ತಿಪ್ಪಗೊಂಡನಹಳ್ಳಿ ಡ್ಯಾಂ ನೀರು ಬೆಂಗಳೂರಿಗೆ ಬರುವುದು ಮತ್ತಷ್ಟು ವಿಳಂಬ
ಬೆಂಗಳೂರು, ಜುಲೈ 26; ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನ, ನೀರು ಶುದ್ಧೀಕರಣ ಘಟಕ ಕಾಮಗಾರಿ ಪೂರ್ಣಗೊಳಿಸಲು ನೀಡಿದ್ದ ಗಡುವು ವಿಸ್ತರಣೆಯಾಗಿದೆ. ಕೋವಿಡ್ ಪರಿಸ್ಥಿತಿ, ಕಾರ್ಮಿಕರ ಕೊರತೆ ಹಿನ್ನಲೆಯಲ್ಲಿ 2022ರ ಮಾರ್ಚ್ ಅಥವ ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು ಜಲಮಂಡಳಿ 2021ರ ಡಿಸೆಂಬರ್ನಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿತ್ತು. ಆದರೆ ವಿವಿಧ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾಗುತ್ತಿದ್ದು, ಕಾಮಗಾರಿ ಪೂರ್ಣಗೊಳಿಸಲು ಗಡುವು ವಿಸ್ತರಣೆ ಮಾಡಲಾಗಿದೆ.
286 ಕೋಟಿ ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ
"ಸರ್ಕಾರ ಕೋವಿಡ್ ಲಾಕ್ಡೌನ್ ಘೋಷಣೆ ಮಾಡಿದ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಹೋದರು. ಸುಮಾರು 2 ತಿಂಗಳ ಶ್ರಮದ ಬಳಿಕ ಅವರನ್ನು ಒಟ್ಟುಗೂಡಿಸಿ ಕರೆತರಲಾಗಿದೆ. ಕಾಮಗಾರಿಯನ್ನು ಪುನಃ ಆರಂಭಿಸಲಾಗಿದೆ" ಎಂದು ಜಲಮಂಡಳಿ ಮುಖ್ಯ ಇಂಜಿನಿಯರ್ ಎಸ್. ವಿ. ರಮೇಶ್ ಹೇಳಿದ್ದಾರೆ.
ಜೀವಕಳೆಯಿಂದ ನಳನಳಿಸುತ್ತಿರುವ ತಿಪ್ಪಗೊಂಡನಹಳ್ಳಿ ಕೆರೆ
ಕಾಮಗಾರಿ ಸ್ಥಳದಲ್ಲಿ ಸುಮಾರು 400 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲವರಿಗೆ ಕೋವಿಡ್ ಸೋಂಕು ತಗುಲಿತ್ತು. ಮತ್ತೆ ಕೆಲವರು ತವರು ರಾಜ್ಯಕ್ಕೆ ವಾಪಸ್ ಹೋದರು. ಇದರಿಂದಾಗಿ ಸ್ಥಳದಲ್ಲಿ 50 ಜನರು ಮಾತ್ರ ಉಳಿದರು. ಈಗ ಕಾಮಗಾರಿ ಪುನಃ ಆರಂಭವಾಗಿದೆ.
ವಿದ್ಯುತ್ ಆಯಿತು, ಈಗ ದರ ಏರಿಕೆಗೆ ಜಲಮಂಡಳಿ ಚಿಂತನೆ
ಏನಿದು ಕಾಮಗಾರಿ?; ಒಂದು ಕಾಲದಲ್ಲಿ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಇದೀಗ ಹೂಳು ತುಂಬಿದೆ. ಜಲಾಶಯದ ಪುನಶ್ಚೇತನ ಮತ್ತು ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 3.34 ಟಿಎಂಸಿ ಅಡಿ ನೀರು ಸಂಗ್ರಹ ಮಾಡಬಹುದಾಗಿದೆ. ಈಗ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು ನಗರದ ಜನರಿಗೆ ಪ್ರತಿನಿತ್ಯ 110 ಎಂಎಲ್ಡಿ ನೀರು ಪೂರೈಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಸುಮಾರು 10 ಲಕ್ಷ ಜನರಿಗೆ ಅನುಕೂಲವಾಗಲಿದೆ.
2019ರ ಮಾರ್ಚ್ನಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಶುದ್ಧೀಕರಣ ಕಾಮಗಾರಿ ಆರಂಭಿಸಲಾಯಿತು. ಮೆಗಾ ಇಂಜಿನಿಯರಿಂಗ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಕಾಮಗಾರಿಯ ಗುತ್ತಿಗೆಯನ್ನು 291.57 ಕೋಟಿ ಮೊತ್ತದ ಟೆಂಡರ್ ಮೂಲಕ ಪಡೆದುಕೊಂಡಿತು.
ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳು ತೆಗೆಯುವ ಕೆಲಸ ನಡೆಯುತ್ತಲೇ ಇದೆ. ಆದರೆ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಕಾಮಗಾರಿ ಟೆಂಡರ್ ಪಡೆಯುವಾಗ 120 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು.
ತಿಪ್ಪಗೊಂಡನಹಳ್ಳಿ ಜಲಾಶಯದ ಅಕ್ಕ-ಪಕ್ಕದ ಜಾಗದಲ್ಲಿಯೇ ಟೆಂಟ್ ನಿರ್ಮಿಸಿಕೊಂಡು ಶುದ್ಧೀಕರಣ ಘಟಕದ ಕಾಮಗಾರಿ ನಡೆಸಲಾಗುತ್ತಿದೆ. ಜಲಾಶಯಕ್ಕೆ ಹರಿದು ಬರುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು 20 ಎಂಎಲ್ಡಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ನಡೆಯುವ ಸ್ಥಳಕ್ಕೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ.
ಅರ್ಕಾವತಿ, ಕುಮದ್ವತಿ ನದಿಗಳ ನೀರು; ಅರ್ಕಾವತಿ ಮತ್ತು ಕುಮದ್ವತಿ ನದಿಗಳ ನೀರು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಸಂಗ್ರಹವಾಗುತ್ತದೆ. ಜಲಾಶಯದ ನೀರನ್ನು ಸಂಸ್ಕರಣೆ ಮಾಡಿ ತಾವರೆಕೆರೆ ಪಂಪಿಂಗ್ ಸ್ಟೇಷನ್ಗೆ ಕಳಿಸಲಾಗುತ್ತದೆ. ಅಲ್ಲಿಂದ ಸುಮಾರು 22 ಕಿ. ಮೀ. ದೂರ ಇರುವ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವುದು ಯೋಜನೆಯಾಗಿದೆ.
ಬೆಂಗಳೂರು ನಗರಕ್ಕೆ ಈಗ ಕೆಆರ್ಎಸ್ನಿಂದ ಕಾವೇರಿ ನೀರು ಬರುತ್ತದೆ. ಅದಕ್ಕೂ ಮೊದಲು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ನೀರು ಪೂರೈಕೆಯಾಗುತ್ತಿತ್ತು. 1992ರಲ್ಲಿ ಜಲಾಶಯ ಮೊದಲ ಬಾರಿಗೆ ತುಂಬಿತ್ತು.
Recommended Video
ಈಗ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಅಪಾರ ಹೂಳು ತುಂಬಿಕೊಂಡಿದೆ. ಇದರಿಂದಾಗಿ 2012ರಿಂದ ಜಲಾಶಯದ ನೀರು ಬಳಕೆ ಸ್ಥಗಿತಗೊಳಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರನ್ನು ಶುದ್ಧೀಕರಿಸುವ ಕಾಮಗಾರಿ ಈಗ ನಡೆಯುತ್ತಿದೆ.