45 ಲಕ್ಷ ಟನ್ ಭತ್ತ ಖರೀದಿಸುವಂತೆ ಕೇಂದ್ರಕ್ಕೆ ಮನವಿ: ಗೋಪಾಲಯ್ಯ
ಬೆಂಗಳೂರು, ಜನವರಿ 18: 45 ಲಕ್ಷ ಟನ್ ಭತ್ತ ಖರೀದಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ದರಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಸದ್ಯಕ್ಕೆ ರಾಜ್ಯದ ರೈತರಿಂದ ಹನ್ನೆರಡು ಲಕ್ಷ ಟನ್ಗಳಷ್ಟು ಭತ್ತ ಖರೀದಿಸಲು ನಮಗೆ ಅವಕಾಶವಿದೆ.
ಆದರೆ ಕೊರೊನೋತ್ತರ ಕಾಲಘಟ್ಟದಲ್ಲಿ ರೈತರಿಗೆ, ಸಾಗಣೆದಾರರಿಗೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ದೃಷ್ಟಿಯಿಂದ ನಮ್ಮ ಭತ್ತ ನಮಗೇ ಇರಲಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಗಣರಾಜ್ಯೋತ್ಸವದಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ; ಪೊಲೀಸರ ನಿರ್ಧಾರಕ್ಕೆ ಬಿಟ್ಟ ಕೋರ್ಟ್
ರಾಜ್ಯದಲ್ಲಿ ಪ್ರತಿ ವರ್ಷ 50 ಲಕ್ಷ ಟನ್ ಅಕ್ಕಿಯನ್ನು ಜನ ಬಳಕೆ ಮಾಡುತ್ತಿದ್ದು ಈ ಪೈಕಿ ದೊಡ್ಡ ಪ್ರಮಾಣದ ಭತ್ತವನ್ನು ಹೊರ ರಾಜ್ಯಗಳಿಂದ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.
ಕೊರೊನಾ ವಿಕೋಪಕ್ಕೆ ಹೋದ ಸನ್ನಿವೇಶದಲ್ಲಿ ಆಹಾರ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡ ಅವರು ಕೇಂದ್ರದ ನೆರವಿನೊಂದಿಗೆ ಜನರ ನೆರವಿಗೆ ನಾವು ಬಂದಿದ್ದೇವೆ.
ಈಗಿನ ಆರ್ಥಿಕ ಬಿಕ್ಕಟ್ಟು ಇನ್ನೊಂದು ವರ್ಷದಲ್ಲಿ ನಿವಾರಣೆ ಯಾಗುವ ಲಕ್ಷಣಗಳಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ಮುಂದಿನ ಬಜೆಟ್ ನಲ್ಲಿ ನಾವು ಕೇಳಿದ್ದೆಲ್ಲವನ್ನೂ ಕೊಡುವುದು ಮುಖ್ಯಮಂತ್ರಿಗಳಿಗೆ ಕಷ್ಟವಾಗಬಹುದು. ಹೀಗಾಗಿ ಅವರು ನೀಡುವ ಸೂಚನೆಯನ್ನು ಅನುಸರಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.
ಗುಜರಾತ್,ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ನಮಗೆ ಭತ್ತ ಸರಬರಾಜಾಗುತ್ತಿದ್ದು ಹೀಗೆ ಸರಬರಾಜಾಗುವ ಭತ್ತಕ್ಕೆ ಪ್ರತಿಯಾಗಿ ನೂರಾರು ಕೋಟಿ ರೂಗಳಷ್ಟು ಸಾಗಣೆ ವೆಚ್ಚ ತಗಲುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ರೈತರು ಬೆಳೆಯುವ ಬತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸಲು ನಮಗೇ ಅವಕಾಶವಾದರೆ ರೈತರಿಗೂ ಅನುಕೂಲವಾಗುತ್ತದೆ.ಸಾಗಾಣಿಕೆದಾರರಿಗೂ ಅನುಕೂಲವಾಗುತ್ತದೆ.
ಅದೇ ರೀತಿ ಬೆಳೆದ ಭತ್ತವನ್ನು ರಾಜ್ಯ ಸರ್ಕಾರವೇ ಖರೀದಿ ಮಾಡುತ್ತದೆ ಎಂಬುದು ಖಚಿತವಾದರೆ ಹೆಚ್ಚಿನ ಯುವಕರು ಕೃಷಿ ಕೆಲಸದಲ್ಲಿ ತೊಡಗಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ವಿವರಿಸಿದರು.
ಕೊರೊನಾದಿಂದಾಗಿ ರಾಜ್ಯ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಇಂತಹ ಸನ್ನಿವೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಆ ಮೂಲಕ ಆರ್ಥಿಕತೆಗೆ ಚೇತರಿಕೆ ನೀಡುವ ಅಗತ್ಯವಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
Recommended Video
ಈ ಬಾರಿಯ ಬಜೆಟ್ನಲ್ಲಿ ರಾಜ್ಯದ ಜನರಿಗೆ ಹೊಸ ಶಕ್ತಿ ತುಂಬುವ ಯೋಜನೆಗಳನ್ನು ನೀಡಬೇಕು ಎಂಬ ಯೋಚನೆ ಇದೆ.ಆದರೆ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಮೇಲೆ ಇದು ಜಾರಿಯಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.