'ಮೇ 23ರ ಬಳಿಕ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಚರ್ಚೆ'
ಬೆಂಗಳೂರು, ಮೇ 5: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರಕಿಸಿಕೊಡಲು ರಾಜ್ಯದ ಸಮ್ಮಿಶ್ರ ಸರಕಾರ ಸಕಾರಾತ್ಮಕವಾಗಿದೆ, ಈ ನಿಟ್ಟಿನಲ್ಲಿ ಮೇ 23 ರ ನಂತರ ಸಮನ್ವಯ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ತಿಳಿಸಿದರು.
ನಗರದ ಥಣಿಸಂದ್ರ ಮುಖ್ಯರಸ್ತೆಯ ಆರ್ ಕೆ ಹೆಗಡೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಾಯಿ ಕಲ್ಯಾಣ್ ಸುಪಿರಿಯಾದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಾಯಿ ಕಲ್ಯಾಣ್ ಡೆವೆಲಪರ್ಸ್ ನಗರದಲ್ಲಿ ಈಗಾಗಲೇ ಹಲವಾರು ಅಪಾರ್ಟ್ಮೆಂಟ್ಗಳನ್ನು ಕಟ್ಟಿದ್ದಾರೆ. ಈ ಮೂಲಕ ವಿಶ್ವಾಸವನ್ನು ಉಳಿಸಿಕೊಂಡಿರುವ ಇವರು ನೂತನ ತಂತ್ರಜ್ಞಾನದ ಅಡಿಯಲ್ಲಿ ಹೊಸ ಅಪಾರ್ಟ್ಮೆಂಟುಗಳನ್ನು ಕಟ್ಟಲು ಭೂಮಿ ಪೂಜೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದ ನನಗೆ ಸಂತಸ ತಂದಿದೆ ಎಂದರು..
ಕನ್ನಡಿಗರಿಗೆ ಉದ್ಯೋಗ ಟ್ವಿಟರ್ ಅಭಿಯಾನಕ್ಕೆ ಎಚ್ಡಿಕೆ ಬೆಂಬಲ
ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ಎಲ್ಲರ ಆಶಯವಾಗಿದೆ. ಕನ್ನಡ ಭಾಷೆಗೆ ಆದ್ಯತೆ ಇರಬೇಕೆ ವಿನಃ ಬೇರೆ ಭಾಷೆಗೆ ಅಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ ಕನ್ನಡ ಭಾಷೆ ಸಂಸ್ಕೃತಿ ಕಲೆಯ ಅಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಕನ್ನಡ ಭಾಷೆ ಮಾತನಾಡುವವರಿಗೆ ಹೆಚ್ಚು ಪ್ರಾತಿನಿಧ್ಯ
ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಮಾತನಾಡುವವರಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು, ಆಗಂತ ಬೇರೆ ಭಾಷೆ ಕಲಿಯಬೇಡಿ ಎಂದು ಹೇಳುವುದಿಲ್ಲ ಕನ್ನಡಕ್ಕೆ ಧಕ್ಕೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ ಕನ್ನಡಿಗರೆಲ್ಲಾ ಒಗ್ಗಟ್ಟಾಗಬೇಕು ಎಂದು ಹೇಳಿದರು. ಕನ್ನಡ ಭಾಷೆ ಮೇಲೆ ಇತರ ಭಾಷೆ ಹೇರಲು ಮುಂದಾದರೆ ಸಾರ್ವಜನಿಕರೊಂದಿಗೆ ನಾವು ಧ್ವನಿ ಗೂಡಿಸಿ ಕನ್ನಡ ಭಾಷೆಗಾಗಿ ಹೋರಾಡಲು ಸಿದ್ದ ಎಂದರು.
ಖಾಸಗಿ ವಲಯದಲ್ಲೂ ಮೀಸಲಾತಿ ನೀಡಲು ಸಿದ್ಧ
ಕರ್ನಾಟಕದಲ್ಲಿ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಕನ್ನಡಿಗರಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ ಕೆಲಸ ನೀಡಬೇಕೆಂದು ಸಾರ್ವಜನಿಕರೊಂದಿಗೆ ನಮ್ಮ ಒತ್ತಾಯವೂ ಆಗಿದೆ ಎಂದು ಹೇಳಿದರು. ಮೇ 23 ರ ನಂತರ ಮೀಸಲಾತಿ ಕುರಿತ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಡೆವಲಪರ್ಸ್ನ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ
ಸಾಯಿಕಲ್ಯಾಣ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ನ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಕಡಿಮೆ ಬೆಲೆಯಲ್ಲಿ ಮನೆಗಳ ನಿರ್ಮಾಣ ಮಾಡಿ ಜನರ ಬಂಡವಾಳಕ್ಕೆ ಅನುಗುಣವಾಗಿ ಗುಣಮಟ್ಟದ ಮನೆಗಳನ್ನು ಸಾಯಿ ಕಲ್ಯಾಣ ಸುಪೀರಿಯ್ ಅಪಾರ್ಟ್ಮೆಂಟ್ನವರು ನಿರ್ಮಿಸುತ್ತಿದ್ದೇವೆ. 200 ಕ್ಕೂ ಹೆಚ್ಚು ಮನೆಗಳು ಇಲ್ಲಿ ನಿರ್ಮಿಸುತ್ತಿದ್ದು, ಇನ್ನು ಸಾಕಷ್ಟು ಬೇಡಿಕೆ ಇದೆ. ಫಾಸ್ಟ್ ಟ್ರಾಕ್ ಯೂಸ್ ಮಾಡಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಉತ್ತಮವಾಗಿ ಮನೆಗಳು ನಿರ್ಮಾಣವಾಗಲಿದೆ ಎಂದು ಹೇಳಿದರು.
ಸಾಯಿ ಕಲ್ಯಾಣ್ ಸುಪಿರಿಯಾದ ಕಟ್ಟಡಕ್ಕೆ ಶಂಕು ಸ್ಥಾಪನೆ
ನಗರದ ಥಣಿಸಂದ್ರ ಮುಖ್ಯರಸ್ತೆಯ ಆರ್ ಕೆ ಹೆಗಡೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಾಯಿ ಕಲ್ಯಾಣ್ ಸುಪಿರಿಯಾದ ಕಟ್ಟಡಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಬೈರೇಗೌಡ, ಸಾಯಿ ಕಲ್ಯಾಣ ಬಿಲ್ಡರ್ಸ್ ಅಂಡ್ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುನೀಲ್, ಪಾಲಿಕೆ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ಮತ್ತಿತರರು ಭಾಗವಹಿಸಿದ್ದರು.