ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ: ಸರ್ಕಾರದ ಉತ್ತರ ಕೇಳಿದ ಹೈಕೋರ್ಟ್
ಬೆಂಗಳೂರು, ಸೆ.24: ಶಾಲಾ ಮಕ್ಕಳ ಬ್ಯಾಗ್ನ ತೂಕ ಇಳಿಕೆಗೆ ತಕ್ಷಣ ಕ್ರಮ ಕೈಗೊಳ್ಳುವ ಸಂಬಂಧ ಹೈಕೋರ್ಟ್ ಸರ್ಕಾರದಿಂದ ಉತ್ತರ ಬಯಸಿದೆ.
ಬ್ಯಾಗ್ ತೂಕ ಇಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಬಳಿಕ ಹೈಕೋರ್ಟ್ ಸಲ್ಲಿಸಿರುವ ಅರ್ಜಿಯನ್ನು ಪ್ರತಿವಾದಿಗಳಾದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ನೋಂದಾಯಿತ ಖಾಸಗಿ ಅನುದಾನರಹಿತ ಶಾಲೆಗಳ ಸಂಘಕ್ಕೆ (ರುಪ್ಸಾ) ನೋಟಿಸ್ ಜಾರಿಗೊಳಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರೂ ಆಗಿರುವ ತುಮಕೂರಿನ ವಕೀಲ ಎಲ್. ರಮೇಶ್ ನಾಯಕ್ ವಾದ ಮಂಡಿಸಿ, ರಾಜ್ಯದಲ್ಲಿ ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಕಾನೂನು, ನಿಯಮಗಳಿವೆ. ಸರ್ಕಾರವೂ ಕಾಲ ಕಾಲಕ್ಕೆ ಈ ಬಗ್ಗೆ ಅಧಿಸೂಚನೆ, ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ. ಆದರೆ, ಶಾಲೆಗಳಲ್ಲಿ ಮಕ್ಕಳು ತರುವ ಬ್ಯಾಗ್ಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಿಯಮವಿಲ್ಲ ಎಂದರು.
ಆರೋಗ್ಯದ ಮೇಲೆ ಪರಿಣಾಮ: ಅಲ್ಲದೆ, ಆರೋಗ್ಯ ತಜ್ಞರ ಅಧ್ಯಯನಗಳ ಪ್ರಕಾರ, ಭಾರಿ ತೂಕದ ಶಾಲಾ ಬ್ಯಾಗ್ಗಳು ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜತೆಗೆ, ಬ್ಯಾಗ್ ಹೊರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುವುದಷ್ಟೇ ಅಲ್ಲದೆ, ಅವರ ಬೆನ್ನು ಮತ್ತು ಕಾಲುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ, ಬ್ಯಾಗ್ಗಳ ತೂಕದ ಮಿತಿ ನಿಗದಿಪಡಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
2006ರಲ್ಲಿ ರಾಜ್ಯಸಭೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿಗೊಳಿಸುವ ಕುರಿತಂತೆ ವಿಧೇಯಕ ಮಂಡಿಸಲಾಗಿತ್ತಾದರೂ, ನಂತರ ಅದನ್ನು ಕೈಬಿಡಲಾಗಿದೆ. ಆದರೆ, ಕೇಂದ್ರ ಸರ್ಕಾರದ 'ಶಾಲಾ ಬ್ಯಾಗ್ ನೀತಿ-2020'ರಲ್ಲಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ಗಳಿಗೆ ನಿರ್ದಿಷ್ಟ ತೂಕ ಮಿತಿ ಇರಬೇಕೆಂಬ ನಿಯಮವಿದೆ. ಆದರೆ, ಆ ನಿಯಮ ಪಾಲನೆಯಾಗುತ್ತಿಲ್ಲ. ಶಾಲಾ ಬ್ಯಾಗ್ಗಳ ತೂಕ ಇಳಿಕೆ ಮಾಡದ ಕಾರಣ, ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮೂವರು
ನ್ಯಾಯಮೂರ್ತಿಗಳ
ಸೇವೆ
ಕಾಯಂ:
ಹೈಕೋರ್ಟ್ನಲ್ಲಿ
ಹಾಲಿ
ಹೆಚ್ಚುವರಿ
ನ್ಯಾಯಮೂರ್ತಿಗಳಾಗಿ
ಸೇವೆ
ಸಲ್ಲಿಸುತ್ತಿರುವ
ಎಂ.ಜಿ.ಎಸ್.
ಕಮಲ್,
ರಾಜೇಂದ್ರ
ಬಾದಾಮಿಕರ್
ಮತ್ತು
ಖಾಜಿ
ಜೈಬುನ್ನೀಸಾ
ಮೊಹಿದ್ದೀನ್
ಸೇವೆಯನ್ನು
ಕಾಯಂಗೊಳಿಸಿ
ಕೇಂದ್ರ
ಸರ್ಕಾರ
ಆದೇಶ
ಹೊರಡಿಸಿದೆ.
ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನದಂತೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಮೂವರು ನ್ಯಾಯಮೂರ್ತಿಗಳ ಸೇವೆ ಕಾಯಂಗೊಳಿಸಿ ಆದೇಶಿಸಿದೆ.
ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ 2021ರ ಮಾ.17, ನ್ಯಾಯಮೂರ್ತಿಗಳಾದ ರಾಜೇಂದ್ರ ಬಾದಾಮಿಕರ್ ಮತ್ತು ಖಾಜಿ ಜೈಬುನ್ನೀಸಾ ಮೊಹಿದ್ದೀನ್ 2021ರ ಮಾ.25ರಂದು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು.
ಜಿಲ್ಲಾನ್ಯಾಯಾಧೀಶರಾಗಿ ಸುದೀರ್ಘ ಸೇವೆ ನಂತರ ಮೂವರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿತ್ತು. ಸಿಜೆಐ ಯು.ಯು.ಲಲಿತ್ ಅಧ್ಯಕ್ಷತೆಯಲ್ಲಿ ಸೆ.7ರಂದು ಸುಪ್ರೀಂಕೋರ್ಟ್ನ ಕೊಲಿಜಿಯಂ ನಡೆದ ಸಭೆಯಲ್ಲಿ ಈ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಕಾಯಂಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು.