ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳಿಗೆ ಜವಾಬ್ದಾರಿ ಮರು ಹಂಚಿಕೆ
ಬೆಂಗಳೂರು, ಅಕ್ಟೋಬರ್ 18: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವಾಲಯದ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಮರು ಹಂಚಿಕೆ ಮಾಡಲಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಮೂರನೇ ಬಾರಿಗೆ ಅಧಿಕಾರಿಗಳಿಗೆ ಜವಾಬ್ದಾರಿ ಮರು ಹಂಚಿಕೆ ಮಾಡಲಾಗಿದೆ. ಹಿಂದಿನ ಆದೇಶ ಪರಿಷ್ಕರಣೆ ಮಾಡಿ ಮರು ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಹೊರತುಪಡಿಸಿ ರಾಜ್ಯದ ಎಲ್ಲಾ ಸಂಸದ ಮತ್ತು ಶಾಸಕರ ಕ್ಷೇತ್ರದ ಅಭಿವೃದ್ಧಿ ವಿಷಯಗಳ ಜವಾಬ್ದಾರಿ ಉಪ ಕಾರ್ಯದರ್ಶಿ ರವಿ ಎ.ಎಸ್. ವಹಿಸಿಕೊಟ್ಟಿದ್ದಾರೆ.
ಕಷ್ಟ ಹೇಳಿಕೊಂಡ ಶಾಸಕ: 'ಸುಮ್ಮನಿರ್ರಿ' ಎಂದ ಯಡಿಯೂರಪ್ಪ
ಶಿವಮೊಗ್ಗ ಸಂಸದ ಮತ್ತು ಶಾಸಕರ ಕ್ಷೇತ್ರಗಳ ಅಭಿವೃದ್ಧಿ ವಿಷಯ ನೋಡಿಕೊಳ್ಳುವ ಜವಾಬ್ದಾರಿ ಸಿಎಂ ಜಂಟಿ ಕಾರ್ಯದರ್ಶಿ ಎಂ.ಕೆ. ಶ್ರೀರಂಗಯ್ಯಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದಲ್ಲಿ ಶಿವಮೊಗ್ಗ ಸಂಸದರು ಮತ್ತು ಶಿವಮೊಗ್ಗ ಜಿಲ್ಲೆಯ ಶಾಸಕರ ಕೆಲಸಗಳಿಗೆ ಪ್ರತ್ಯೇಕ ಅಧಿಕಾರಿ ನೇಮಿಸಲಾಗಿದೆ.
ಉಳಿದ ಎಲ್ಲಾ ಸಂಸದರು ಮತ್ತು ಎಲ್ಲಾ ಜಿಲ್ಲೆಗಳ ಶಾಸಕರ ಕೆಲಗಳಿಗೆ ಒಬ್ಬ ಅಧಿಕಾರಿ, ತಮ್ಮ ಪುತ್ರನ ಕ್ಷೇತ್ರ ಮತ್ತು ತವರು ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಪ್ರತ್ಯೇಕ ಅಧಿಕಾರಿಯನ್ನು ಸಿಎಂ ಮೀಸಲಿಟ್ಟಿರುವುದು ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ.
ಸಿಎಂ ತವರು ಪ್ರೇಮವೋ ಅಥವಾ ಪುತ್ರ ವ್ಯಾಮೋಹವೋ ಎನ್ನುವ ಪ್ರಶ್ನೆ ಉದ್ಭವವಾಗಿದೆ.ಇನ್ನೊಂದೆಡೆ ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲ ಎನ್ನುವ ಮೂಲಕ ರೈತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮತ್ತೊಂದು ಕಡೆ ಮಹಾದಾಯಿ, ಕಳಸಾ ಬಂಡೂರಿ ಹೋರಾಟಗಾರರು ಬೆಂಗಳೂರಿಗೆ ತಮ್ಮ ಕಷ್ಟ ಹೇಳಿಕೊಳ್ಳಲು ಬಂದಿದ್ದರೆ, ಸಿಎಂ ಮಾತ್ರ ಮಹಾರಾಷ್ಟ್ರಕ್ಕೆ ಹೋಗಿ ಕರ್ನಾಟಕದ ನೀರು ಮಹಾರಾಷ್ಟ್ರಕ್ಕೆ ಹರಿಸುತ್ತೇವೆ ಎಂದು ಭರವಸೆ ನೀಡಿ ಬಂದಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.