ಜಿಯೋ ಉದ್ಯೋಗಿಗಳಿಂದ 'ಜಿಯೋ ಸ್ವಚ್ಛ ರೈಲು ಅಭಿಯಾನ'
ಬೆಂಗಳೂರು, ಸೆ. 28: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 'ಸ್ವಚ್ಛತಾ ಹೀ ಸೇವಾ' (ಸ್ವಚ್ಛತೆಯೇ ಸೇವೆ) ಕಾರ್ಯಕ್ರಮವನ್ನು ರಿಲಯನ್ಸ್ ಜಿಯೋ ಉದ್ಯೋಗಿಗಳು ಪಾಲ್ಗೊಂಡಿದ್ದರು. ಸ್ವಚ್ಛ ರೈಲು ಅಭಿಯಾನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಕಂಡು ಬಂತು. ಇದೇ ರೀತಿ ಕರ್ನಾಟಕದಾದ್ಯಂತ 49 ನಿಲ್ದಾಣಗಳಲ್ಲಿ ಸ್ವಚ್ಛ ರೈಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛ ಭಾರತ ಸಂದೇಶವನ್ನು ಪಸರಿಸುವ ಉದ್ದೇಶದಿಂದ, 900 ನಗರ ಹಾಗೂ ಪಟ್ಟಣಗಳ ರೈಲು ನಿಲ್ದಾಣಗಳನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಜಿಯೋ ಇಂದು(ಸೆ.28) ಆಯೋಜಿಸಿತ್ತು. ಜಿಯೋ ಉದ್ಯೋಗಿಗಳು, ಸಹವರ್ತಿಗಳು, ಪಾಲುದಾರರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 25,000ಕ್ಕೂ ಹೆಚ್ಚು ಮಂದಿ, ಸ್ವಚ್ಛ ಪರಿಸರ ರೂಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ರಾಷ್ಟ್ರವ್ಯಾಪಿ 'ಜಿಯೋ ಸ್ವಚ್ಛ ರೈಲು ಅಭಿಯಾನ'ದಲ್ಲಿ ಪಾಲ್ಗೊಂಡರು.
ದೇಶದಲ್ಲಿ ಈವರೆಗೆ ನಡೆದಿರುವ ಅತಿದೊಡ್ಡ ಸ್ವಚ್ಛತಾ ಅಭಿಯಾನಗಳ ಪೈಕಿ ಒಂದು ಎನ್ನಬಹುದಾದ ಈ ಕಾರ್ಯಕ್ರಮದ ಮೂಲಕ, ರೈಲು ನಿಲ್ದಾಣಗಳನ್ನು ಶುಚಿಯಾಗಿಸಿ ಲಕ್ಷಾಂತರ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿಟ್ಟಿನಲ್ಲಿ ತನ್ನ ಉದ್ಯೋಗಿಗಳ ಪ್ರಯತ್ನವನ್ನು ಒಟ್ಟುಗೂಡಿಸಲು ಜಿಯೋ ಯಶಸ್ವಿಯಾಯಿತು.
ಅಭಿಯಾನದಲ್ಲಿ ಪಾಲ್ಗೊಂಡವರು ದ್ವಾರಗಳು, ನಿರೀಕ್ಷಣಾ ಕೊಠಡಿಗಳು, ಕುಳಿತುಕೊಳ್ಳುವ ಪ್ರದೇಶ, ಪಾದಚಾರಿ ಮೇಲ್ಸೇತುವೆ ಹಾಗೂ ಮಾರಾಟಗಾರರ ಪ್ರದೇಶಗಳಿಂದ ಏಕ ಬಳಕೆಯ ಪ್ಲಾಸ್ಟಿಕ್ ಸಂಗ್ರಹಿಸುವ ಮೂಲಕ ಸ್ವಚ್ಛ ಭಾರತ ಆಂದೋಲನಕ್ಕೆ ಕೊಡುಗೆ ನೀಡಿದರು. ಸಂಗ್ರಹಿಸಲಾದ ಬಾಟಲುಗಳು, ಆಹಾರದ ಹೊದಿಕೆ, ಸ್ಟ್ರಾ, ಚಮಚ ಅಥವಾ ಕೈಚೀಲಗಳಂತಹ ಏಕಬಳಕೆಯ ಪ್ಲಾಸ್ಟಿಕ್ ಅನ್ನು ವಿಶೇಷ ಏಜೆನ್ಸಿಗಳ ಸಹಾಯದಿಂದ ಹೆಚ್ಚು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡಲಾಗುತ್ತದೆ.