ಐವರ ಆತ್ಮಹತ್ಯೆ ಪ್ರಕರಣ: ಹಣಕಾಸಿನ ಜಗಳ ಇಡೀ ಕುಟುಂಬದ ಸರ್ವನಾಶಕ್ಕೆ ನಾಂದಿ ಹಾಡಿತೇ?
ಬೆಂಗಳೂರು, ಸೆ. 18: ತಿಗಳರ ಪಾಳ್ಯದಲ್ಲಿ ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಅಸಲಿ ವೃತ್ತಾಂತ ಹೊರ ಬಿದ್ದಿವೆ. ಹಣದ ವಿಚಾರವಾಗಿ ಆರಂಭವಾಗಿರುವ ಕೌಟುಂಬಿಕ ಕಲಹಗಳು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿದೆ. ಇನ್ನು ಘಟನೆ ಸಂಬಂಧ ಮನೆ ಮಾಲೀಕ ಶಂಕರ್ ನೀಡಿರುವ ದೂರಿನಲ್ಲಿ ತನ್ನ ಪತ್ನಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಬ್ಯಾಡರಹಳ್ಳಿಯ ತಿಗಳರ ಪಾಳ್ಯದಲ್ಲಿ ಶುಕ್ರವಾರ ರಾತ್ರಿ ಬೆಳಕಿಗೆ ಬಂದ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕರ ಪತ್ರಿಕೆ ಎಂಬ ವಾರಪತ್ರಿಕೆ ಸಂಪಾದಕ ಶಂಕರ್ ಅವರ ಪತ್ನಿ ಭಾರತಿ (50), ಪುತ್ರಿ ಸಿಂಚನಾ (33), ಸಿಂಧೂರಾಣಿ (30), ಪುತ್ರ ಮಧು ಸಾಗರ್ (26), ಹಾಗೂ 9 ತಿಂಗಳ ಹಸು ಗೂಸು ಸಾವನ್ನಪ್ಪಿದೆ. ಮೃತರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಮಧ್ಯಾಹ್ನದ ಬಳಿಕ ಮೃತದೇಹಗಳನ್ನು ಶಂಕರ್ ಅವರಿಗೆ ಹಸ್ತಾಂತರಿಸಲಿದ್ದಾರೆ.
ಸೋಮವಾರ ಸ್ವಿಗ್ಗಿಯಲ್ಲಿ ಫುಡ್ ಡೆಲವರಿ ಪಡೆದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಸೋಮವಾರ ಸಂಜೆ ಮೂವರು ಸಾವನ್ನಪ್ಪಿದ್ದಾರೆ. ತಾಯಿ ಮತ್ತು ಅಕ್ಕಂದಿರ ದಾರುಣ ಸಾವನ್ನು ಸಹಿಸಿಕೊಂಡು ಎರಡು ದಿನ ಮಟ್ಟಿಗೆ ಜೀವ ಉಳಿಸಿಕೊಂಡು ಮನೆ ಬಿಟ್ಟು ಹೋಗಿದ್ದ ತಂದೆಗೆ ವಾಪಸು ಬರುವಂತೆ ಮಧುಸಾಗರ್ ಸಂದೇಶ ಕಳಿಸಿದ್ದಾನೆ. ಸಾವಿನಲ್ಲಿ ಮಗುವೊಂದರ ಜೀವ ಉಳಿಸಿ ಆತ ಸಹ ಆತ್ಮಹತ್ಯೆಗೆ ಶರಣಾಗಿರುವ ಸಂಗತಿ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
Breaking: ಬೆಂಗಳೂರಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ
ಇದರ ಬೆನ್ನಲ್ಲೇ ಘಟನೆ ಕುರಿತು ಶಂಕರ್ ನೀಡಿರುವ ದೂರಿನಲ್ಲಿ "ಹಣ- ಆಸ್ತಿ- ಕೌಟುಂಬಿಕ ಜಗಳ"ಗಳು ಇಡೀ ಕುಟುಂಬವನ್ನು ಸರ್ವನಾಶ ಮಾಡಿದ ಚಿತ್ರಣವನ್ನು ಬಿಚ್ಚಿಟ್ಟಿದೆ. ಶಾಸಕರ ಪತ್ರಿಕೆ ವಾರ ಪತ್ರಿಕೆ ಸಂಪಾದಕರಾಗಿದ್ದ ಶಂಕರ್, ನನ್ನ ಎಲ್ಲಾ ಆಸ್ತಿ, ಹಣ ಹೆಂಡತಿ ಮತ್ತು ಮಗನಿಗೆ ನೀಡಿದ್ದೆ. ನನಗೆ ಹಣ ಬೇಕಾದಾಗ ಅವರನ್ನು ಕೇಳಿ ಪಡೆಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಉಲ್ಲೇಖಿಸಿದ್ದಾರೆ. ತವರು ಮನೆಗೆ ಬಂದಿದ್ದ ಹೆಣ್ಣು ಮಕ್ಕಳ ವಿಚಾರವಾಗಿ ಕುಟುಂಬದಲ್ಲಿ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಹೆಣ್ಣು ಮಕ್ಕಳನ್ನು ಗಂಡಂದಿರ ಮನೆಗೆ ಕಳುಹಿಸುವಂತೆ ಶಂಕರ್ ತನ್ನ ಪತ್ನಿಗೆ ಹೇಳಿದ್ದ.
ಆದರೆ, ಪತ್ನಿ ಭಾರತಿ ತನ್ನ ಬಳಿಯೇ ಇರುವಂತೆ ಜಗಳ ತೆಗೆದಿದ್ದರು. ಹೆಣ್ಣು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಹಾಳು ಮಾಡುತ್ತಿದ್ದೀಯ ಎಂದು ಹೆಂಡತಿಯನ್ನು ಶಂಕರ್ ಬೈದಿದ್ದ. ಇದಲ್ಲದೇ ಬಾರ್ ತೆರೆಯುವ ವಿಚಾರವಾಗಿ ಮಗ ಮಧು ಸಾಗರ್ ಮತ್ತು ತಂದೆ ಶಂಕರ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಜಗಳ ಮಾಡಿಕೊಂಡಿದ್ದರು. ಬಾರ್ ಓಪನ್ ಮಾಡಲು 20 ಲಕ್ಷ ರೂ. ಹಣ ಕೊಟ್ಟು ನೋಂದಣಿ ಮಾಡಿಸಿದ್ದ ಮಧು ಸಾಗರ್ ನೋಂದಣಿಗೆ ಸಹಿ ಹಾಕುವಂತೆ ತಂದೆಯನ್ನು ಪೀಡಿಸಿದ್ದ. ಇದಕ್ಕೆ ನಿರಾಕರಿಸಿದ್ದ ಶಂಕರ್. ಹೀಗೆ ನಾನಾ ವಿಚಾರಗಳಲ್ಲಿ ಕುಟುಂಬದವರೇ ಪದೇ ಪದೇ ಜಗಳ ಮಾಡಿಕೊಳ್ಳುತ್ತಿದ್ದರು. ಕಳೆದ ಭಾನುವಾರ ಈ ಎಲ್ಲಾ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆದು ಶಂಕರ್ ಮನೆ ಬಿಟ್ಟು ಹೊರಗೆ ಹೋಗಿದ್ದರು.
ಆಶ್ರಮ ಕಟ್ಟಿಸಲು ಹಣ ಕೇಳಿದ್ದ ಶಂಕರ್ : ಎಲ್ಲಾ ವಿವಾದಗಳ ನಡುವೆ ಆಶ್ರಮ ಕಟ್ಟಿಸಲು ಮುಂದಾಗಿದ್ದ ಶಂಕರ್ ಹತ್ತು ಲಕ್ಷ ರೂ. ಹಣ ನೀಡುವಂತೆ ಪತ್ನಿಯನ್ನು ಕೇಳಿದ್ದರು. ಹಣ ವಿಚಾರವಾಗಿ ಜಗಳ ನಡೆದ ಬಳಿಕ ಮನೆ ಬಿಟ್ಟು ಹೊರಗೆ ಹೋಗಿದ್ದ ಶಂಕರ್ ವಾಪಸು ಬಂದಿರಲಿಲ್ಲ. ಭಾನುವಾರ ಸಂಜೆ 4.30 ರ ಸುಮಾರಿಗೆ ಶಂಕರ್ ಗೆ ವಾಟ್ಸಪ್ ಮೆಸೇಜ್ ಮಾಡಿ, ಹತ್ತು ಲಕ್ಷ ರೂ. ಹಣ ನೀಡುತ್ತೇನೆ ಬಾ ಪಪ್ಪಾ ಎಂದು ಸಂದೇಶ ಕಳಿಸಿದ್ದಾರೆ. ಮನೆಯ ಬೆಳವಣಿಗೆ ನೋಡಿ ಶಂಕರ್ ಯಾವುದಕ್ಕೂಉತ್ತರ ನೀಡಿರಲಿಲ್ಲ.
ದುರ್ವಿದಿಯೇ ಮನೆಗೆ ಹೋದ್ರೂ ನೋಡಲಿಲ್ಲ: ಇನ್ನು ಗುರುವಾರ ಮನೆ ಸಮೀಪ ಹೋಗಿದ್ದ ಶಂಕರ್ ಯಾರೂ ಇಲ್ಲದಿರುವುದನ್ನು ಗಮನಿಸಿ ಸ್ನೇಹಿತನ ಮನೆಗೆ ಹೋಗಿ ಉಳಿದುಕೊಂಡಿದ್ದರು. ಎಲ್ಲರೂ ಎಲ್ಲಾದರೂ ಹೋಗಿರಬಹುದು ಎಂದೇ ಶಂಕರ್ ಭಾವಿಸಿದ್ದರು. ಆದರೆ, ಸೋಮವಾರವೇ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಿಂದ ಯಾರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ವಾಸನೆ ಬರುತ್ತಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777