ಸನ್ಯಾಸ ದೀಕ್ಷೆಗೆ ಶರಣಾದ ನಟಿ ರಂಜಿತಾ
ಬೆಂಗಳೂರು, ಡಿ. 27 : ಆಶ್ಚರ್ಯಕರ ಬೆಳವಣಿಗೆಯಲ್ಲಿ ತಮಿಳು ನಟಿ ರಂಜಿತಾ ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಶುಕ್ರವಾರ ನಿತ್ಯಾನಂದ ಸ್ವಾಮಿಗಳ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರಂಜಿತಾ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು, ದೀಕ್ಷೆ ಸ್ವೀಕರಿಸಿದ ನಂತರ ರಂಜಿತಾ ಅವರ ಹೆಸರನ್ನು ಮಾ ಆನಂದಮಯೀ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ನಿತ್ಯಾನಂದ ಸ್ವಾಮಿಗಳ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ರಂಜಿತಾ (38) ಅವರಿಗೆ ನಿತ್ಯಾನಂದ ಸ್ವಾಮಿಗಳು ಸನ್ಯಾಸ ದೀಕ್ಷೆ ನೀಡಿದ್ದಾರೆ. ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ರಂಜಿತಾ ಅವರ ಹೆಸರನ್ನು ಮಾ ಆನಂದಮಯೀ ಎಂದು ನಿತ್ಯಾನಂದ ಸ್ವಾಮಿಗಳು ಬದಲಾವಣೆ ಮಾಡಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ನಿತ್ಯಾನಂದ ಸ್ವಾಮಿಯ ಭಕ್ತರಾಗಿದ್ದ ನಟಿ ರಂಜಿತಾ, ನಿತ್ಯಾನಂದ ಸ್ವಾಮಿಯ ರಾಸಲೀಯ ವಿಡಿಯೋ ಬಹಿರಂಗವಾದಾಗ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ರಾಸಲೀಲೆ ವಿಡಿಯೋ ಬಹಿರಂಗಗೊಂಡ ನಂತರವೂ ಆಶ್ರಮದಲ್ಲಿ ನಡೆದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಂಜಿತಾ ಭಾಗವಹಿಸಿದ್ದರು. [ನಟಿ ರಂಜಿತಾ ಕ್ಷಮಾಪಣೆಗೆ ಆದೇಶ]
ಶುಕ್ರವಾರ ನಿತ್ಯಾನಂದ ಸ್ವಾಮಿಯವರ 37ನೇ ಹುಟ್ಟು ಹಬ್ಬದ ಪ್ರಯುಕ್ತ ನಿತ್ಯಾನಂದ ಸ್ವಾಮಿಗಳ ಆಶ್ರಮದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ರಂಜಿತಾ ಅವರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ನಿತ್ಯಾನಂದ ಸ್ವಾಮಿಗಳ ಹುಟ್ಟು ಹಬ್ಬದ ಸಮಯದಲ್ಲಿ ಅವರ ಶಿಷ್ಯರಿಗೆ ಸನ್ಯಾಸ ದೀಕ್ಷೆ ನೀಡುತ್ತಾರೆ. ಅದರಂತೆ ಈ ಬಾರಿಯ ಹುಟ್ಟು ಹಬ್ಬದಲ್ಲಿ ರಂಜಿತಾ ಅವರಿಗೆ ದೀಕ್ಷೆ ನೀಡಲಾಗಿದೆ. [ನಿತ್ಯಾನಂದ ಸ್ವಾಮಿಗೆ ಡಬಲ್ ರಿಲೀಫ್]
ಸದ್ಯ ದೊರಕಿರುವ ಮಾಹಿತಿಯಂತೆ ನಿತ್ಯಾನಂದ ಸ್ವಾಮಿಗಳ ಆಶ್ರಮದ ವಿದೇಶದ ಶಾಖೆಯೊಂದರ ಜವಾಬ್ದಾರಿಯನ್ನು ನಟಿ ರಂಜಿತಾ ಅವರಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಕಾವಿ ತೊಟ್ಟು ತಮ್ಮ ಸಂಪೂರ್ಣ ಜೀವನವನ್ನು ರಂಜಿತಾ ನಿತ್ಯಾನಂದರ ಆಶ್ರಮದಲ್ಲಿ ಕಳೆಯಬೇಕಾಗಿದೆ.
ಸ್ವಾಮೀಜಿಗಳ ವಿರೋಧ : ನಟಿ ರಂಜಿತಾ ಸನ್ಯಾಸ ದೀಕ್ಷೆ ಸ್ವೀಕರಿಸಿರುವುದು ಸರಿಯಾದ ಕ್ರಮವಲ್ಲ ಎಂದು ನಾಗನೂರು ಮಠದ ಬಸವ ಗೀತಾ ಮತಾ ಹೇಳಿದ್ದಾರೆ. ಸನ್ಯಾಸತ್ವ ಎಂಬುದು ಒಂದು ಸಾಧನೆ. ವೈಭವಯುತ ಜೀವನ ನಡೆಸಿದ ರಂಜಿತಾ ತಕ್ಷಣ ಸನ್ಯಾಸ ದೀಕ್ಷೆ ಸ್ವೀಕರಿಸಿರುವುದು ಸರಿಯಲ್ಲ. ಅದಕ್ಕೆ ಸಾಧನೆ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ ನಂತರ ಜಪ, ಆಧ್ಯಾತ್ಮದ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ಆದರೆ, ರಂಜಿತಾ ಅವರು, ವೈಭವಯುತವಾದ ಜೀವನ ನಡೆಸಿದರು. ಅವರು ಯಾವುದೇ ಸಾಧನೆ ಇಲ್ಲದೇ ಸನ್ಯಾಸತ್ವ ಪಡೆದಿದ್ದಾರೆ. ನಿತ್ಯಾನಂದರ ಆಶ್ರಮದಲ್ಲಿ ಸನ್ಯಾಸಿಗಳಿಗೆ ಪೂರಕವಾದ ವಾತಾವರಣವಿದೆಯೇ ಎಂದು ಅವರು ಪ್ರಶ್ನಿಸಿದರು.