ರಮೇಶ್ ಜಾರಕಿಹೊಳಿ-ಸಿದ್ದರಾಮಯ್ಯ ಸ್ವಾರಸ್ಯಕರ ಸಂಭಾಷಣೆ
ಬೆಂಗಳೂರು, ಡಿಸೆಂಬರ್ 13: ಆಪರೇಷನ್ ಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಇಂದು ಮಾಜಿ ಅನರ್ಹ, ಹಾಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಆಗಿದ್ದಾರೆ.
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ, 'ಸಿದ್ದರಾಮಯ್ಯ ಎಂದಿಗೂ ನಮ್ಮ ಗುರು' ಎಂದಿದ್ದಾರೆ. ಆದರೆ ಆಸ್ಪತ್ರೆಯ ಒಳಗೆ ಇಬ್ಬರ ನಡುವೆ ನಡೆದಿದೆ ಎನ್ನಲಾಗಿರುವ ಸಂಭಾಷಣೆ ಸ್ವಾರಸ್ಯಕರವಾಗಿದೆ.
ಪಕ್ಷ ಬದಲಾದರೂ ಸಿದ್ದರಾಮಯ್ಯ ಈಗಲೂ ನಮ್ಮ ಗುರುಗಳು: ರಮೇಶ್
ಸಿದ್ದರಾಮಯ್ಯ ಭೇಟಿಗೆ ಹೋದ ರಮೇಶ್ ಜಾರಕಿಹೊಳಿ ಅವರನ್ನು ಹಳೆಯ ಸಲುಗೆಯಿಂದಲೇ ಸಿದ್ದರಾಮಯ್ಯ ಬರಮಾಡಿಕೊಂಡಿದ್ದಾರೆ.
ಮಾತಿನ ಚತುರರಾಗಿರುವ ಸಿದ್ದರಾಮಯ್ಯ, 'ಏನಯ್ಯಾ? ಬಾ ಅಂದಾಗ ಬರಲಿಲ್ಲ, ಈಗ ಬಂದ್ಯಾ?' ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ವ್ಯಂಗ್ಯದ ಮಾತಿಗೆ ಪೆಚ್ಚಾದ ರಮೇಶ್ ಕುಮಾರ್, ನಕ್ಕು ಸುಮ್ಮನಾಗಿದ್ದಾರೆ. ನಂತರ ಉಭಯಕುಶಲೋಪರಿ ನಡೆದಿದ್ದು, ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಬೇಗ ಗುಣಮುಖರಾಗಿರೆಂದು ಹಾರೈಸಿ ರಮೇಶ್ ಜಾರಕಿಹೊಳಿ ಹೊರಟಿದ್ದಾರೆ.
ಸಾಯೋವರೆಗೂ ನಾನೂ ಸಿದ್ದರಾಮಯ್ಯ ಸ್ನೇಹಿತರು: ಈಶ್ವರಪ್ಪ
ಮೈತ್ರಿ ಸರ್ಕಾರವನ್ನು ಕೆಡುವುದರಲ್ಲಿ ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯುವ ನಿಶ್ಚಯ ಮಾಡಿದಾಗ ಸಿದ್ದರಾಮಯ್ಯ ಅವರು ರಮೇಶ್ ಅವರನ್ನು ನಿರ್ಧಾರ ಬದಲಿಸುವಂತೆ ಕೇಳಿದ್ದರು. ಆದರೆ ರಮೇಶ್ ಕೊನೆಗೂ ಮೈತ್ರಿ ಸರ್ಕಾರ ಉರುಳಿಸಿಯೇ ಬಿಟ್ಟರು.
ಮೈತ್ರಿ ಸರ್ಕಾರ ಉರುಳಿದ ಬಳಿಕ ಮೊದಲ ಬಾರಿಗೆ ಸಿದ್ದರಾಮಯ್ಯ-ರಮೇಶ್ ಜಾರಕಿಹೊಳಿ ಇಂದು ಎದುರುಬದುರಾದರು.