ರಾಜ್ಯದಲ್ಲಿನ ದಾಖಲೆ ಮಳೆಗೆ ಒಂದು ಸಾವು; ಹಲವೆಡೆ ತೊಂದರೆ
ಕರ್ನಾಟಕದಲ್ಲಿ ಮಹಾ ಮಳೆ. ಕಳೆದ 10 ವರ್ಷಗಳಲ್ಲೇ ದಾಖಲೆಯ ಮಳೆ. ಮೈಸೂರಿನಲ್ಲಿ ಒಂದು ಸಾವು.
ಬೆಂಗಳೂರು, ಆಗಸ್ಟ್ 15: ಸ್ವಾತಂತ್ರ್ಯೋತ್ಸವದ ಹಿಂದಿನ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗಿರುವುದು ಕಳೆದ ಹತ್ತು ವರ್ಷಗಳ ನಂತರ ಸುರಿದ ದಾಖಲೆಯ ವರ್ಷಧಾರೆಯೆಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು: ಅಹೋರಾತ್ರಿ ಮಳೆಗೆ ಜನಜೀವನ ಅಸ್ತವ್ಯಸ್ತ
ಬೆಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ಚಾಮರಾಜ ನಗರ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆ ಸೇರಿದಂತೆ ಕೆಲವಾರು ಭಾಗಗಳಲ್ಲಿ ಒಟ್ಟು 14 ಸೆಂ.ಮೀ. ಮಳೆಯಾಗಿದ್ದು, ಇಂದೂ (ಆಗಸ್ಟ್ 15) ಸಹ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಆಗಸ್ಟ್ 15ರಂದೂ ಸುಮಾರು 13 ಸೆಂ.ಮೀ. ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇನ್ನು, ಮೈಸೂರಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬ ಮೃತನಾಗಿದ್ದಾನೆ. ನಗರದ ಗಾಂಧಿ ಲಿಡ್ಕರ್ ಕಾಲೋನಿಯಲ್ಲಿ ಈ ಘಟನೆ ಜರುಗಿದೆ. ಮನೆಯ ಗೋಡೆ ಕುಸಿದುಬಿದ್ದಿದ್ದರಿಂದಾಗಿ ಮಗ್ಗಿ (40) ಎಂಬ ವ್ಯಕ್ತಿ ಅಸುನೀಗಿದ್ದಾನೆ.