ರೇಖಾ ಕದಿರೇಶ್ ಕೊಲೆ ಪ್ರಕರಣ ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ
ಬೆಂಗಳೂರು, ಜೂನ್ 25: ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಾಲ್ವರು ಕೊಲೆ ಸಂಚಿನಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
''ರೇಖಾ ಹತ್ಯೆಗೆ ಸಂಬಂಧಿಸಿದ ಇನ್ನಿಬ್ಬರು ಪ್ರಮುಖ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರಮುಖ ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟೋರಿ ಆಫ್ ಭಕ್ಷಿಗಾರ್ಡನ್ vs ರಾಜಕೀಯ ಹತ್ಯೆ: ಗಾರ್ಡನ್ ಮಣಿ ಯಿಂದ ರೇಖಾ ತನಕ
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸಂಚು ರೂಪಿಸುವಲ್ಲಿ ಮೊದಲಿಗೆ ಮೂವರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಪ್ರಾಥಮಿಕ ತನಿಖೆ ನಂತರ ಮೂವರಲ್ಲ, ಆರು ಮಂದಿ ಎಂದು ತಿಳಿದು ಬಂದಿದೆ. ಪೀಟರ್, ಸೂರ್ಯ, ಸ್ಟೀಫನ್ ಮತ್ತು ಇನ್ನೂ 3 ಮಂದಿ ಭಾಗಿಯಾಗಿರುವ ಮಾಹಿತಿಯಿದ್ದು, ಆರು ಮಂದಿ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಸಿಸಿಟಿವಿ ದಿಕ್ಕು ಬದಲು
ಕೊಲೆ ನಡೆಸುವ ಕೆಲವೇ ಗಂಟೆಗಳ ಮೊದಲು ಸಿಸಿಟಿವಿ ದಿಕ್ಕು ಬದಲಿಸಲಾಗಿದ್ದು, ಈ ಪ್ರಕರಣದಲ್ಲಿ ಮಹತ್ವದ ತಿರುವು ನೀಡಲಿದೆ.
ಮೊದಲು ಸಿಸಿಟಿವಿ ಮೇಲೆ ಟವಲ್ ಹಾಕಿದ್ದಾರೆ, ಇದಾದ ಬಳಿಕ ಸಿಸಿಟಿವಿ ದಿಕ್ಕು ಬದಲಿಸಿದ್ದಾರೆ, ದಿಕ್ಕು ಬದಲಾದ ಬಳಿಕ ರೇಖಾ ಹತ್ಯೆ ನಡೆಸಲಾಗಿದೆ. ಕಚೇರಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿ ನಂತರ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ರೇಖಾ ಕದಿರೇಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆರೋಪಿಗಳ ಪತ್ತೆಗೆ ಎಂಟು ತಂಡ ರಚನೆ ಮಾಡಲಾಗಿದೆ ಎಂದು ಡಿಸಿಪಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂಬಂಧಿಕರು ಮತ್ತು ಬೆಂಬಲಿಗರ ಅಕ್ರಂದನ
ಕೊಲೆ ನಡೆದ ಜಾಗದಲ್ಲಿ ಅಂತಿಮ ದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಕಚೇರಿಯ ಮುಂದೆ ಮೃತ ದೇಹವನ್ನು ಸಂಬಂಧಿಕರು ಇರಿಸಿದ್ದಾರೆ. ಸಂಬಂಧಿಕರು ಮತ್ತು ಬೆಂಬಲಿಗರ ಅಕ್ರಂದನ ಮುಗಿಲು ಮುಟ್ಟಿದೆ. ಕೆಲ ಗಂಟೆಗಳ ಕಾಲ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಬಳಿಕ ಚಾಮರಾಜಪೇಟೆಯ ಟಿಆರ್ ಮಿಲ್ ಕಡೆಗೆ ಅಂತಿಮ ಯಾತ್ರೆ ಹೊರಡಲಿದ್ದು, ಸಂಬಂಧಿಕರು, ಕುಟುಂಬಸ್ಥರು ಮಾತ್ರ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಲು ಪೊಲೀಸರು ಅನುಮತಿ ನೀಡಿದ್ದಾರೆ.
ಭಕ್ಷಿಗಾರ್ಡನ್ ದಾದಗಿರಿ ಹಾಗೂ ಕಾರ್ಪೋರೇಟರ್ಗಳ ಸಾವು !
ಛಲವಾದಿ ಪಾಳ್ಯದಲ್ಲಿರುವ ಕಚೇರಿ
ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ಅಗಿದ್ದ ರೇಖಾ ಕದಿರೇಶ್ ಫ್ಲವರ್ ಗಾರ್ಡನ್ನಲ್ಲಿ ವಾಸವಾಗಿದ್ದರು. ಕೊರೊನಾಸೋಂಕು ಹಿನ್ನೆಲೆಯಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ ಬೆಳಗ್ಗೆ 9.30 ರ ಸುಮಾರಿಗೆ ಛಲವಾದಿ ಪಾಳ್ಯದಲ್ಲಿರುವ ಕಚೇರಿಗೆ ರೇಖಾ ಬಂದಿದ್ದರು. ಕಚೇರಿಯಿಂದ ಹೊರಗೆ ಕರೆಸಿಕೊಳ್ಳುವ ಮುನ್ನ ಕಚೇರಿಯ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿದ್ದಾರೆ. ಹೊರಗೆ ಬಂದ ರೇಖಾ ಕದಿರೇಶ್ ಅವರನ್ನು ಬೆಳಗ್ಗೆ 10.30 ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗಾಯಗೊಂಡ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
Recommended Video
ಆಪ್ತರಿಂದಲೇ ಸ್ಕೆಚ್?
ರೇಖಾ ಕದಿರೇಶ್ ಒಬ್ಬರೇ ಕಚೇರಿಯಲ್ಲಿದ್ದರು. ಈ ವೇಳೆ ಕಚೇರಿ ಶುದ್ಧ ಗೊಳಿಸಲು ಒಬ್ಬ ವ್ಯಕ್ತಿಯಷ್ಟೇ ಇದ್ದ. ಈ ವೇಳೆ ಹೊರಗೆ ಕರೆಸಿದ ಮೂವರು ಕಿರಾತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ರೇಖಾ ಕದಿರೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರತರ ಪೆಟ್ಟಾಗಿರುವ ಕಾರಣ ಸಾವನ್ನಪ್ಪಿದ್ದಾರೆ. ಕದಿರೇಶ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸ್ಟೀಫನ್ ಮತ್ತು ಸಹಚರರು ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಗಂಡ ಹತ್ಯೆಯಾದ ಮೂರು ವರ್ಷದಲ್ಲೇ ಪತ್ನಿಯನ್ನು ಸಹ ಕೊಲೆ ಮಾಡಿದ್ದಾರೆ. ಕೊಲೆಗೆ ಟೆಂಡರ್ ಹಾಗೂ ಹಳೇ ದ್ವೇಷ ಕಾರಣ ಎಂದು ಹೇಳಲಾಗುತ್ತಿದೆ.