ಡಿಸಿಎಂ ಅಶ್ವತ್ಥ್ ನಾರಾಯಣ್ ಆಪ್ತನ ಸಹೋದರ ಆತ್ಮಹತ್ಯೆ
ಬೆಂಗಳೂರು, ಡಿಸೆಂಬರ್ 11: ನಿರ್ಮಾಣ ಹಂತದ ಕಟ್ಟಡಕ್ಕೆಅಡ್ಡಿ ಪಡಿಸಿದ್ದಕ್ಕೆ ಮನನೊಂದ ರಿಯಲ್ ಎಸ್ಟೇಟ್ ಉದ್ಯಮಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಟಿಎಂ ಲೇಔಟ್ನ ಏಳನೇ ಫೇಸ್ ನಲ್ಲಿರುವ ವಿವೇಕ್ ಆತ್ಮಹತ್ಯೆ ಮಾಡಿಕೊಂಡವರು. ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರ ಆಪ್ತನ ಸಹೋದರ ವಿವೇಕ್, ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಬಿಲ್ಡರ್ ವಿವೇಕ್ ಜತೆ ಒಡಂಬಡಿಕೆ ಮಾಡಿಕೊಂಡು ವಿವೇಕ್ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುತ್ತಿದ್ದರು. ಶೇ. 90 ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಕಟ್ಟಡ ನಿರ್ಮಾಣ ಸಂಬಂಧ ವಿವೇಕ್ ಮತ್ತು ರಹೀಮ್ ನಡುವೆ ಗುಡ್ ವಿಲ್ ಕೊಡುವ ವಿಚಾರವಾಗಿ ಮನಸ್ಥಾಪವಾಗಿತ್ತು. ಹದಿನೈದು ಕೋಟಿ ರೂಪಾಯಿ ಗುಡ್ ವಿಲ್ ಕೊಡುವ ವಿಚಾರವಾಗಿ ಇಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು. ರಹೀಂ ಹದಿನೈದು ಕೋಟಿ ರೂಪಾಯಿ ವಿವೇಕ್ ಗೆ ಕೊಡಬೇಕಿತ್ತು ಎಂಬ ಮಾತು ಕೇಳಿ ಬರುತ್ತಿದ್ದು, ಇದರ ನಡುವೆಯೂ ರಹೀಂ ವಿವೇಕ್ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಪಡಿಸಿ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದೇ ವಿಚಾರವಾಗಿ ರಹೀಮ್ ಮತ್ತು ಆಪ್ತರು ಗುರುವಾರ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದು ಪೈಪ್ ಒಡೆದು ದಾಂಧಲೆ ಮಾಡಿದ್ದರು. ಇದರಿಂದ ಬೇಸತ್ತ ವಿವೇಕ್ ಮನೆಗೆ ತೆರಳಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.