ಸಾಕ್ಷಿ ಅಳಿಸಲು ಬಂದ ಅತ್ಯಾಚಾರಿಗಳು ಪರಾರಿ
ಬೆಂಗಳೂರು, ಜು. 19 : ಆಂಧ್ರಪ್ರದೇಶ ಮೂಲದ 15 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಪೆಪ್ಪರ್ ಸ್ಪ್ರೇ ಎರಚಿ ದುರುಳರಿಬ್ಬರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು ಮಾತ್ರವಲ್ಲ, ಆಕೆಯನ್ನು ನಗ್ನ ಮಾಡಿ ಅತ್ಯಾಚಾರ ಎಸಗಿದ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿ, ಮಾಧ್ಯಮಗಳಿಗೆ ಬಿಡುಗಡೆ ಕೂಡ ಮಾಡುವುದಾಗಿ ಬೆದರಿಕೆ ಒಡ್ಡಿರುವ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ.
"ನಿನ್ನ ನಗ್ನ ದೇಹದ ಮೇಲೆ ನಾವು ಮಾಡಿರುವ ಕೃತ್ಯವನ್ನು ವಿಡಿಯೋದಲ್ಲಿ ದಾಖಲಿಸಿಕೊಂಡಿದ್ದು, ಇದನ್ನು ಪೊಲೀಸರಿಗೆ ತಿಳಿಸಿದರೆ ಮತ್ತು ನನಗೆ ನೀನು ಹಣ ನೀಡದಿದ್ದರೆ ಈ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ" ಎಂದು ಎರಡು ಮಹಡಿಗಳಿರುವ ಸಿಸ್ಟರ್ಸ್ ಆಫ್ ಹೋಲಿ ನೇಟಿವಿಟಿ ಕಟ್ಟಡದ ಕೆಳ ಅಂತಸ್ತಿನ ಗೋಡೆಯ ಮೇಲೆ ದುರುಳರು ಬರೆದಿದ್ದರು.
ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಜಾಗೃತರಾದ ಅತ್ಯಾಚಾರಿಗಳು ಗೋಡೆಯ ಮೇಲೆ ಕೆಂಪು ಸ್ಕೆಚ್ ಪೆನ್ ನಿಂದ ಬರೆದಿದ್ದ ಬರಹವನ್ನು ಅಳಿಸಲು ಯತ್ನಿಸಿ ಯಶಸ್ವಿಯಾಗದೆ ಪರಾರಿಯಾಗಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಆರೋಪಿಗಳು ಗೋಡೆ ಬರಹವನ್ನು ಅಳಿಸುತ್ತಿದ್ದ ಸಮಯದಲ್ಲಿ ಪೊಲೀಸರು ಇತರರ ವಿಚಾರಣೆ ನಡೆಸುತ್ತಿದ್ದರು. [ಶಾಲಾ ಬಾಲಕಿ ಮೇಲೆ ಅತ್ಯಾಚಾರ, ಪ್ರತಿಭಟನೆ]
ಪೊಲೀಸರು ಹೇಳುವಂತೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ದುಷ್ಕರ್ಮಿಗಳಲ್ಲಿ ಓರ್ವ ಬಲವಾದ ಆಳಾಗಿದ್ದ ಮತ್ತು ಇನ್ನೊಬ್ಬ ತೆಳ್ಳನೆಯ ಮೈಕಟ್ಟಿನ ವ್ಯಕ್ತಿಯಾಗಿದ್ದು, ಇಬ್ಬರೂ ಬಿಳಿ ಬಣ್ಣದ ಅಂಗಿ ತೊಟ್ಟಿದ್ದರು. ಗೋಡೆ ಬರಹವನ್ನು ಸ್ಪ್ರೇ ಬಳಸಿ ಅಳಿಸಿಹಾಕುತ್ತಿದ್ದ ಸಮಯದಲ್ಲಿ ಪೊಲೀಸರು ತನಿಖೆಗೆಂದು ಬಂದಿದ್ದಾರೆ. ಇದರ ಸುಳಿವು ಸಿಗುತ್ತಿದ್ದಂತೆ ಇಬ್ಬರೂ ಪರಾರಿಯಾಗಿದ್ದಾರೆ.
ತನಿಖೆ ನಡೆಸುತ್ತಿದ್ದ ಸಮಯದಲ್ಲೇ ಸಾಕ್ಷಿಯನ್ನು ಅಳಿಸಲು ಯತ್ನಿಸಿದ ಆ ಇಬ್ಬರು ಅತ್ಯಾಚಾರಿಗಳಿರಬಹುದು. ಸೆಮಿನರಿ ಮತ್ತು ಅಲ್ಲಿದ್ದ ಕ್ರೈಸ್ತ ಸನ್ಯಾಸಿನಿಯರನ್ನು ಬಲ್ಲವರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರನ್ನು ಬಂಧಿಸಲು ಪೊಲೀಸರು ಬಲೆಬೀಸಿದ್ದಾರೆ. [ಸೆಮಿನರಿಯಲ್ಲಿ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ]
ಹೆಣ್ಣೂರು ಬಂಡೆ ಬಳಿಯಿರುವ ಸೆಮಿನರಿಯಲ್ಲಿ ತರಬೇತಿಗೆಂದು ಬಂದಿದ್ದ ಯುವತಿ ಹೇಳುವುದೇನೆಂದರೆ, ಯುವಕರಿಬ್ಬರು ತನ್ನ ಕೋಣೆಗೆ ಬಲವಂತವಾಗಿ ನುಗ್ಗಿ ತನ್ನ ಕಣ್ಣಿಗೆ ಯಾವುದೋ ಸ್ಪ್ರೇ ಸಿಂಪಡಿಸಿದ್ದು ಮಾತ್ರ ನೆನಪಿದೆ. ಬಲ್ಲ ಮೂಲಗಳ ಪ್ರಕಾರ, ಆಕೆಯನ್ನು ಪ್ರೀತಿಸುತ್ತಿದ್ದ ಯುವಕನೇ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ವಿದೇಶಿಯರು ಸೇರಿದಂತೆ ಚರ್ಚಿಗೆ ಬರುತ್ತಿದ್ದ ಹಲವಾರು ಯುವಕರನ್ನು ಕರೆಯಿಸಿ ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ. ಅತ್ಯಾಚಾರದಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಯುವತಿಯನ್ನು ಕೌನ್ಸೆಲಿಂಗ್ ಗೆಂದು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಆಕೆ ಸಂಪೂರ್ಣ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲ ಸಮಯ ಬೇಕಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
ಈ ನಡುವೆ, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರದ ಘಟನೆಗಳು ಒಂದಾದ ಮೇಲೊಂದಂತೆ ಬೆಳಕಿಗೆ ಬರುತ್ತಿವೆ. ವೈಯಾಲಿ ಕಾವಲ್ ನಲ್ಲಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಕಾರವಾರದ ಅಂಕೋಲಾದಲ್ಲಿ ಕೂಡ 60 ವರ್ಷದ ವೃದ್ಧನೊಬ್ಬ ಯುವತಿಯರಿಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ತಿಳಿದುಬಂದಿದ್ದು, ಆತನನ್ನು ಬಂಧಿಸಲಾಗಿದೆ.