ಬೆಂಗಳೂರಿಗರನ್ನು ಮೋಡಿ ಮಾಡಿದ ಸಾರಂಗಿ ನಾದ
ಬೆಂಗಳೂರು, ನ. 30: ಎರಡು ದಿನಗಳ ಕಾಲ ಬೆಂಗಳೂರಿನ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಸಾರಂಗಿಯ ಧ್ವನಿ ಮೊಳಗುತ್ತಿತ್ತು. ದೇಶದ ಪ್ರಖ್ಯಾತ ಸಾರಂಗಿ ವಾದಕ ಪದ್ಮವಿಭೂಷಣ ಪಂ.ರಾಮನಾರಾಯಣ್ ಅವರ ಮೊಮ್ಮಗ ಶ್ರೀ ಹರ್ಷ ನಾರಾಯಣ್ ಸ್ವರಮಾಧುರ್ಯವನ್ನು ಹಂಚುತ್ತಿದ್ದರು.
ತಮ್ಮ ತಾತನಿಂದ ವರ್ಷಗಟ್ಟಲೆ ಪಡೆದ ತಾಲೀಮಿನ ಒಂದು ಝಲಕ್ ಅಲ್ಲಿ ಮೂಡಿನಿಂತಿತ್ತು. ನಮ್ಮ ನಾಡಿನ ಖ್ಯಾತ ಗಾಯಕಿ, ಪಂ.ಬಸವರಾಜ್ ರಾಜಗುರುಗಳ ಶಿಷ್ಯೆ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರ ಗಾಯನ. ಇವರೊಂದಿಗೆ ದೇಶದ ಯುವ ಸಾರಂಗಿ ಮತ್ತು ಶ್ರೀ.ವಿಕಾಸ್ ನರೇಗಲ್ ಅವರ ತಬಲಾ ಸಾಥಿಯೂ ಕೂಡ ಅವರ ಗಾಯನದ ಸೌಂದರ್ಯವನ್ನ ಇಮ್ಮಡಿಗೊಳಿಸಿತ್ತು.[ಸಿಂಗಪುರದಲ್ಲಿ ಮೈಮರೆಸಿದ ಮುರಳಿ ನಿನಾದ]
ಪ್ರಖ್ಯಾತ ಲಯಮಾಂತ್ರಿಕರಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಹಾಗೂ ಪಂ.ರವೀಂದ್ರ ಯಾವಗಲ್ ಅವರ ಮೃದಂಗ ತಬಲಾ ಜುಗಲ್ಬಂದಿ. ಈ ಕಾರ್ಯಕ್ರಮಕ್ಕೆ ಯುವ ವಾಯಲಿನ್ ವಾದಕ ಶ್ರೀ ರಂಜನ್ ಕುಮಾರ್ ಅವರ ಲೆಹರಾ. ಮೊದಲಿಗೆ ಈ ಇಬ್ಬರು ವಾದಕರು ೧೦ ಮಾತ್ರೆಯ ತಾಳ ಝಪತಾಲ್ ನಲ್ಲಿ ಸ್ವತಂತ್ರ ವಾದನವನ್ನು ನುಡಿಸಿದ ನಂತರ, ಕೊನೆಯ ಭಾಗದಲ್ಲಿ ತೀನತಾಲ್(ಆದಿತಾಳ-ಕರ್ನಾಟಕಿ ಸಂಗೀತದಲ್ಲಿ) ನ ಪ್ರಸ್ತುತಿಯಲ್ಲಿ ಎರಡು ಲಯಸಾಮ್ರಾಜ್ಯಗಳೆ ಮೈದಳೆದಂತಿದ್ದವು.
ಎರಡನೆ ದಿನದ ಕಾರ್ಯಕ್ರಮಗಳು ಸಾರಂಗಿಯ ಮಂಗಳಧ್ವನಿಯಿಂದಲೆ ಪ್ರಾರಂಭವಾಯಿತು. ಉಸ್ತಾದ್ ಮುರಾದ್ ಅಲಿಯ ಸಾರಂಗಿಯಲ್ಲಿ ಪೂರ್ವಿ ರಾಗ ಮೂಡಿಬಂದಿತು. ಸಂಜೆಯ ಸಮಯಕ್ಕೆ ಹೊಸಕಳೆಯನ್ನು ತುಂಬುವಂತಹ ರಾಗ ಪ್ರಸ್ತುತಿಯಲ್ಲಿ ಪಂ.ಉದಯರಾಜ್ ಕರ್ಪೂರ್ ಅವರ ತಬಲಾ ಸಹವಾದನವೂ ಇನ್ನಷ್ಟು ರಂಗುತುಂಬುತ್ತಿತ್ತು. ಮುರಾದ್ ಅಲಿ ಅವರು ನುಡಿಸಿದ ಠುಮರಿ ಭಾವಪರವಶತೆಯಿಂದ ಕರೆದುಕೊಂಡು ಹೋಯಿತು.
ಪಂ.ಹರಿಪ್ರಸಾದ್ ಚೌರಸಿಯಾ ಶಿಷ್ಯ ಮುಂಬೈನಿಂದ ಆಗಮಿಸಿದ ಪಂ.ರೂಪಕ್ ಕುಲಕರ್ಣಿ ಕೊಳಲ ನಾದಕ್ಕೆ ಹಿರಿಯ ತಬಲಾ ವಾದಕ ಪಂ.ರಘುನಾಥ್ ನಾಕೋಡ್ ಅವರ ಸಾಥ್ ನೀಡಿದರು. ಯಮನ್ ರಾಗ ಮತ್ತು ನಾಕೋಡರ ತಬಲದ ಬೋಲುಗಳು ಸಂಪೂರ್ಣ ಸಭಾಗೃಹವನ್ನೆ ಮಂತ್ರಮುಗ್ಧಗೊಳಿಸಿದ್ದವು.
ಕೊನೆಯದಾಗಿ ಪಂ.ಗಣಪತಿ ಭಟ್ ಹಾಸಣಗಿ ಅವರ ಗಾಯನ. ರಾಗ್ ಮಾರುಬಿಹಾಗ್, ಮಧುಕೌಂಸ್ ನ ಅಪ್ರತಿಮ ಪ್ರಸ್ತುತಿಗಳು ಜನಮನ ಸೂರೆಗೊಂಡವು. ಅಂದಿನ ಕಾರ್ಯಕ್ರಮ ರಾಗ್ ಭೈರವಿಯ "ಭವಾನಿ ದಯಾನಿ, ಮಹಾ ವಾಕಬಾನಿ"ಯಿಂದ ಪರಿಸಮಾಪ್ತಗೊಂಡಾಗಲೂ ಸಂಗೀತಪ್ರೀಯರಿಗೆ ಕಾರ್ಯಕ್ರಮ ಮುಗಿದಿದ್ದು ಗೊತ್ತೇ ಆಗಲಿಲ್ಲ.
'ಸಾರಂಗಿ ತಲಿಮಾರುಗಳಿಂದ ನಮ್ಮ ಕುಟುಂಬಕ್ಕ ಅನ್ನಾ ಹಾಕೇದ, ಅದರ ಋಣಾ ತೀರ್ಸೋದು ನಮ್ಮ ಕರ್ತವ್ಯ ಅದರೀ" ಅಂತ ಫಯಾಜ್ ಖಾನ್ ಅಂದಿನ ಕಾರ್ಯಕ್ರಮದಲ್ಲಿ ಹೇಳಿದ್ದು ಅವರ ಸಂಗೀತ ಪ್ರೀತಿಗೆ ಸಾಕ್ಷಿಯಾಗಿತ್ತು. ಒಟ್ಟಿನಲ್ಲಿ ಗಾಯನದೊಂದಿಗೆ ಸಾರಂಗಿ ಸಾಥ್, ಮತ್ತು ಸ್ವತಂತ್ರ ವಾದ್ಯವಾಗಿ ಸಾರಂಗಿಯನ್ನು ಜನತೆಗೆ ಪರಿಚಯಿಸುವ ಉಸ್ತಾದ್ ಫಯಾಜ್ ಖಾನ್ ಅವರ ಪ್ರಯತ್ನ ಯಶಸ್ವಿಯಾಯಿತು.