ಜಯನಗರ ಕಾಂಪ್ಲೆಕ್ಸ್ ಆರಂಭಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಜುಲೈ 26: ಉದ್ಘಾಟನೆಯಾಗಿ ಎರಡು ವರ್ಷವಾದರೂ ತೆರೆಯದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ - ತೆರೆಯಲು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಅವರ 'ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ' ಜುಲೈ 29ರಂದು ಧರಣಿ ಹಮ್ಮಿಕೊಂಡಿದೆ.
ಸಾರ್ವಜನಿಕ ಆಸ್ತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಇದೇ ನಿಟ್ಟಿನಲ್ಲಿ "ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯು ಸರ್ಕಾರಕ್ಕೆ ತಕ್ಷಣವೇ ನೂತನ ಕಾಂಪ್ಲೆಕ್ಸ್ ಬ್ಲಾಕ್ ಅನ್ನು ಬಾಡಿಗೆಗೆ ನೀಡಿ ಈ ಕೂಡಲೇ ಸಾರ್ವಜನಿಕ ಉಪಯೋಗಕ್ಕೆ ತೆರೆಯಬೇಕು ಮತ್ತು ಈಗ ಸರ್ಕಾರಕ್ಕೆ ತಿಂಗಳಿಗೆ ಆಗುತ್ತಿರುವ ಕನಿಷ್ಟ ರೂ. 60 ಲಕ್ಷ ಬಾಡಿಗೆ ನಷ್ಟವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ಇದೇ ಶನಿವಾರ, 29-07-2017, ಬೆಳಿಗ್ಗೆ 11ಕ್ಕೆ, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಶಾಂತಿಯುತ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಯನಗರದ ಮತ್ತು ಸುತ್ತಮುತ್ತಲ ಬಡಾವಣೆಗಳ ಜನರು ಈ ಧರಣಿಯಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಸಾರ್ವಜನಿಕ ಆಸ್ತಿಯನ್ನು ಉಳಿಸಲು ಮುಂದಾಗಬೇಕೆಂದು ವೇದಿಕೆ ವಿನಂತಿಸುತ್ತದೆ.
ಏಷ್ಯಾದಲ್ಲಿಯೇ ಬೃಹತ್ ಯೋಜಿತ ಬಡಾವಣೆಯಾಗಿ ನಿರ್ಮಾಣವಾದ ಜಯನಗರಕ್ಕೆ ಹಾಗೂ ಬೆಂಗಳೂರು ನಗರದ ಪ್ರತಿಷ್ಠೆಯ ಸಂಕೇತವಾಗಿದ್ದ "ಜಯನಗರ ಶಾಪಿಂಗ್ ಕಾಂಪ್ಲೆಕ್ಸ್" ಅನೇಕ ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಆದರೂ ಕೂಡ ಇದು ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿಲ್ಲ.
ಪಾರ್ಕಿಂಗ್ ಸಮಸ್ಯೆಯಿಂದ ಜಯನಗರ ಹಾಗೂ ಬೆಂಗಳೂರಿನ ಜನತೆ ಪರದಾಡುತ್ತಿದ್ದಾರೆ, ನೂತನವಾಗಿ ನಿರ್ಮಿಸಿರುವ ಶಾಪಿಂಗ್ ಕಾಂಪ್ಲೆಕ್ಸ್ ಬ್ಲಾಕ್ ತೆರೆದರೆ ಸ್ವಲ್ಪಮಟ್ಟಿಗಾದರೂ ಈ ಸಮಸ್ಯೆ ಬಗೆಹರಿಯಬಹುದು. ಆದರೂ ಏತಕ್ಕಾಗಿ ಸಾರ್ವಜನಿಕರಿಗೆ ತೆರೆದಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಈಗ ಕಟ್ಟಿರುವ ಕಾಂಪ್ಲೆಕ್ಸ್ನ ಬಾಡಿಗೆಯಿಂದ ಬರಬೇಕಿದ್ದ ವಾರ್ಷಿಕ ಅಂದಾಜು ರೂ.7 ಕೋಟಿಯಷ್ಟು ಆದಾಯ ನಷ್ಟವುಂಟಾಗುತ್ತಿದ್ದು, ಜನತೆಯ ತೆರಿಗೆ ಹಣವೂ ಪೋಲಾಗುತ್ತಿರುವುದಲ್ಲದೆ ಅವರ ಬವಣೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್ ಉದ್ಘಾಟನೆಯಾದರೂ ಜನತೆಗೆ ಸಮರ್ಪಿಸಲು ಸರಕಾರಕ್ಕೇ ಏಕೆ ಸಾಧ್ಯವಾಗುತ್ತಿಲ್ಲ? ನಮ್ಮನ್ನು ಪ್ರತಿನಿಧಿಸಬೇಕಾದ ಪಾಲಿಕೆ ಸದಸ್ಯರು, ಶಾಸಕರು, ಎಂಪಿಗಳು ಏನು ಮಾಡುತ್ತಿದ್ದಾರೆ? ಈ ಉದಾಸೀನತೆಯನ್ನು ಜಯನಗರದ ಜನತೆ ಇನ್ನೆಷ್ಟು ಕಾಲ ಸಹಿಸಬೇಕು?
ಪುಟ್ಟಣ್ಣ ಕಣಗಾಲ ಚಿತ್ರಮಂದಿರ: ಇನ್ನು ನೂತನವಾಗಿ ನಿರ್ಮಿಸುವಾಗ ಪುಟ್ಟಣ್ಣ ಚಿತ್ರಮಂದಿರವನ್ನು ಪುನರ್ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆದರೆ ಈ ನೂತನ ಬ್ಲಾಕ್ ತೆರೆಯದೆ, ಎರಡನೇ ಹಂತದ ಕಾಮಗಾರಿಗಳು ಆರಂಭವಾಗಿ ಪೂರ್ಣವಾಗದೆ "ಪುಟ್ಟಣ್ಣ ಕಣಗಾಲ ಚಿತ್ರಮಂದಿರ" ವೂ ಮತ್ತೆ ಆರಂಭವಾಗುವುದಿಲ್ಲ. ಯಾಕೆಂದರೆ ಚಿತ್ರಮಂದಿರವು ಎರಡನೇ ಹಂತದ ಕಾಮಗಾರಿಯಲ್ಲಿದೆ.
ಹಾಗೆಯೇ, ಈಗ ಉದ್ಘಾಟನೆಗೊಂಡು ಎರಡು ವರ್ಷ ಆಗುತ್ತ ಬಂದಿರುವ ಈ ನೂತನ ಭಾಗ ಆರಂಭವಾಗದೆ, ಸದ್ಯ ನಿರ್ವಹಣೆಯಿಲ್ಲದೆ ಸೊರಗಿರುವ ಉಳಿದ ಭಾಗಗಳಲ್ಲಿ ರಿಪೇರಿ ಅಥವಾ ಇನ್ನಷ್ಟು ಸೌಲಭ್ಯಗಳೊಂದಿಗೆ ಉತ್ತಮ ಮಟ್ಟದ ವಾಣಿಜ್ಯ ಸಂಕೀರ್ಣ ನಿರ್ಮಾಣವೂ ಸಾಧ್ಯವಾಗುವುದಿಲ್ಲ. ಜಯನಗರ ಹಾಗು ಸುತ್ತಲಿನ ಬಡಾವಣೆಗಳಿಗೆ ಉತ್ತಮ ಮಟ್ಟದ ಶಾಪಿಂಗ್ ಕಾಂಪ್ಲೆಕ್ಸಿನ ಅವಶ್ಯಕತೆಯಿದೆ. ಆದರೆ ನೂತನ ಬ್ಲಾಕ್ ಆರಂಭವಾಗದೆ, ಇದು ಸಾಧ್ಯವಾಗುವುದಿಲ್ಲ.