ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರಾಳ
ಬೆಂಗಳೂರು, ಜನವರಿ 18: ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ದೊಡ್ಡ ನೆಮ್ಮದಿ ದೊರಕಿದೆ. ಬೆಳ್ಳಂದೂರು ಸಮೀಪದ ಜಮೀನು ಡಿನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದರಲ್ಲಿ ಅವರು ಯಡಿಯೂರಪ್ಪ ವಿರುದ್ಧದ ಆರೋಪ ಸಾಬೀತಾಗಿಲ್ಲ ಎಂದು ವಿವರಣೆ ನೀಡಿದ್ದಾರೆ.
ವಾಸುದೇವ ರೆಡ್ಡಿ ಎಂಬುವವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಆರೋಪದಡಿ ಖಾಸಗಿ ದೂರು ಸಲ್ಲಿಸಿದ್ದರು. ಮಾಜಿ ಸಚಿವ, ಕಾಂಗ್ರೆಸ್ನ ಆರ್.ವಿ. ದೇಶಪಾಂಡೆ ಅವರ ವಿರುದ್ಧವೂ ದೂರು ದಾಖಲಿಸಿದ್ದರು. ಆದರೆ ದೇಶಪಾಂಡೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ತನಿಖೆಗೆ ಕಳೆದ ತಿಂಗಳು ಸೂಚನೆ ನೀಡಿತ್ತು.
ಹಲಗೆ ವಡೇರನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣ: ಕುಮಾರಸ್ವಾಮಿಗೆ ಎದುರಾಯ್ತು ಕಂಟಕ !
ಈಗ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಅಂತ್ಯಗೊಳಿಸಿದ ವರದಿ ಸಲ್ಲಿಸಿದ್ದು, ಪ್ರಕರಣದಲ್ಲಿ ಯಡಿಯೂರಪ್ಪ ಅವರ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ. 27 ಸಂಪುಟದ 10 ಸಾವಿರ ಪುಟಗಳಲ್ಲಿ ಸುದೀರ್ಘ ವರದಿ ಸಲ್ಲಿಸಲಾಗಿದೆ.
ಪೊಲೀಸರ ವರದಿ ಪರಿಶೀಲಿಸಿದ ನ್ಯಾಯಾಲಯವು ದೂರುದಾರ ವಾಸುದೇವ ರೆಡ್ಡಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ, ಫೆ 2 ತಾರೀಕಿಗೆ ವಿಚಾರಣೆ ಮುಂದೂಡಿದೆ.
ಆರೋಪಿಯನ್ನು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಬೇಕೆಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸುವ ನಿರೀಕ್ಷೆಯಿದೆ. ಹೀಗಾಗಿ ಪೊಲೀಸರ ವರದಿ ಬಳಿಕವೂ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಪ್ರಕರಣದ ಭವಿಷ್ ಫೆ. 2ರಂದು ನಿರ್ಧಾರವಾಗಬಹುದು.
ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಎಫ್ ಐಆರ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ
Recommended Video
2013ರಲ್ಲಿಯೇ ವಾಸುದೇವ ರೆಡ್ಡಿ ದೂರು ಸಲ್ಲಿಸಿದ್ದರು. ಅದರ ಅನ್ವಯ ಲೋಕಾಯುಕ್ತ ವಿಶೇಷ ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು. 2015ರಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ನಾಲ್ಕು ವರ್ಷದ ತನಿಖೆ ಬಳಿಕ ಲೋಕಾಯುಕ್ತ ಪೊಲೀಸರು ಕೊನೆಗೂ ವರದಿ ಸಲ್ಲಿಸಿದ್ದು, ಯಡಿಯೂರಪ್ಪ ಪಾತ್ರ ಇದರಲ್ಲಿ ಇಲ್ಲ ಎಂದು ಹೇಳಿದ್ದಾರೆ.