ನಿಲೇಕಣಿಯಂಥ ಅಭ್ಯರ್ಥಿ ಸಿಕ್ಕಿರುವುದು ಪುಣ್ಯ : ಅಂಬಿ
ಬೆಂಗಳೂರು, ಏ. 13 : "ನಂದನ್ ಅವರಂತಹ ಅಭ್ಯರ್ಥಿ ಸಿಕ್ಕಿರೋದು ನಮ್ಮ ಪುಣ್ಯ. ಇವರು ಸುಮ್ನೆ ಮಾತಾಡೋರಲ್ಲ, ಕೆಲ್ಸ ಮಾಡಿ ತೋರಿಸುವಂಥ ವ್ಯಕ್ತಿ. ನಿಲೇಕಣಿಯವರು ಪ್ರಾಮಾಣಿಕ ವ್ಯಕ್ತಿ, ಬುದ್ಧಿವಂತರು, ಇಂಥಾ ವ್ಯಕ್ತಿ ರಾಜಕೀಯಕ್ಕೆ ಬಂದಿರೋದು ಒಳ್ಳೇದು. ನಾನು ಇಂದು ಈ ಮಟ್ಟಕ್ಕೆ ಬೆಳೀಬೇಕು ಅಂದ್ರೆ ಶ್ರೀನಗರದ ನಿಮ್ಮೆಲ್ಲರ ಆಶೀರ್ವಾದವೇ ಕಾರಣ. ನನಗೆ ನೀಡಿದ ಪ್ರೀತಿ, ವಿಶ್ವಾಸ, ಗೌರವವನ್ನು ಇವರಿಗೂ ನೀಡಿ..."
ಕೆಲ ದಿನಗಳ ಹಿಂದಷ್ಟೇ ಮಲೇಷ್ಯಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ವಾಪಸ್ ಬಂದಿರುವ ಚಿತ್ರನಟ ಅಂಬರೀಶ್, ಹೀಗೆ ಭಾನುವಾರ ಪಕ್ಕಾ ಫಿಲ್ಮಿ ಸ್ಟೈಲಲ್ಲಿ ಮೈಕೆತ್ತಿಕೊಂಡು ಶ್ರೀನಗರದ ರಸ್ತೆಗಳಲ್ಲಿ ಡೈಲಾಗ್ ಹೊಡೆಯುತ್ತಿದ್ದರೆ ಅಭಿಮಾನಿಗಳಿಂದ ಶಿಳ್ಳೆಗಳ ಸುರಿಮಳೆ. ಈ ಮಾತುಗಳನ್ನು ಕೇಳುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮೂಕವಿಸ್ಮಿತರಾದಂತೆ ಮಂದಸ್ಮಿತರಾಗಿ ನೋಡುತ್ತಿದ್ದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]
ಶ್ರೀನಗರ ಬಸ್ ನಿಲ್ದಾಣದ ಬಳಿ ನಡೆಸಲಾದ ರೋಡ್ ಶೋನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಡಾ. ಬಿ.ಕೆ. ಚಂದ್ರಶೇಖರ್ ಅವರು ಕೂಡ ಭಾಗವಹಿಸಿದ್ದರು. ಭಾನುವಾರ ನಡೆದ ರೋಡ್ ಶೋನಲ್ಲಿ ಅಂಬಿ ಮತ್ತು ನಂದನ್ ಆಡಿದ ಮಾತುಗಳೇನು ಮುಂದೆ ಓದಿರಿ.
ನನಗೆ ನೀಡಿದ ಗೌರವ, ಪ್ರೀತಿ ಅವರಿಗೂ ನೀಡಿ
"ನಂದನ್ ನಿಲೇಕಣಿ ನುಡಿದಂತೆ ನಡೆಯುವ ಮನುಷ್ಯ. ನನಗೆ ನೀಡಿದ ಗೌರವ, ಪ್ರೀತಿಯನ್ನು ಅವರಿಗೂ ನೀಡಿ" ಎಂದು ಮೊನ್ನೆಯಷ್ಟೇ ಸಿಂಗಪುರದಿಂದ ಚೇತರಿಸಿಕೊಂಡು ವಾಪಸ್ ಬಂದಿರುವ ಅಂಬರೀಶ್, ಅಷ್ಟು ದಿನ ಹಾಸಿಗೆ ಮೇಲೆ ಮಲಗಿದ್ದೇ ಸುಳ್ಳೆಂಬಂತೆ ತುಂಬು ಉತ್ಸಾಹ, ಹುಮ್ಮಸ್ಸಿನಿಂದ ನಂದನ್ ಪರ ಪ್ರಚಾರ ನಡೆಸಿದರು.
ನಂದನ್ ಸಾಧನೆಗೆ ಮತ ನೀಡಿರಿ : ಅಂಬರೀಶ್
"ನಾನು ಮಂತ್ರಿಯಾಗಿ ನಿಮ್ಮಲ್ಲಿ ಮತ ನೀಡಿ ಎಂದು ಕೇಳಲು ಬಂದಿಲ್ಲ, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಇಷ್ಟು ಸಾಧನೆ ಮಾಡಿರುವ ವ್ಯಕ್ತಿಗೆ ಮತ ನೀಡಿದರೆ, ಅವರು ಕ್ಷೇತ್ರಾಭಿವೃದ್ಧಿ ಮಾಡುತ್ತಾರೆ ಎಂಬ ವಿಶ್ವಾಸದಿಂದ ಕೇಳ್ತಾ ಇದ್ದೀನಿ" ಎಂದು ಮಂಡ್ಯದ ಗಂಡು ಜನರಲ್ಲಿ ಮನವಿ ಮಾಡಿಕೊಂಡರು.
ನಿಲೇಕಣಿ ರಾಜಕೀಯ ಪ್ರವೇಶ ದೇಶಕ್ಕೆ ಒಳ್ಳೆಯದು
"ಈಗಾಗಲೇ ಇನ್ಫೋಸಿಸ್, ಬಿಎಟಿಎಫ್, ಆಧಾರ್ ಹೀಗೆ, ನಂದನ್ ನಿಲೇಕಣಿಯವರು ಯಾವ ಕೆಲಸವನ್ನೇ ಮಾಡ್ಲಿ, ಅದನ್ನು ಯಶಸ್ವಿಯಾಗಿ ಮಾಡ್ತಾರೆ. ಅವರ ರಾಜಕೀಯ ಪ್ರವೇಶ, ನಮ್ಮ ಕ್ಷೇತ್ರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಒಳ್ಳೆಯದು" ಎಂದು ಅಂಬರೀಶ್ ಪಂಚಿಂಗ್ ಡೈಲಾಗ್ ಹೊಡೆದರು.
ಅಂಬಿಯಿಂದ ನಂದನ್ ಪ್ರಚಾರಕ್ಕೆ ಭೀಮಬಲ
"ಇದೀಗ ಚೇತರಿಸಿಕೊಂಡು ಬಂದಿರುವ ಅಂಬರೀಶ್ ಇಷ್ಟೊಂದು ವಿಶ್ವಾಸವಿರಿಸಿ, ಪ್ರಚಾರಕ್ಕೆ ಬಂದಿರುವುದರಿಂದ ತಮಗೆ ಭೀಮಬಲ ಬಂದಂತಾಗಿದೆ, ಅವರ ಉತ್ಸಾಹದಿಂದ ತಮಗೆ ಭರವಸೆ ಮೂಡಿದೆ. ಅಂಬರೀಶ್ ಅವರಿಗೆ ಆಭಾರಿಯಾಗಿದ್ದೇನೆ, ಜನರು ಅವರ ಮೇಲಿಟ್ಟ ಅಭಿಮಾನ ಕಂಡು ಸಂತೋಷವಾಗಿದೆ. ಅವರ ಅಭಿಮಾನಿಗಳು ನನ್ನ ಸಾಧನೆಯನ್ನು ಗುರುತಿಸಿ, ಮತ ನೀಡುತ್ತಾರೆ" ಎಂಬ ಭರವಸೆಯನ್ನು ನಂದನ್ ವ್ಯಕ್ತಪಡಿಸಿದರು.
ಅನಂತ್ ವಿರುದ್ಧ ನಿಲೇಕಣಿ ಮತ ಸಮರ
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗಿಳಿದಿರುವ ಐಟಿ ದಿಗ್ಗಜ ನಂದನ್ ನಿಲೇಕಣಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ಐದು ಬಾರಿ ಸಂಸದರಾಗಿರುವ ಅನಂತ್ ಕುಮಾರ್ ಅವರನ್ನು ಎದುರಿಸುತ್ತಿದ್ದಾರೆ. ಜೊತೆಗೆ, ಗೆದ್ದೇ ಗೆಲ್ಲುತ್ತೇನೆಂಬ ಹುಮ್ಮಸ್ಸಿನಲ್ಲಿ ಪ್ರಮೋದ್ ಮುತಾಲಿಕ್ ಅವರು ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಭಾರೀ ಮಹತ್ವ
ಆಮ್ ಆದ್ಮಿ ಪಕ್ಷದಿಂದ ನೀನಾ ನಾಯಕ್ ಮತ್ತು ಜಾತ್ಯತೀತ ಜನತಾದಳದಿಂದ ರೂತ್ ಮನೋರಮಾ ಕೂಡ ಪ್ರಬಲ ಸ್ಪರ್ಧೆ ಒಡ್ಡುತ್ತಿರುವುದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ಭಾರೀ ಮಹತ್ವ ಪಡೆದುಕೊಂಡಿದೆ. ಆದರೆ, ಈ ತುರುಸಿನ ಸ್ಪರ್ಧೆಯಲ್ಲಿ ಜಯಶಾಲಿಯಾಗುವ ವಿಶ್ವಾಸವನ್ನು ನಂದನ್ ಹೊಂದಿದ್ದಾರೆ.