ಜಯನಗರ ಕ್ಷೇತ್ರ ಚುನಾವಣಾ ದಿನಾಂಕ ಘೋಷಿಸಿ: ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಮೇ 10: ಬಿಜೆಪಿಯ ಶಾಸಕ ಮತ್ತು ಈ ವಿಧಾನಸಭಾ ಚುನಾವಣೆಯ ಜಯನಗರ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಬಿ.ಎನ್.ವಿಜಯಕುಮಾರ್ ಅವರ ಮರಣದಿಂದಾಗಿ ಮುಂದೂಡಿರುವ ಜಯನಗರ ಕ್ಷೇತ್ರ ಚುನಾವಣೆಯ ದಿನಾಂಕವನ್ನು ಶೀಘ್ರವೇ ಪ್ರಕಟಿಸಬೇಕು ಎಂದು ಪಕ್ಷೇತ್ರ ಅಭ್ಯರ್ಥಿ ಆಗಿದ್ದ ರವಿಕೃಷ್ಣಾ ರೆಡ್ಡಿ ಅವರು ಒತ್ತಾಯಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ರವಿಕೃಷ್ಣಾ ರೆಡ್ಡಿ ಅವರು, ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 52(2)ರ ಅಡಿಯಲ್ಲಿ, ಇಂತ್ಯಹ ಸಂದರ್ಭದಲ್ಲಿ, ಯಾವ ಪಕ್ಷದ ಅಭ್ಯರ್ಥಿಯು ಮರಣ ಹೊಂದಿರುತ್ತಾರೊ, ಆ ಪಕ್ಷಕ್ಕೆ ನೋಟಿಸ್ ನೀಡಿ, 7ದಿನಗಳ ಒಳಗಾಗಿ ಮತ್ತೊಬ್ಬ ಅಭ್ಯರ್ಥಿಯನ್ನು ಹೊಸದಾಗಿ ನಾಮನಿರ್ದೇಶನ ಮಾಡಲು ಕಾಲಾವಕಾಶ ನೀಡಲಾಗುತ್ತದೆ. ಆದರೆ, ಕೇಂದ್ರ ಚುನಾವಣಾ ಆಯೋಗವು ಹೊಸದಾಗಿ ಚುನಾವಣಾ ದಿನಾಂಕವನ್ನು ಪ್ರಕಟಿಸದೆ, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ಮುಂದು ಹೋಗಿಲ್ಲ ಎಂದು ದೂರಿದ್ದಾರೆ.
ರವಿಕೃಷ್ಣಾ ರೆಡ್ಡಿ ಅವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಬೆದರಿಕೆ
ಚುನಾವಣೆಯ ಹೊಸ್ತಿಲಲ್ಲಿ ಇದ್ದಾಗಲೇ ಚುನಾವಣೆಯನ್ನು ಮುಂದೂಡಲ್ಪಟ್ಟಿರುವುದರಿಂದ, ಚುನಾವಣಾ ಪ್ರಚಾರಕ್ಕಾಗಿ ಪಕ್ಷೇತರ ಅಭ್ಯರ್ಥಿಗಳು ತಮ್ಮ ಬಹುತೇಕ ಸಂಪನ್ಮೂಲಗಳನ್ನು ಬಳಸಿರುತ್ತಾರೆ ಮತ್ತು ಚುನಾವಣಾ ವೆಚ್ಚದ ಮಿತಿಯು 28 ಲಕ್ಷ ರೂಪಾಯಿಗಳಿದ್ದು, ಈಗಾಗಲೇ ಮಾಡಿರುವ ವೆಚ್ಚವು ಇದರಲ್ಲಿ ಸೇರುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಥಳೀಯ ಕರ್ನಾಟಕದ ಮುಖ್ಯ ಚುನಾವನಾಧಿಕಾರಿ ಕಚೇರಿಯಲ್ಲಿ ಯಾವುದೇ ಸ್ಪಷ್ಟತೆ ಇರುವುದಿಲ್ಲ ಎಂದು ಅವರು ಪ್ರಶ್ನೆ ಎತ್ತಿದ್ದಾರೆ.
ಪತ್ರದ ಮೂಲಕ ಕೇಳಿರುವ ಪ್ರಶ್ನೆಗಳಿಗೆ ಹಾಗೂ ಸಂದೇಹಗಳಿಗೆ ಸ್ಪಷ್ಟತೆ ಮತ್ತು ಶೀಘ್ರವಾಗಿ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ದಿನಾಂಕ ಪ್ರಕಟಿಸುವಂತೆ ಕೋರಿ ಕೇಂದ್ರ ಚುನಾವಣಾ ಆಯುಕ್ತರುಗಳಿಗೆ ಜಯನಗರ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ರವಿ ಕೃಷ್ಣಾರೆಡ್ದಿಯವರು ಪತ್ರ ಬರೆದಿದ್ದಾರೆ.
ಜಯನಗರದ ಅಭಿವೃದ್ಧಿಗೆ ರವಿಕೃಷ್ಣಾ ರೆಡ್ಡಿ 5 ಸೂತ್ರಗಳು
ಜಯನಗರ ಕ್ಷೇತ್ರದಲ್ಲಿ ದಿವಂಗತ ಬಿ.ಎನ್.ವಿಜಯಕುಮಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು, ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್ನಿಂದ, ಜೆಡಿಎಸ್ ನಿಂದ ಕಾಳೇಗೌಡ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾರೆಡ್ಡಿ ಅವರು ಕಣಕ್ಕಿಳಿದಿದ್ದರು.