದವರಿದ್ದಾರೆ. ಬೇಡಿಕೆ ಈಡೇರಿಸದೆ ಇದ್ದರೆ ಶಾಸಕರಿಂದ ಸಾಮೂಹಿಕ ರಾಜೀನಾಮೆ ನೀಡುತ್ತಾರೆ. ಸಮುದಾಯದ ಶಾಸಕರು ನನ್ನ ಕೈಗೆ ರಾಜೀನಾಮೆ ಪತ್ರ ನೀಡಲಿ. 17 ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಉಳಿಯುತ್ತದೆಯೇ? ಎಲ್ಲ ಶಾಸಕರೂ ರಾಜೀನಾಮೆ ಕೊಟ್ಟರೆ ಕುಮಾರಸ್ವಾಮಿ ಮಾತ್ರ ಅಲ್ಲ, ಅವರಪ್ಪ ಸಹ ಮಾತು ಕೇಳುತ್ತಾರೆ. ಸರ್ಕಾರ ಉಳಿಯಬೇಕೇ ಅಥವಾ ಬೇಡವೇ ಎಂಬುದು ಇಂದೇ ನಿರ್ಧಾರ ಅಗಲಿ ಎಂದರು.
ಅಧಿಕಾರ ಉಳಿಸಿಕೊಳ್ಳಲು ನಾಟಕ
ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಾಟಕ ಮಾಡುತ್ತಾರೆ. ನಮ್ಮ ಕಾಂಗ್ರೆಸ್ ಶಾಸಕರಿಗೆ ನಾಯಕರು, ಹೈಕಮಾಂಡ್ ಫೋನ್ ಮಾಡುವುದಿಲ್ಲ. ಆದರೆ, ಕುಮಾರಸ್ವಾಮಿ ಅವರು ಅಣ್ಣ. ನಿಮಗೇನು ಬೇಕು ಎಂದು ವಿಚಾರಿಸುತ್ತಾರೆ ಎಂದು ಟೀಕಿಸಿದರು.
ವಾಲ್ಮೀಕಿ ಸಮಯದಾಯದ ಮೀಸಲಾತಿ ಹೋರಾಟಕ್ಕೆ ಸುದೀಪ ಬೆಂಬಲ
ಎರಡು ತಿಂಗಳಲ್ಲಿ ಈಡೇರಬೇಕು
ತಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಎರಡು ತಿಂಗಳ ಒಳಗೆ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಅದು ಈಡೇರದೆ ಇದ್ದರೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ. ಪರಮೇಶ್ವರ್ ಅವರ ಮನೆ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತೇನೆ. ಇಡೀ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಎಚ್ಚರಿಸಿದರು.
ಸಂಪುಟ ಸಭೆಯಲ್ಲಿ ಚರ್ಚೆ
ಇತರೆ ಸಮುದಾಯದವರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಮೀಸಲಾತಿ ನಿಗದಿಪಡಿಸಲು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಮೀಸಲಾತಿ ನೀಡಲು ಮೀಸಲಾತಿ ಅಧ್ಯಯನ ರಚಿಸಬೇಕೇ, ಸಂಪುಟ ಉಪ ಸಮಿತಿ ರಚಿಸುವುದೇ ಅಥವಾ ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸುವುದೇ ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ವಾಲ್ಮೀಕಿ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ
ನೀವು ಹೇಳಿದರೆ ರಾಜೀನಾಮೆ- ಶ್ರೀರಾಮುಲು
ಮೀಸಲಾತಿ ಹೋರಾಟಕ್ಕೆ ನಾನು ಬದ್ಧ. ಸ್ವಾಮೀಜಿ ಅದೇಶ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾಧ್ಯ ಎಂದು ಬಿ. ಶ್ರೀರಾಮುಲು ಹೇಳಿದ್ದರು. ಶಾಸಕ ಸ್ಥಾನದಲ್ಲಿ ಇರಲು ಸ್ವಾಮೀಜಿ ಕಾರಣ. ಇದು ಅವರು ಕೊಟ್ಟ ಭಿಕ್ಷೆ. ನೀವು ಆದೇಶಿಸಿದರೆ ಇದೇ ವೇದಿಕೆಯಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಬೆಳಿಗ್ಗೆ ರಾಜೀನಾಮೆ ವಿಚಾರವನ್ನು ಅವರು ಮೊದಲ ಪ್ರಸ್ತಾಪಿಸಿದ್ದರು.