ನಿವೇಶನ ಖರೀದಿಸುವಾಗ ಯಾಮರಿದ್ರೆ ಟೋಪಿ ಗ್ಯಾರಂಟಿ
ಬೆಂಗಳೂರು, ಜನವರಿ 05: ಕಡಿಮೆ ಬೆಲೆಗೆ ನಿವೇಶನ ಕೊಡುವ ಹೆಸರಿನಲ್ಲಿ ಜನರಿಗೆ ಮೋಸ ಮಾಡುವರೇ ಜಾಸ್ತಿ ! ನಿವೇಶನವೇ ಇರುವುದಿಲ್ಲ, ಕೇವಲ ಬೋರ್ಡ್ ಹಾಕಿ ನಮ್ಮದೇ ನಿವೇಶನ ಎಂದು ತೋರಿಸಿ ಹಣ ಪಡೆದು ಮೋಸ ಮಾಡುವ ವಂಚಕರಿಗೆ ಕಡಿಮೆ ಇಲ್ಲ. ಇನ್ನು ಒಂದೇ ನಿವೇಶನವನ್ನು ಹಲವರಿಗೆ ಮಾರಾಟ ಮಾಡಿದ ಪ್ರಕರಣಗಳು ವರದಿಯಾಗಿವೆ. ಇದೀಗ ಅಂತದ್ದೇ ಸಾಲಿಗೆ ಹೊಸದೊಂದು ವಂಚನೆ ಹಾದಿ ಹುಟ್ಟಿಕೊಂಡಿದೆ.
ಯಾರದ್ದೋ ನಿವೇಶನ ಇರುತ್ತದೆ. ಅ ನಿವೇಶನ ರಕ್ಷಣೆಗೆಂದು ಹಾಕಿರುವ ಕಾಂಪೌಂಡ್ ಗೋಡೆ ಮೇಲೆ ಯಾವೋದೋ ಬಿಲ್ಡರ್ ಕಂಪನಿ ಜಾಹೀರಾತು ಹಾಕುವುದು. ಯಾರಾದರೂ ಆ ನಂಬರ್ ಗೆ ಕರೆ ಮಾಡಿ ನಿವೇಶನ ಕೇಳಿದರೆ, ನಂದೇ ಎಂದು ನಂಬಿಸಿ ಹಣ ಪಡೆದು ಮೋಸ ಮಾಡುವುದು. ಡ್ರೀಮ್ಸ್ ಜಿ.ಕೆ. ಎಂಬ ರಿಯಲ್ ಎಸ್ಟೇಟ್ ಕಂಪನಿ ಜಾಹೀರಾತು ಫಲಕ ಹಾಕಲು ರೈತರಿಂದ ಜಮೀನು ಪಡೆದು,, ಅದನ್ನೇ ಲೇಔಟ್ ಎಂದು ತೋರಿಸಿ ಜನರಿಗೆ ವಂಚನೆ ಮಾಡಿತ್ತು. ಈ ಯೋಜನೆಯನ್ನು ಇದೀಗ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಉದ್ಯಮಿಗಳು ಬಳಸಿಕೊಂಡು ಜನರಿಗೆ ಟೋಪಿ ಹಾಕುತ್ತಿದ್ದಾರೆ. ಇಂತಹದ್ದೇ ಒಂದು ಪ್ರಕರಣ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಿವೃತ್ತ ಅಧಿಕಾರಿಯೊಬ್ಬರಿಗೆ ನಿವೇಶನ ಕೊಡಿಸುವ ನೆಪದಲ್ಲಿ ಎರಡು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಎರಡು ಕೋಟಿ ವಂಚಿಸಿದ ಆರೋಪದಡಿ ಬಿಲ್ಡರ್ ನನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸಿ ಪುನೀತ್ ಸಿದ್ದೇಗೌಡ ಬಂಧಿತ ಆರೋಪಿ.
ಸುಂಕದಕಟ್ಟೆ ನಿವಾಸಿ ಹುಚ್ಚು ಮಾಸ್ತಿಗೌಡ ಎಂಬುವರು ರಾಜರಾಜೇಶ್ವರಿನಗರ ಸುತ್ತಮುತ್ತ ನಿವೇಶನ ಖರೀದಿಸಲು ಮುಂದಾಗಿದ್ದರು. ಸ್ನೇಹಿತರ ಮೂಲಕ ಪರಿಚಯವಾದ ಪುನೀತ್ ಸಿದ್ದೇಗೌಡ (ಪಿಎಸ್ ಕೆ ಗ್ರೂಪ್ ) ಎಂಬುವರ ಬಳಿ ನಿವೇಶನ ವಿಚಾರಿಸಿದ್ದರು. ತನ್ನ ದೊಡ್ಡಪ್ಪನ ನಿವೇಶನಕ್ಕೆ ಹಾಕಿದ್ದ ಕಾಂಪೌಂಡ್ ಗೋಡೆ ಮೇಲೆ ಪಿಎಸ್ ಕೆ ಗ್ರೂಪ್ ಎಂದು ಬರೆಸಿ ತನ್ನ ಮೊಬೈಲ್ ನಂಬರ್ ನ್ನು ಪುನೀತ್ ಬರೆದಿದ್ದರು. ನನ್ನ ದೊಡ್ಡಪ್ಪನ ನಿವೇಶನ, ನನ್ನ ಜವಾಭ್ಧಾರಿಯಲ್ಲಿದೆ. ಏಳು ಕೋಟಿ ರೂಪಾಯಿ ನೀಡಿದರೆ ನಿವೇಶನ ನೀಡುವುದಾಗಿ ಪುನೀತ್ ಹೇಳಿದ್ದರು. 6.74 ಕೋಟಿ ರೂಪಾಯಿಗೆ ನಿವೇಶನ ಮಾರಾಟ ಮಾತುಕತೆ ನಡೆಯುತ್ತದೆ. ಮುಂಗಡ ಎರಡು ಕೋಟಿ ನೀಡಿದ್ದ ಹುಚ್ಚು ಮಾಸ್ತಿಗೌಡ ಉಳಿದ ಹಣ ನೀಡಿದ ಬಳಿಕ ನೋಂದಣಿ ಮಾಡಿಸಿಕೊಡಲು ಹೇಳಿದ್ದರು.
ಕೊಟ್ಟ ಮಾತಿನಂತೆ ಹುಚ್ಚ ಮಾಸ್ತಿಗೌಡ ಉಳಿದ ಹಣವನ್ನು ತನ್ನ ಪುತ್ರನ ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ್ದಾರೆ. ನಿವೇಶನ ನೋಂದಣಿ ಮಾಡಿಸಲು ಹೇಳಿದಾಗ ಪುನೀತ್ ಸಿದ್ದೇಗೌಡ ಉಲ್ಟಾ ಹೊಡೆದಿದ್ದಾರೆ. ಬಳಿಕ ಅವರ ದೊಡ್ಡಪ್ಪ ಕೃಷ್ಣಮೂರ್ತಿ ಅವರನ್ನು ವಿಚಾರಿಸಿದರೆ, ನನಗೆ ಕೊಟ್ಟಿರುವುದು ಕೇವಲ ಎರಡು ಕೋಟಿ ಮಾತ್ರ. ಉಳಿದ ಹಣ ಕೊಟ್ಟರೆ ನಿವೇಶನ ಕೊಡುವುದಾಗಿ ಹೇಳಿದ್ದಾರೆ. ಸಂಬಂಧಿಯ ನಿವೇಶನದ ಮುಂದೆ ತನ್ನ ರಿಯಲ್ ಎಸ್ಟೇಟ್ ಕಂಪನಿಯ ಬೋರ್ಡ್ ಹಾಕಿ ಆರೂವರೆ ಕೋಟಿ ರೂಪಾಯಿ ಪಡೆದಿದ್ದಾರೆ. ಆನಂತರ ನಾಲ್ಕು ಕೋಟಿ ವಾಪಸು ನೀಡಿದ್ದು,ಬಾಕಿ ಎರಡುಕೋಟಿ ನೀಡದೇ ಪುನೀತ್ ಸಿದ್ದೇಗೌಡ ಕೈ ಯೆತ್ತಿದ್ದಾರೆ. ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿದ್ದು, ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ. ನಿವೇಶನ ಖರೀದಸಲು ಹೋದ ಹುಚ್ಚ ಮಾಸ್ತಿಗೌಡ ಅವರು ಎರಡು ಕೋಟಿ ರೂಪಾಯಿ ಕಳೆದುಕೊಂಡು ಇದೀಗ ಪುನೀತ್ ಸಿದ್ದೇಗೌಡ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Recommended Video
ರೈತರಿಂದ ಜಾಹೀರಾತು ಫಲಕ ಪ್ರದರ್ಶಿಸಲು ಜಮೀನು ಬಾಡಿಗೆಗೆ ಪಡೆಯುತ್ತಾರೆ ಈ ಜಮೀನು ನಿವೇಶನ ಮಾಡುತ್ತಿದ್ದೇವೆ ಎಂದು ನಂಬಿಸಿ ಮೋಸ ಮಾಡುವ ದಂಧೆ ಬೆಂಗಳೂರಿನಾದ್ಯಂತ ಹಬ್ಬಿದೆ. ಹೀಗಾಗಿ ನಿವೇಶನ ಖರೀದಿಸುವರು ಮೊದಲು ಅದರ ದಾಖಲೆಗಳನ್ನು ಪರಿಶೀಲಿಸಬೇಕು. ಅದರ ಬಗ್ಗೆ ವಕೀಲರಿಂದ ಸಲಹೆ ಪಡೆಯಬೇಕು. ತಪ್ಪಿದಲ್ಲಿ ಕೋಟ್ಯಂತರ ರೂಪಾಯಿ ಕಳೆದುಕೊಳ್ಳಬೇಕಾದೀತು.ಇದಕ್ಕೆ ಹುಚ್ಚಮಾಸ್ತಿಗೌಡ ಆಸ್ತಿ ಪ್ರಕರಣವೇ ಸಾಕ್ಷಿ.