"ಕೈಲಾಸ" ಸ್ವಾಮಿ ನಿತ್ಯಾನಂದ ಪ್ರಕರಣದ ಹಾದಿ ಹಿಡಿಯುತ್ತಾ ಜಾರಕಿಹೊಳಿ ರಾಸಲೀಲೆ ಕೇಸ್ !
ಬೆಂಗಳೂರು, ಮಾರ್ಚ್ 20: ಮಾಜಿ ಸಚಿವ ಜಾರಕಿಹೊಳಿ ರಾಸಲೀಲೆ ಪ್ರಕರಣ "ಕೈಲಾಸ" ಸ್ವಂತ ರಾಜ್ಯ ಸ್ಥಾಪಕ ಸ್ವಾಮಿ ನಿತ್ಯಾನಂದ ಅವರನ್ನು ನೆನಪಿಸುತ್ತಿದೆ. ತಮಿಳು ನಟಿ ಜತೆಗಿನ ರಾಸಲೀಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ವಾಮಿ ನಿತ್ಯಾನಂದ ಪ್ರಕರಣದ ಹಾದಿಯಲ್ಲೇ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಾಗುವ ಲಕ್ಷಣ ಕಾಣಿಸುತ್ತಿದೆ. ಎರಡು ಪ್ರಕರಣಗಳಲ್ಲಿ ಇರುವ ಸಾಮ್ಯತೆ ಇದೀಗ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕೊನೆ ಟ್ವಿಸ್ಟ್ ಕೊಡ್ತಾಳಾ ಸಿಡಿ ಗರ್ಲ್ ?
ನಿತ್ಯಾನಂದ ರಾಸಲೀಲೆ ಪ್ರಕರಣ
ಬಿಡದಿ ಧ್ಯಾನಪೀಠಂ ಸ್ಥಾಪಕ ಸ್ವಾಮಿ ನಿತ್ಯಾನಂದ ವಿರುದ್ಧ ಖಾಸಗಿ ವಾಹಿನಿಯಲ್ಲಿ ರಾಸಲೀಲೆ ವಿಡಿಯೋ ಸ್ಫೋಟಗೊಂಡಿತ್ತು. ನಟಿ, ಆಶ್ರಮದ ಭಕ್ತೆ ಎಂಬಾಕೆ ಜತೆ ಸ್ವಾಮಿ ನಿತ್ಯಾನಂದ ಏಕಾಂತ ಕ್ಷಣಗಳನ್ನು ಕಳೆದ ವಿಡಿಯೋ ಪ್ರಸಾರವಾಗಿತ್ತು. ವಿಶೇಷ ಅಂದರೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ನಟಿ ದೂರು ನೀಡಿರಲಿಲ್ಲ. ಒಂದು ರೀತಿಯಲ್ಲಿ ಸಹಮತದೊಂದಿಗೆ ಏಕಾಂತವಾಗಿ ಕಾಣಿಸಿಕೊಂಡಿದ್ದರು ಎಂಬುದನ್ನು ಸಾರಿ ಹೇಳಿತ್ತು. ಲೆನಿನ್ ಎಂಬ ಕಾರು ಚಾಲಕ ಈ ವಿಡಿಯೋ ಮಾಧ್ಯಮಗಳಿಗೆ ನೀಡಿದ್ದ. ವಿಡಿಯೋ ಪ್ರಸಾರವಾದ ಬಳಿಕ ನಿತ್ಯಾನಂದ ವಿರುದ್ಧ ಅತ್ಯಾಚಾರ ಆರೋಪ ಹೊರಿಸಲಾಯಿತು. ಇದೊಂದು ನಕಲಿ ವಿಡಿಯೋ ಎಂದು ಹೇಳಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಇದು ನಕಲಿ ವಿಡಿಯೋ ಅಲ್ಲ. ಅಸಲಿ, ಆದರೆ ವಿಡಿಯೋ ಎಡಿಟ್ ಆಗಿದೆ ಎಂದಷ್ಟೇ ಹೇಳಲಾಗಿತ್ತು. ವಿಡಿಯೋ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಮಾನಹಾನಿಕರ ಕೇಸು ದಾಖಲಿಸಲಾಯಿತು. ನಿತ್ಯಾನಂದ ವಿರುದ್ಧದ ಅತ್ಯಾಚಾರ ಆರೋಪ ಕುರಿತು ವಿಶೇಷ ತನಿಖಾ ತಂಡ ರಚನೆಯಾಗಿತ್ತು. ನಿತ್ಯಾನಂದ ಸ್ವಾಮೀಜಿ ಪರಾರಿಯಾಗಿದ್ದ. ಹಿಮಾಚಲ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಸ್ವಾಮಿಯನ್ನು ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿದ್ದರು. ಆನಂತರ ನಿತ್ಯಾನಂದ ವಿರುದ್ಧ ಅಮೆರಿಕಾದ ಭಕ್ತೆ ಅತ್ಯಾಚಾರ ಆರೋಪ ಹೊರಿಸಿದರು. ನಿತ್ಯಾನಂದ ಆಶ್ರಮದಲ್ಲಿ ಅಪ್ರಾಪ್ತ ಮಕ್ಕಳಿಗೆ ಕಿರಕುಳ ನೀಡಿದ ಆರೋಪ ಎದುರಾಯಿತು. ಸ್ವಾಮಿ ನಿತ್ಯಾನಂದ ವಿರುದ್ಧ ನಾನಾ ಕೇಸು ದಾಖಲಾಗುತ್ತಿದ್ದಂತೆ ಭಾರತವನ್ನೇ ತೊರೆದು "ಇಕ್ವಿಡಾರ್" ನಲ್ಲಿ ಸ್ವತಂತ್ರ್ಯ ಐಲ್ಯಾಂಡ್ ಖರೀದಿ ಮಾಡಿ "ಕೈಲಾಸ " ರಾಜ್ಯ ಕಟ್ಟಿಕೊಂಡಿದ್ದಾರೆ.
ಜಾರಕಿಹೊಳಿ ರಾಸಲೀಲೆ ಪ್ರಕರಣ
ಇದ್ದಕ್ಕಿದ್ದಂತೆ ಮಾ. 2 ರಂದು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸ್ಫೋಟಗೊಂಡಿತು. ತನಗೆ ಅನ್ಯಾಯವಾಗಿದೆ ಎಂದು ಸಂತ್ರಸ್ತೆ ಎನ್ನಲಾದ ಯುವತಿ ದೂರು ಕೊಡಲಿಲ್ಲ. ಬದಲಿಗೆ ದಿನೇಶ್ ಕಲ್ಲಹಳ್ಳಿ ಎಂಬಾತ ದೂರು ನೀಡಿದ. ಪ್ರಕರಣ ಯಾವಾಗ ಉಲ್ಟಾ ಹೊಡೆಯುಲು ತೀರ್ಮಾನಿಸಿತೋ ಅವಾಗ ದೂರು ವಾಪಸು ಪಡೆದ. ಇದೊಂದು ನಕಲಿ ವಿಡಿಯೋ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು. ಷಡ್ಯಂತ್ರ ಮಾಡಿ ನನ್ನ ವಿರುದ್ಧ ನಕಲಿ ವಿಡಿಯೋ ತಯಾರಿಸಿ ರಾಜಕೀಯವಾಗಿ ಮುಗಿಸಿದ್ದಾರೆ ಎಂದು ಹೇಳಿಕೊಂಡರು. ಕೊನೆಗೆ ಈ ಪ್ರಕರಣದ ತನಿಖೆಗಾಗಿ ಎಸ್ಐಟಿ ರಚನೆಯಾಗಿದೆ. ಸಂತ್ರಸ್ತೆ ಎನ್ನಲಾದ ಸಿಡಿ ಗರ್ಲ್ ನಾಪತ್ತೆಯಾಗಿದ್ದಾರೆ. ವಿಚಾರಣೆಗೆಂದು ನೋಟಿಸ್ ಕೊಟ್ಟರೂ ಬರುತ್ತಿಲ್ಲ. ಇನ್ನು ಯುವತಿ ಜತೆ ಸೇರಿರುವ ಶಂಕಿತರಿಗಾಗಿ ಎಸ್ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇನ್ನೂ ಅವರ ಸುಳಿವು ಸಿಕ್ಕಿಲ್ಲ. ಮುಂದೆ ಇದು ಯಾವ ಹಾದಿ ಪಡೆದುಕೊಳ್ಳಲಿದೆ ಎಂಬುದು ಎಲ್ಲರಿಗೂ ಕುತೂಹಲ ಕೆರಳಿಸಿದೆ. ನಿತ್ಯಾನಂದ ಮೇಲಿನ ಅತ್ಯಾಚಾರ ಪ್ರಕರಣ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳೇ ಈ ಪ್ರಕರಣವನ್ನು ಸಹ ತನಿಖೆ ನಡೆಸುತ್ತಿದ್ದಾರೆ. ಈ ಎರಡು ಪ್ರಕರಣದಲ್ಲಿ ಇರುವ ಸಾಮ್ಯತೆ ಅಂಶಗಳು ಇಲ್ಲಿವೆ.
ನಿತ್ಯಾನಂದ ಹಾದಿಯಲ್ಲಿ ಜಾರಕಿಹೊಳಿ ಸಿಡಿ ಪ್ರಕರಣ!
ಸಾಮ್ಯತೆ 1 : 2010 ರಲ್ಲಿ ಆಗಲೂ ಬಿಜೆಪಿ ಸರ್ಕಾರವಿತ್ತು. ಈಗಲೂ ಬಿಜೆಪಿ ಸರ್ಕಾರವಿದೆ.
ಸಾಮ್ಯತೆ 2: ನಿತ್ಯಾನಂದ ವಿರುದ್ಧ ಪ್ರಕರಣದಲ್ಲಿ ಮಹಿಳೆ ದೂರು ಕೊಟ್ಟಿಲ್ಲ. ಜಾರಕಿಹೊಳಿ ಪ್ರಕರಣದಲ್ಲೂ ಸಂತ್ರಸ್ತೆ ಎನ್ನಲಾದ ಮಹಿಳೆ ದೂರು ನೀಡಿಲ್ಲ.
ಸಾಮ್ಯತೆ: 3: ನಿತ್ಯಾನಂದ ವಿರುದ್ಧ ಅತ್ಯಾಚಾರ ಆರೋಪಕ್ಕೆ ಎಸ್ಐಟಿ ರಚನೆ, ಜಾರಕಿಹೊಳಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಎಸ್ಐಟಿ ರಚನೆ
ಸಾಮ್ಯತೆ 4: ನಿತ್ಯಾನಂದ ಪ್ರರಕಣದಲ್ಲಿ ಎಸ್ಐಟಿ ಮುಖ್ಯಸ್ಥರಾಗಿದ್ದವರು ಕಮಲಪಂತ್ ಆಗಿದ್ದರು. ಎಸ್ಐಟಿ ತನಿಖಾಧಿಕಾರಿಗಳೇ ಜಾರಕಿ ಹೊಳಿ ಪ್ರಕರಣದಲ್ಲೂ ತನಿಖಾಧಿಕಾರಿಗಳು.
ಸಾಮ್ಯತೆ 5: ವಿಚಿತ್ರ ಅಂದರೆ ಇಲ್ಲಿ ಜಾರಕಿಹೊಳಿ ಕೊಟ್ಟಿರುವ ಬ್ಲಾಕ್ ಮೇಲ್, ರಾಜಕೀಯ ಷಡ್ಯಂತ್ರ ಸೇರ್ಪಡೆ.
Recommended Video
ಜಾರಕಿಹೊಳಿ ಪ್ರಕರಣದ ತಾರ್ಕಿಕ ಅಂತ್ಯ ?
ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಸ್ಫೋಟ ಪ್ರಕರಣ ಸಂಬಂಧ ಸಿಡಿ ಲೇಡಿಯ ಪ್ರಿಯತಮನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಶಂಕಿತ ಆರೋಪಿ ಎನ್ನಲಾದ ನರೇಶ್ ಮಾಡಿರುವ ವಿಡಿಯೋದಲ್ಲಿ "ಜಾರಕಿಹೊಳಿಯಿಂದ ಐದು ರೂಪಾಯಿ ಕೂಡ ಪಡೆದಿಲ್ಲ. ಬ್ಲಾಕ್ ಮೇಲ್ ಮಾಡಿಲ್ಲ" ಎಂಬ ಹೇಳಿಕೆ ಬಗ್ಗೆ ಎಸ್ಐಟಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಯನ್ನು ವಿಶೇಷ ತನಿಖಾ ತಂಡ ಗುರುವಾರ ರಾತ್ರಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದೆ. ಮಾಜಿ ಶಾಸಕರೊಬ್ಬರ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಶಂಕಿತರು ಹೊರ ರಾಜ್ಯಗಳಲ್ಲಿ ತಂಗಿರುವ ಬಗ್ಗೆ ಶಂಕಿಸಿರುವ ವಿಶೇಷ ತನಿಖಾ ತಂಡ ನೆರೆ ರಾಜ್ಯ ಪೊಲೀಸರ ನೆರವು ಪಡೆಯಲು ಮುಂದಾಗಿದೆ. ಶಂಕಿತರ ಹೇಳಿಕೆ ಪಡೆದ ಬಳಿಕ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ. ಸಂತ್ರಸ್ತೆ ಎನ್ನಲಾದ ಯುವತಿಯೇ ಸ್ವತಃ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದರೆ ಮುಂದಿನ ಹೆಜ್ಜೆ ಬಗ್ಗೆ ಎಸ್ಐಟಿ ಅಧಿಕಾರಿಗಳು ಈಗಲೇ ತಯಾರಿ ನಡೆಸಿದ್ದಾರೆ.