ಅನರ್ಹತೆಗೆ ಹೆದರುವುದಿಲ್ಲ ಎಂದು ಅತೃಪ್ತ ಶಾಸಕರ ಖಡಕ್ ಸಂದೇಶ
Recommended Video
ಬೆಂಗಳೂರು, ಜುಲೈ 26: ಮೂವರು ಶಾಸಕರನ್ನು ಅನರ್ಹಗೊಳಿಸುವ ಮೂಲಕ ತಮ್ಮನ್ನು ಬೆದರಿಸಿ ರಾಜೀನಾಮೆ ವಾಪಸ್ ಪಡೆದುಕೊಳ್ಳುವಂತೆ ಮಾಡುವ ತಂತ್ರಕ್ಕೆ ಬಾಗುವುದಿಲ್ಲ ಎಂದು ಉಳಿದ 13 ಶಾಸಕರು ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ನಾವೆಲ್ಲರೂ ಒಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ. ಅನರ್ಹತೆಯ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.
ಉಳಿದ ಶಾಸಕರನ್ನು ಬೆದರಿಸಲು ಅನರ್ಹತೆ ಅಸ್ತ್ರ ಪ್ರಯೋಗ: ಬಾಲಚಂದ್ರ ಜಾರಕಿಹೊಳಿ ಅರೋಪ
'ಟಿವಿ 9' ವಾಹಿನಿ ಜತೆ ದೂರವಾಣಿ ಮೂಲಕ ಮಾತನಾಡಿದ ಎಚ್. ವಿಶ್ವನಾಥ್ ಅವರು, ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರೂ ತಮ್ಮ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ತಿಳಿಸಿದ್ದಾರೆ.
'ಅನರ್ಹಗೊಳಿಸುವ ಮೂಲಕ ಹೆದರಲು ನಾವ್ಯಾರೂ ಕಾಲೇಜು ಹುಡುಗರಲ್ಲ. ನಾವೆಲ್ಲರೂ ಸಾಕಷ್ಟು ಅನುಭವಿಗಳಿದ್ದೇವೆ. ರಾಜಕೀಯದಲ್ಲಿ ಇಂತಹ ಸನ್ನಿವೇಶಗಳನ್ನು ಕಂಡಿದ್ದೇವೆ. ಒಗ್ಗಟ್ಟಾಗಿದ್ದು ಎಲ್ಲವನ್ನೂ ಎದುರಿಸಲು ಸನ್ನದ್ಧರಾಗಿದ್ದೇವೆ. ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಮಗೆ ರಾಜಕೀಯ ಹೊಸದಲ್ಲ. ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ. ಯಾವ ಕಾರಣಕ್ಕೂ ವಾಪಸ್ ಬರುವುದಿಲ್ಲ. 2-3 ದಿನಗಳಲ್ಲಿ ಬೆಂಗಳೂರಿಗೆ ಬರಲಿದ್ದೇವೆ ಎಂದು ಹೇಳಿದ್ದಾರೆ.
ಇಂದು ಸುಪ್ರೀಂಕೋರ್ಟ್ಗೆ ಮೂರು ಅನರ್ಹ ಶಾಸಕರ ಅರ್ಜಿ ಸಲ್ಲಿಕೆ?
ರಾಜೀನಾಮೆ ನೀಡಿರುವ 16 ಶಾಸಕರ ಪೈಕಿ ಮೂವರು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ಆದೇಶ ಹೊರಡಿಸಿದ್ದರು. ಶಾಸಕರನ್ನು ಅನರ್ಹಗೊಳಿಸುವ ಮೂಲಕ ಉಳಿದ ಶಾಸಕರಲ್ಲಿ ಭಯ ಹುಟ್ಟಿಸಲು ಮತ್ತು ಒಡಕು ಮೂಡಿಸಲು ಸಾಧ್ಯ ಎನ್ನುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರವಾಗಿದೆ. ಶಾಸಕರು ಭಯದಿಂದ ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಿದೆ.