ಲಡಾಖ್ ಸಂಘರ್ಷ: ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟ ಮಾಹಿತಿ ನೀಡಬೇಕು: ದೇವೇಗೌಡ
ಬೆಂಗಳೂರು, ಜೂನ್ 17: ಲಡಾಖ್ನ ಗಲ್ವಾನ್ ಕಣಿವೆಯ ಭಾರತ-ಚೀನಾ ಸಂಘರ್ಷದ ವರದಿ ಆತಂಕಕಾರಿಯಾಗಿದೆ. ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಸೈನಿಕರು ಚೀನಾ ದಾಳಿಯಲ್ಲಿ ಜೀವತೆತ್ತಿದ್ದೇಕೆ? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸೋಮವಾರ ತಡರಾತ್ರಿ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಮಲ್ಲಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಚೀನಾದ 43 ಯೋಧರು ಹತ್ಯೆಯಾಗಿದ್ದಾರೆ.
ಲಡಾಖ್ನಲ್ಲಿ ಭಾರತದ ಸೇನೆ ಮೇಲೆ ಚೀನಾ ನಡೆಸಿದ ದಾಳಿಯಲ್ಲಿ ಓರ್ವ ಅಧಿಕಾರಿಯೂ ಸೇರಿದಂತೆ 20 ಸೈನಿಕರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೇವೇಗೌಡರು, ರಾಷ್ಟ್ರದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ - ಚೀನಾ ಗಡಿ ವಿಚಾರವಾಗಿ ದೇಶದ ಮುಂದೆ ಸ್ಪಷ್ಟ ಚಿತ್ರಣ ಬಿಚ್ಚಿಡಲಿ ಎಂದು ಆಗ್ರಹಿಸಿದ್ದಾರೆ.
ಮೇ ಆರಂಭದಿಂದ ಭಾರತ-ಚೀನಾ ಪಡೆಗಳು ಮುಖಾಮುಖಿಯಾಗಿ ಪೂರ್ವ ಲಡಾಕ್ನಲ್ಲಿ ಎದುರಾಗಿದ್ದ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳ ನಡುವೆ ಜೂನ್ 6 ರಂದು ಮಾಡಿಕೊಂಡ ಒಪ್ಪಂದಕ್ಕೆ ಬದ್ಧವಾಗಲು ಚೀನಾ ವಿಫಲವಾಗಿದೆ ಎಂದು ಭಾರತ ಆರೋಪಿಸಿದೆ.
ಭಾರತ-ಚೀನಾ ಮುಖಾಮುಖಿ: ಸೇನಾಧಿಕಾರಿ, ಮೂವರು ಸೈನಿಕರು ಹುತಾತ್ಮ
ಚೀನಾದ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮೊದಲ ಅಧಿಕೃತ ಪ್ರತಿಕ್ರಿಯೆಯಲ್ಲಿ, ಎರಡೂ ಕಡೆ ಸಾವು-ನೋವುಗಳಾಗಿವೆ. ಉನ್ನತ ಮಟ್ಟದಲ್ಲಿ ಒಪ್ಪಂದವನ್ನು ಚೀನಾದ ಕಡೆ ಸೂಕ್ಷ್ಮವಾಗಿ ಅನುಸರಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.
'ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದ ಜವಾಬ್ದಾರಿಯುತ ವಿಧಾನವನ್ನು ಗಮನಿಸಿದರೆ, ಭಾರತದ ಎಲ್ಲಾ ಚಟುವಟಿಕೆಗಳು ಗಡಿಯಲ್ಲಿ ಭಾರತದ ಕಡೆಯಲ್ಲೇ ಇವೆ ಎಂಬುದು ಸ್ಪಷ್ಟವಾಗಿದೆ. ಚೀನಾದ ಕಡೆಯಿಂದಲೂ ನಾವು ಅದೇ ರೀತಿ ನಿರೀಕ್ಷಿಸುತ್ತೇವೆ.' ಎಂದು ವಿದೇಶಾಂಗ ಸಚಿವಾಲಯ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.