ಇಸ್ಕಾನ್ ದೇಗುಲದ ಕೃಷ್ಣ-ಬಲರಾಮ ಉತ್ಸವ, ಕಣ್ಣಿಗೆ ಹಬ್ಬ
ಬೆಂಗಳೂರು, ಜನವರಿ 20: ರಾಜಾಜಿನಗರದಲ್ಲಿರುವ ಇಸ್ಕಾನ್ ನ ರಾಧಾ ಕೃಷ್ಣ ಮಂದಿರದಲ್ಲಿ ಕೃಷ್ಣ ಬಲರಾಮ ರಥ ಯಾತ್ರೆಯನ್ನು ಸಂಭ್ರಮ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಿತು. 34ನೇ ವಾರ್ಷಿಕ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹರೇ ಕೃಷ್ಣ ಎನ್ನುತ್ತಾ ಘೋಷಣೆಗಳನ್ನು ಮೊಳಗಿಸಿದರು.
ಶ್ರೀ ಕೃಷ್ಣ, ಬಲರಾಮ ಮೂರ್ತಿಗಳನ್ನು ಮಂದಿರದಿಂದ ಮೆರವಣಿಗೆಯಲ್ಲಿ ತಂದು, ರಥದಲ್ಲಿ ಇರಿಸಲಾಯಿತು. ವರ್ಣರಂಜಿತವಾಗಿ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ರಥವು ಮಂದಿರದ ಸಮೀಪದ ಸ್ಥಳಗಳಲ್ಲಿ ಸಾಗಿತು. ಕೃಷ್ಣ- ಬಲರಾಮರ ಈ ಉತ್ಸವದ ಸಂದರ್ಭದಲ್ಲಿ ಹಾದಿಯುದ್ದಕ್ಕೂ ಸಂಕೀರ್ತನೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಮಾಡಲಿದೆ ಇಸ್ಕಾನ್?
ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ ದಾಸ, ಶಾಸಕ ಕೆ. ಗೋಪಾಲಯ್ಯ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಭದ್ರೇ ಗೌಡ ಮತ್ತು ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ರಥ ಯಾತ್ರೆಯನ್ನು ಉದ್ಘಾಟಿಸಿದರು.
ಪ್ರತಿ ವರ್ಷ, ರಥ ಯಾತ್ರೆ ಸಂದರ್ಭದಲ್ಲಿ, ಎಲ್ಲರಗೂ ತಮ್ಮ ಅನುಗ್ರಹವನ್ನು ತೋರಲು ಕೃಷ್ಣ ಮತ್ತು ಬಲರಾಮರ ಉತ್ಸವ ವಿಗ್ರಹಗಳು ಮಂದಿರದಿಂದ ಹೊರ ತಂದು ರಥಾರೋಹಣ ಮಾಡುವುದು ಈ ಸಂಭ್ರಮದ, ಉತ್ಸವದ ಉದ್ದೇಶ. ರಥವು ಸಾಗಿದ ಹಾದಿ ಉದ್ದಕ್ಕೂ ಜನರು ಭಗವಂತನನ್ನು ಸ್ವಾಗತಿಸಲು ತಮ್ಮ ಮನೆಗಳ ಮುಂದೆ ರಂಗೋಲಿಗಳನ್ನು ಹಾಕಿದ್ದರು.
ರಥವನ್ನು ವರ್ಣರಂಜಿತವಾಗಿ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಈ 26 ಅಡಿಯ ರಥದ ಮತ್ತೊಂದು ವಿಶೇಷವೆಂದರೆ ಅದರ ಚಿತ್ರ ಚಾವಣಿ (ಕ್ಯಾನೊಪಿ). ವಿದ್ಯುತ್ ಮೋಟಾರ್ ನಿಂದ ಅದನ್ನು ಮೇಲಕ್ಕೆ ಅಥವಾ ಕೆಳಕ್ಕೆ ಚಲಿಸಬಹುದು.
ರಥದ ಎರಡೂ ಕಡೆ 110 ಅಡಿ ಉದ್ದದ ಗಟ್ಟಿಮುಟ್ಟಾದ ಹಗ್ಗವಿದೆ (ಒಂದು ಕಡೆ ಪುರುಷರು ಮತ್ತೊಂದು ಕಡೆ ಮಹಿಳೆಯರು). ಇದರಿಂದ ಒಂದು ಬಾರಿಗೆ ಸುಮಾರು 500 ಜನರು ರಥವನ್ನು ಎಳೆಯುವುದು ಸಾಧ್ಯವಾಗಿತ್ತು. ಚಕ್ರ ಸಂರಕ್ಷಣೆ ತಂಡ ಮತ್ತು ಸಂಪರ್ಕಕ್ಕಾಗಿ ಸೂಕ್ತವಾದ ಧ್ವನಿವರ್ಧಕ ವ್ಯವಸ್ಥೆಗಳಿಂದ ಮಂದಿರದ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು.
ಅಸಂಖ್ಯ ಭಕ್ತರು ರಥವನ್ನು ಎಳೆದರು, ಪ್ರಾರ್ಥನೆಯನ್ನು ಸಲ್ಲಿಸಿದರು, ಸಂಕೀರ್ತನೆಯಲ್ಲಿ ಪಾಲ್ಗೊಂಡರು, ವೈದಿಕ ಸಾಹಿತ್ಯವನ್ನು ಹಂಚಿದರು. ತನ್ನ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಂದಿರಕ್ಕೆ ರಥವು ಹಿಂದಿರುಗಿದ ಮೇಲೆ ಭಕ್ತಾದಿಗಳಿಗೆ ಪ್ರಸಾದವನ್ನು ಹಂಚಲಾಯಿತು.