ಕೊನೆಗೂ ದಾಖಲಾಯ್ತು ದೂರು : ಮುಂದೇನು ಎಸ್ಐಟಿ ಕಥೆ ?
ಬೆಂಗಳೂರು, ಮಾರ್ಚ್ 13: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಸಂಬಂಧ ಮಾಜಿ ಶಾಸಕ ಎಂ.ವಿ. ನಾಗರಾಜ್ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ನೀಡಿರುವ ದೂರನ್ನು ಸದಾಶಿವನಗರ ಪೊಲೀಸರು ಸ್ವೀಕರಿಸಿದ್ದಾರೆ. ದೂರನ್ನಾಧರಿಸಿ ಎಫ್ಐಆರ್ ದಾಖಲಿಸಿ ಎಸ್ಐಟಿಗೆ ವರ್ಗಾವಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಮೂಲಕ ಸಿಡಿ ಸ್ಫೋಟದ ಎಸ್ಐಟಿ ತನಿಖೆಗೆ ಎದುರಾಗಿದ್ದ ತೊಡಕು ದೂರವಾಗಿದೆ.
ಏನಿದೆ ದೂರಿನಲ್ಲಿ: ರಮೇಶ್ ಜಾರಕಿಹೊಳಿ ಬಗ್ಗೆ ಸಂಚು ರೂಪಿಸಿ ನಕಲಿ ಸಿಡಿ ತಯಾರಿಸಲಾಗಿದೆ. ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸಲು ಈ ಷಡ್ಯಂತ್ರ ನಡೆದಿದೆ. ಇದರ ಹಿಂದೆ ಅನೇಕರ ಕೈವಾಡವಿದೆ. ಸಿಡಿ ಸ್ಫೋಟ ಕುರಿತು ಸಮಗ್ರ ತನಿಖೆ ಮಾಡಬೇಕು. ನಕಲಿ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲಾಗಿದೆ. ನಕಲಿ ಸಿಡಿ ಎಂದು ಭಾವಿಸಿ ಮೊದಲು ದೂರು ನೀಡಿರಲಿಲ್ಲ ಎಂದು ಉಲ್ಲೇಖಿಸಿ ಅಪರಿಚಿತರ ವಿರುದ್ಧ ದೂರು ನೀಡಲಾಗಿದೆ. ಜಾರಕಿಹೊಳಿ ಪರಮಾಪ್ತ ಹಾಗೂ ಮಾಜಿ ಶಾಸಕ ನಾಗರಾಜ್ ನೀಡಿರುವ ದೂರನ್ನು ಪರಿಗಣಿಸಿ ಸದಾಶಿವನಗರ ಪೊಲೀಸರು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಅವರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಎಫ್ಐಆರ್ ದಾಖಲಿಸಿ ಆನಂತರ ದೂರು ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
CD ಯುವತಿಗಾಗಿ ಎಸ್ಐಟಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ !
Recommended Video
ಎಫ್ಐಆರ್ ಆದಲ್ಲಿ ತನಿಖೆ ಚುರುಕು: ಸಿಡಿ ಸ್ಪೋಟ ಪ್ರಕರಣ ಸಂಬಂಧ ಈಗಾಗಲೇ ವಿಶೇಷ ತನಿಖಾ ತಂಡ ಆರು ಮಂದಿಯನ್ನು ವಶಕ್ಕೆ ಪಡೆದಿದೆ. ಬೀದರ್ ನ ಬಾಲ್ಕಿಯಲ್ಲಿ ಕಾನೂನು ವಿದ್ಯಾರ್ಥಿ ಸೇರಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಯುವಕರು ಮಿಸ್ಸಿಂಗ್ ಆಗಿದ್ದಾರೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡದ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಬಾಲ್ಕಿಯಲ್ಲಿ ವಶಕ್ಕೆ ಪಡೆದಿದ್ದ ಇಬ್ಬರು ಯುವಕರನ್ನು ಕಾನೂನು ಬದ್ಧಗೊಳಿಸುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನು ಕಳೆದ ಎರಡು ದಿನದಿಂದ ವಶಕ್ಕೆ ಪಡೆದಿದ್ದ ಆರು ಮಂದಿಯ ಪೈಕಿ ಅಗತ್ಯ ಇರುವರನ್ನು ಬಂಧಿಸುವ ಸಾಧ್ಯತೆಯಿದೆ. ಅಂತೂ ವಿಶೇಷ ತನಿಖಾ ತಂಡದ ತನಿಖೆಗೆ ಅಡ್ಡಿಯಾಗಿದ್ದ ತೊಡಕು ದೂರವಾಗಿದೆ.