ಅವಿರತದಿಂದ ಜ.2ರಂದು ಸಂಸದಲ್ಲಿ ಸಂಗೀತ 'ರಂಗವಲ್ಲಿ'
ಬೆಂಗಳೂರು, ಡಿ. 29 : ವರ್ಷದುದ್ದಕ್ಕೂ ನಾನಾ ಬಗೆಯ ಕಾರ್ಯಕ್ರಮಗಳ ಮೂಲಕ ಕನ್ನಡದ ವಾತಾವರಣವನ್ನು ಹಸಿರಾಗಿಡಲು ತುಡಿಯುತ್ತಿರುವ ಮತ್ತು ದುಡಿಯುತ್ತಿರುವ 'ಅವಿರತ' ತಂಡ 'ದೃಶ್ಯ ಕಾವ್ಯ' ತಂಡದ ಜೊತೆಗೂಡಿ 'ರಂಗವಲ್ಲಿ' ಎಂಬ ಒಂದು ವಿನೂತನವಾದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡದ ಹಿರಿಯ ನಾಟಕಕಾರರೂ ಚಿತ್ರರಂಗದ ಗೀತ ರಚನಕಾರರೂ ಆಗಿರುವ ಗೋಪಾಲ ವಾಜಪೇಯಿ ಮತ್ತು ಡಾ. ಕೆ. ವೈ. ನಾರಾಯಣ ಸ್ವಾಮಿ ಅವರು ಬರೆದಿರುವ ರಂಗ ಗೀತೆಗಳ ಅಪೂರ್ವ ಕಾರ್ಯಕ್ರಮ ಈ 'ರಂಗವಲ್ಲಿ.' ಈ ಮಹನೀಯರಿಬ್ಬರ ಬೇರೆ ಬೇರೆ ನಾಟಕ ಕೃತಿಗಳಿಂದ ಆಯ್ದ, ತಲಾ ಹತ್ತು ಸುಪ್ರಸಿದ್ಧ ರಂಗ ಗೀತೆಗಳು ಪ್ರಸ್ತುತ ಕಾರ್ಯಕ್ರಮದ ಆಕರ್ಷಣೆ ಎನಿಸಲಿವೆ, ರಂಗ ರಸಿಕರ ಮನ ತಣಿಸಲಿವೆ.
ಬೆಂಗಳೂರಿನ ಜೆ. ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ 'ಸಂಸ' ಬಯಲು ರಂಗಮಂದಿರದಲ್ಲಿ, 2016ರ ಜನವರಿ 2, ಶನಿವಾರ ಸಂಜೆ 5:30ಕ್ಕೆ ಶುರುವಾಗಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎ.ದಯಾನಂದ್ ಆಗಮಿಸಲಿದ್ದಾರೆ.
ಯುವ ಗಾಯಕರಾದ ರಾಮಚಂದ್ರ ಹಡಪದ್, ಸ್ಪರ್ಶಾ ಆರ್. ಕೆ., ಶೃತಿ ತುಮಕೂರು ಮತ್ತು ತಂಡದವರು ನಡೆಸಿಕೊಡಲಿರುವ ಈ ಅಪರೂಪದ ಕಾರ್ಯಕ್ರಮ 'ಮೂರು ಗಂಟೆಗಳ ರಂಗ ಸಂಗೀತ ಸಂಭ್ರಮ'ವಾಗಲಿದೆ. ಟಿಕೆಟ್ ಬೆಲೆ ಕೇವಲ 100 ರು.ಗಳು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 95919 98735.
ಅವಿರತ ಕುರಿತು : 'ಅವಿರತ' ತಂಡವು ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. 'ಅವಿರತ'ದಿಂದ ಹಲವಾರು ನಾಟಕ, ಕಲಾತ್ಮಕ ಚಿತ್ರಗಳ ವಿಶೇಷ ಪ್ರದರ್ಶನ, ಸಂಗೀತ ಸಂಜೆ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ.