ಬೆಂಗಳೂರಿನಲ್ಲಿ ಕೊರೊನಾವೈರಸ್ ನಿರ್ವಹಣೆಗೆ ವಲಯವಾರು ಸಭೆ
ಬೆಂಗಳೂರು, ಜುಲೈ.21: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಆದೇಶವನ್ನು ನೀಡಿದ್ದಾರೆ. ಈ ಹಿನ್ನೆಲೆ ವಲಯವಾರು ಕೊವಿಡ್-19 ಸಭೆ ನಡೆಸಲಾಗುವುದು ಎಂದು ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
Recommended Video
ಬಿಬಿಎಂಪಿ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಪೂರ್ವ ವಲಯದ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್!
ಬೌರಿಂಗ್ ಆಸ್ಪತ್ರೆ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಬುಧವಾರದಿಂದ ಬೆಂಗಳೂರಿನಲ್ಲಿ ವಲಯವಾರು ಕೊವಿಡ್-19 ಸಭೆಯನ್ನು ನಡೆಸಲಾಗುತ್ತದೆ ಎಂದರು. ಶಾಸಕರು, ಸಂಸದರು, ಜಂಟಿ ಆಯುಕ್ತರ ಜೊತೆಗೆ ಕೊರೊನಾವೈರಸ್ ಹರಡುವಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
250 ಬೆಡ್ ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲು:
ಬೌರಿಂಗ್ ಆಸ್ಪತ್ರೆಯಲ್ಲಿ ಒಟ್ಟು 650ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದ್ದು, ಈ ಪೈಕಿ 250 ಹಾಸಿಗೆಗಳನ್ನು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಮೀಸಲು ಇರಿಸಲಾಗಿದೆ. ಈ 250 ಬೆಡ್ ಗಳಲ್ಲಿ 150 ಆಕ್ಸಿಜನ್ ಸಹಿತ ಬೆಡ್ ಗಳು ಸೇರಿವೆ. ಶಿವಾಜಿನಗರ, ಶಾಂತಿನಗರ, ಪುಲಕೇಶಿನಗರ ಮತ್ತು ಸರ್ವಜ್ಞನಗರಗಳು ಹೆಚ್ಚು ಜನನಿಬಿಡ ಪ್ರದೇಶಗಳಾಗಿದ್ದು, ಈ ನಾಲ್ಕು ಕ್ಷೇತ್ರಗಳ ಕೊವಿಡ್ ಕೇರ್ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.