ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ, ಯಾರಿಗೆಲ್ಲ ಕಾದಿದೆ ಸಂಕಷ್ಟ?
ಬೆಂಗಳೂರು, ಮಾ. 09: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ಕ್ಷಣಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. 'ಸಿಡಿ'ಯೊಂದಿಗೆ ದೂರು ಸಲ್ಲಿಸಿದ್ದ ದಿನೇಶ್ ಕಲ್ಲಹಳ್ಳಿ 6 ದಿನಗಳ ಬಳಿಕ ಮಾರ್ಚ್ 7ರಂದು ದೂರು ವಾಪಾಸ್ ಪಡೆಯುವುದಾಗಿ ಹೇಳಿದ್ದರು.
ದಿನೇಶ್ ಕಲ್ಲಹಳ್ಳಿ ದೂರು ವಾಪಾಸ್ ಪಡೆಯುವುದಾಗಿ ಹೇಳುತ್ತಿದ್ದಂತೆಯೆ, ತುರ್ತು ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು, ರಮೇಶ್ ಜಾರಕಿಹೊಳಿ ಅವರನ್ನು ಹನಿ ಟ್ರ್ಯಾಪ್ ಮಾಡಲಾಗಿದೆ. ಪ್ರಕರಣದಲ್ಲಿರುವ ಮಹಿಳೆಯ ಹಿಂದೆ ನಾಲ್ವರು ಪ್ರಭಾವಿಗಳಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು, ಪ್ರಕರಣದ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಹೊರಗೆ ಬಂದು ಮಾತನಾಡಬೇಕು ಎಂದೂ ಒತ್ತಾಯಿಸಿದ್ದರು.
ಜಾರಕಿಹೊಳಿ ವಿರುದ್ದ ಕೇಸ್ ಏನೋ ವಾಪಸ್ ಪಡೆಯಲಾಯಿತು: ಆದರೆ..?
'ಸಿಡಿ' ಬಿಡುಗಡೆ ಹಿನ್ನೆಲೆಯಲ್ಲಿ ಅನೈತಿಕ ಸರ್ಕಾರ ಎಂದು ಆರೋಪ ಮಾಡಿ ಬಜೆಟ್ ಕಲಾಪ ಬಹಿಷ್ಕಾರ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮತ್ತಷ್ಟು ಮುಜುಗುರವನ್ನುಂಟು ಮಾಡಿತ್ತು. ಜೊತೆಗೆ ಇಂದು ಮಾರ್ಚ್ 9 ರಂದು ಇದೇ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪ ಮಾಡಲು ಕಾಂಗ್ರೆಸ್ ತೀರ್ಮಾನ ಮಾಡಿದೆ ಎಂದು ಮೂಲಗಳು ತಿಳಿಸಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಅಜ್ಞಾತ ಸ್ಥಳದಿಂದ ಹೊರಬಂದು ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅವರ ಸುದ್ದಿಗೋಷ್ಠಿಯಿಂದ ಯಾರಿಗೆಲ್ಲ ಸಂಕಷ್ಟ ಉಂಟಾಗಲಿದೆ? ಮುಂದೆ ಓದಿ.
'ಸಿಡಿ'ತಲೆ ಅಸ್ತ್ರ ಎದುರಿಸಲು ಸಿದ್ಧವಾಗಿದೆ ಬಿಜೆಪಿ
ಇಂದು ಮಾರ್ಚ್ 9 ರಂದು ಉಭಯ ಸದನಗಳಲ್ಲಿ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ಹಾಗೂ ಆರು ಸಚಿವರು ಕೋರ್ಟ್ ಮೊರೆ ಹೋಗಿರುವುದನ್ನು ಪ್ರಸ್ತಾಪಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗುರವನ್ನುಂಟು ಮಾಡಲು ನಿನ್ನೆ (ಮಾ.08) ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಕಾಂಗ್ರೆಸ್ ಪಕ್ಷ 'ಸಿಡಿ' ವಿಚಾರ ಪ್ರಸ್ತಾಪಿಸಿದರೆ ಪರ್ಯಾಯವಾಗಿ ಕಾಂಗ್ರೆಸ್ ನಾಯಕರ 'ಇದೇ ರೀತಿಯ' ಪ್ರಕರಣಗಳನ್ನು ಪ್ರಸ್ತಾಪಿಸಲು ಬಿಜೆಪಿ ಸಿದ್ಧವಾಗಿದೆ. ಜೊತೆಗೆ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಮಹತ್ವದ ವಿಚಾರಗಳನ್ನು ಹೇಳಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಕಾಂಗ್ರೆಸ್ ನಾಯಕರಿಗೆ ಸಿಎಂ ಪಂಥಾಹ್ವಾನ
ಇನ್ನು ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ನಡಸಿದ ಸಿಎಂ ಯಡಿಯೂರಪ್ಪ ಅವರು 'ಸಿಡಿ' ಬಿಡುಗಡೆ ಹಾಗೂ ಆ ನಂತರದ ಬೆಳವಣಿಗೆಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ನಾವು ಸಿದ್ಧ ಎಂದು ಪ್ರಕಟಿಸಿದ್ದಾರೆ. ಇದೇ ಕಾರಣದಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ. ಸಿಡಿ ಬಿಡುಗಡೆ ಬಳಿಕ ಅಜ್ಞಾತರಾಗಿರುವ ರಮೇಶ್ ಜಾರಕಿಹೊಳಿ ಅವರು ಇದೀಗ ಒಂದು ವಾರದ ಬಳಿಕ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರ ಸುದ್ದಿಗೋಷ್ಠಿ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ 'ಆ ನಾಲ್ವರ' ಹೆಸರುಗಳನ್ನು ರಮೇಶ್ ಜಾರಕಿಹೊಳಿ ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಇದೆ.
ಸಿಡಿ ಕೇಸ್ ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ: ಸತೀಶ್ ಜಾರಕಿಹೊಳಿ ಏನಂದ್ರು?
ರಮೇಶ್ ಜಾರಕಿಹೊಳಿ ಪರ ಶಾಸಕರ ಬ್ಯಾಟಿಂಗ್
ಇದೇ ಸಂದರ್ಭದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆ್ಯಂಡ್ ಟೀಂ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ದಿನೇಶ್ ಕಲ್ಲಹಳ್ಳಿ ಅವರು ದೂರು ವಾಪಾಸ್ ಪಡೆದಿರುವುದರಿಂದ ರಮೇಶ್ ಜಾರಕಿಹೊಳಿ ಅವರನ್ನು ಮತ್ತೆ ಮಂತ್ರಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದೆ.
ಶಾಸಕರಾದ ರೇಣುಕಾಚಾರ್ಯ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜೂ ಗೌಡ, ಶಿವರಾಜ್ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ಯಡಿಯೂರಪ್ಪ ಅವರನ್ನು ನಿನ್ನೆ (ಮಾ.8) ರಾತ್ರಿ ಭೇಟಿ ಮಾಡಿ ಈ ಒತ್ತಾಯ ಮಾಡಿದ್ದಾರೆ. ಹೀಗಾಗಿ ಮತ್ತೊಂದು ಬೆಳವಣಿಗೆ ಬಿಜೆಪಿಯಲ್ಲಿ ನಡೆದಿದೆ.
Recommended Video
ನಿರ್ಣಾಯಕ ಹಂತಕ್ಕೆ 'ಸಿಡಿ' ಪ್ರಕರಣ
ಉಭಯ ಸದನಗಳಲ್ಲಿ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜಾಗಿದೆ. ಹೀಗಾಗಿ ಅದಕ್ಕಿಂತ ಮೊದಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು (ಮಾ.09) ಬೆಳಗ್ಗೆ 10 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಅಲ್ಲಿ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಸಲಹೆಯಂತೆ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಲಿದ್ದಾರೆ.
ಇಲ್ಲಿದೆ ದಿನೇಶ್ ಕಲ್ಲಹಳ್ಳಿ ಯುಟರ್ನ್ ಹೊಡೆದ ಹಿಂದಿನ ಅಸಲಿ 'ಸಿಡಿ' ಕಹಾನಿ!
ಇಡೀ ಪ್ರಕರಣದ ಹಿಂದೆ ನಾಲ್ವರಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಆರೋಪಿಸಿದ್ದರು. ಇದು ನಮ್ಮ ಕುಟುಂಬದ ಮರ್ಯಾದೆಯ ಪ್ರಶ್ನೆ. ಇಡೀ ಪ್ರಕರಣದಲ್ಲಿ ಸಂತ್ರಸ್ತರಾಗಿರುವುದು ರಮೇಶ್ ಮಾತ್ರ ಎಂದು ಅವರು ಹೇಳಿದ್ದರು. ಆದರೆ ಪ್ರಕರಣದ ಹಿಂದೆ ಯಾರಿದ್ದಾರೆ? ಎಂದು ಹೇಳಿರಲಿಲ್ಲ. ಇದೀಗ ರಮೇಶ್ ಜಾರಕಿಹೊಳಿ ಅವರು ಆ ನಾಲ್ವರು ಪ್ರಭಾವಿಗಳ ಹೆಸರುಗಳನ್ನು ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ 'ಸಿಡಿ' ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.