ರೆಮ್ಡೆಸಿವಿರ್ ಅಕ್ರಮ ಮಾರಾಟ ಮಾಡುತ್ತಿದ್ದ ಆರು ದಂಧೆಕೋರರ ಬಂಧನ
ಬೆಂಗಳೂರು, ಮೇ. 06: ಕೊರೊನಾ ಸೋಂಕಿತರು ಗುಣಮುಖವಾಗಲು ನೀಡುವ ರೆಮ್ಡೆಸಿವಿರ್ ಚುಚ್ಚು ಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸುತ್ತಿದ್ದರೂ ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲ ಹುಟ್ಟಿಕೊಂಡಿರುವುದು ಬೆಚ್ಚಿ ಬೀಳಿಸಿದೆ.
ದುಬಾರಿ ಬೆಲೆಗೆ ರೆಮ್ಡೆಸಿವಿರ್ ಚುಚ್ಚು ಮದ್ದು ಮಾರಾಟ ಮಾಡುತ್ತಿದ್ದ ಜೆ.ಪಿ. ನಗರದ ಮೆಡಿಕಲ್ ಪ್ರತಿನಿಧಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಜನಾರ್ಧನ್ ಬಂಧಿತ ಆರೋಪಿ. ಈತನಿಂದ ಮೂರು ವಲಯ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ನಾಗವಾರದ ಮೆಡಿಕಲ್ ರೆಪ್ರಸೆಂಟೀವ್ ದೀಪಕ್ ಎಂಬಾತನನ್ನು ಬಂಧಿಸಿ ಈತನಿಂದ ಮೂರು ರೆಮ್ಡೆಸಿವಿರ್ ವಶಪಡಿಸಿಕೊಳ್ಳಲಾಗಿದೆ.
ಯಲಹಂಕ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಎಂಬಾತನನ್ನು ಬಂಧಿಸಿ ಆತನಿಂದ ನಾಲ್ಕು ವಯಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಜೆ.ಸಿ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುಬ್ರಮಣ್ಯ ಪೊಲೀಸರ ಕಾರ್ಯಾಚರಣೆ: ಕೊರೊನಾ ಸೋಂಕಿತರಿಗೆ ದುಬಾರಿ ಬೆಲೆಗೆ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಹೆಸರಘಟ್ಟ ಮುಖ್ಯ ರಸ್ತೆಯ ಸಿದ್ದೇಹಳ್ಳಿಯಲ್ಲಿರುವ ಎಸ್ಎಲ್ವಿ ಮೆಡಿಕಲ್ ಸ್ಟೋರ್ನ ಹೃದಯ ರಾಜ್ ಬಂಧಿತ ಆರೋಪಿ.
Recommended Video
ಈತನಿಂದ ಮೂರು ರೆಮ್ಡೆಸಿವಿರ್ ಚುಚ್ಚುಮದ್ದು ವಶಪಡಿಸಿಕೊಳ್ಳಲಾಗಿದೆ. ನಾಗರಭಾವಿಯ ಮಲ್ಲಹತ್ತಹಳ್ಳಿಯ ದಿನೇಶ್, ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ನಲ್ಲಿರುವ ಗಾಯತ್ರಿ ಡಯೋಗ್ನಸ್ಟಿಕ್ ನ ಶಂಕರ್ ಬಂಧಿತರು. ಮೂವರ ವಿರುದ್ಧ ಸುಬ್ರಮಣ್ಯನಗರ ಪೊಲೀಸರು ಪ್ರತ್ಯೇಕ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.