ಕಾನೂನು ಕಟ್ಟುನಿಟ್ಟಾಗಿ ಪಾಲಿಸಿ: ಸುದ್ದಿ ಮಾಧ್ಯಮಗಳಿಗೆ ಮೂಗುದಾರ
ಬೆಂಗಳೂರು, ಮಾರ್ಚ್ 11: ಟೆಲಿವಿಷನ್ ಕಾರ್ಯಕ್ರಮಗಳ ಪ್ರಸಾರದ ವೇಳೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಸುದ್ದಿ ಮಾಧ್ಯಮಗಳಿಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ಕಾಯ್ದೆ 1995ರ ಸೆಕ್ಷನ್ 5 ಮತ್ತು ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಮಯ, 1994ರ 6ನೇ ನಿಯಮದ ಅಡಿ ಉಲ್ಲೇಖಿಸಿರುವ 'ಕಾರ್ಯಕ್ರಮ ಸಂಹಿತೆ'ಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಹೇಳಿದೆ.
ಹೈಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ಕಾಯ್ದೆಯಡಿಯ ನಿಯಮಕ್ಕೆ ಪೂರಕವಾಗಿರುವ ಅಂಶಗಳನ್ನು ಚಾನೆಲ್ಗಳು ಪ್ರಸಾರ ಮಾಡುವುದನ್ನು ನಿರ್ಬಂಧಿಸಿದ್ದಾರೆ.
6 ಸಚಿವರು ನಿರಾಳ, ಮಾನಹಾನಿ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ
ವಕೀಲ ಆತ್ಮ ವಿ. ಹಿರೇಮಠ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಕಾರ್ಯಕ್ರಮ ಸಂಹಿತೆಗಳಿಗೆ ಕೇಬಲ್ ಟಿವಿ ನೆಟ್ವರ್ಕ್ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಎಂದು ಸೂಚನೆ ನೀಡಿತ್ತು. ಬೆಂಗಳೂರು ನಗರದಲ್ಲಿ ಈ ಕಾಯ್ದೆಯಡಿ ಅಧಿಕೃತ ಅಧಿಕಾರಿಯಾಗಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ವಿಚಾರವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಭರವಸೆ ನೀಡಿತ್ತು.
ಕಮಲ್ ಪಂತ್ ಆದೇಶ
ಕೋರ್ಟ್ ಆದೇಶದಂತೆ ಕಮಲ್ ಪಂತ್ ಅವರು ಮಾರ್ಚ್ 9ರಂದು ಕೇಬಲ್ ಟಿವಿ ನೆಟ್ವರ್ (ನಿಯಂತ್ರಣ) ಕಾಯ್ದೆಯ ಸೆಕ್ಷನ್ 19 ಅಡಿ ನಿರ್ದೇಶನ ಹೊರಡಿಸಿದ್ದಾರೆ. ಅಲ್ಲದೆ, ಆದೇಶದ ಯಾವುದೇ ಉಲ್ಲಂಘನೆಯು ಕಾಯ್ದೆಯ ಸೆಕ್ಷನ್ 16ರ ಅಡಿ ವಿಚಾರಣೆಗೆ ಅರ್ಹವಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶಿಕ್ಷೆಯ ಪ್ರಮಾಣವೇನು?
ಕಾನೂನಿನ ಪ್ರಕಾರ ಈ ಕಾಯ್ದೆಯ ಉಲ್ಲಂಘನೆಯ ಪ್ರಕರಣಗಳಲ್ಲಿ, ಮೊದಲ ಬಾರಿಗೆ ಅಪರಾಧಕ್ಕೆ ಎರಡು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1,000 ರೂ ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. ಅಪರಾಧ ಪುನರಾವರ್ತನೆಯಾದರೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರೂ ದಂಡ ವಿಧಿಸಬಹುದಾಗಿದೆ.
ವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಖಾಸಗಿತನದ ಹಕ್ಕಿನ ಉಲ್ಲಂಘನೆ
ರಮೇಶ್ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದಲ್ಲಿ ಟೆಲಿವಿಷನ್ ಮಾಧ್ಯಮಗಳು ವ್ಯಕ್ತಿಗಳ ಖಾಸಗಿತನವನ್ನು ತೀವ್ರವಾಗಿ ಉಲ್ಲಂಘಿಸಿ ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡಿದ್ದವು. ಇಂತಹ ನಡೆಗಳಿಗೆ ಕಡಿವಾಣ ಹಾಕಬೇಕು. ಸಂವಿಧಾನದ 21ನೇ ವಿಧಿಯಲ್ಲಿನ ಖಾಸಗಿತನದ ಹಕ್ಕಿನ ರಕ್ಷಣೆ ಕುರಿತಾದ ನ್ಯಾಯಮೂರ್ತಿ ಕೆಎಸ್ ಪುಟ್ಟಸ್ವಾಮಿ ಪ್ರಕರಣದ ತೀರ್ಪನ್ನು ಜಾರಿಗೆ ತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ಕೋರಿ ಆತ್ಮ ಹಿರೇಮಠ ಕೋರಿದ್ದರು.
Recommended Video
ಮಾಧ್ಯಮಗಳಿಗೆ ಮೂಗುದಾರ
ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳು ಮತ್ತು ಅಂಶಗಳು ನಿಯಮ 6ರ ಉಲ್ಲಂಘನೆಯಾಗಿದೆ. ಕೀಳು ಅಭಿರುಚಿಯ, ಅಶ್ಲೀಲ ಅಂಶಗಳ, ಮಾನಹಾನಿಕರ, ಉದ್ದೇಶಪೂರ್ವಕ ಸುಳ್ಳು, ಅರ್ಧ ಸತ್ಯ ಮತ್ತು ತಿದ್ದಿದ ವಿಚಾರಗಳನ್ನು ಪ್ರಸಾರ ಮಾಡುತ್ತಿದ್ದು, ಇವು ವ್ಯಕ್ತಿಗತವಾಗಿ ಕೆಟ್ಟ ಹೆಸರು ತರುವಂತಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಈಗ ಪೊಲೀಸ್ ಆಯುಕ್ತರ ಆದೇಶವು ಸುದ್ದಿ ಮಾಧ್ಯಮಗಳಿಗೆ ಮೂಗುದಾರ ಹಾಕುವಂತಿವೆ.