ಜಾರಕಿಹೊಳಿ ಸಿಡಿ ಪ್ರಕರಣ: ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲು
ಬೆಂಗಳೂರು, ಮಾರ್ಚ್ 3: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣದಲ್ಲಿ ದೂರು ದಾಖಲಿಸಿರುವ ರಾಮನಗರ ಮೂಲದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರ ವಿರುದ್ಧವೇ ಬುಧವಾರ ದೂರು ದಾಖಲಾಗಿದೆ.
ಕರ್ನಾಟಕ ಕನ್ನಡಪರ ಸಂಘಟನೆ ಒಕ್ಕೂಟದ ಸಂಸ್ಥಾಪಕ ಪುಟ್ಟೇಗೌಡ ಅವರು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಅಸ್ಲೀಲ ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದಿನೇಶ್ ಕಲ್ಲಹಳ್ಳಿ ವಿರುದ್ಧ ಅವರು ದೂರು ಸಲ್ಲಿಸಿದ್ದಾರೆ. ಜತೆಗೆ ವಿಡಿಯೋದಲ್ಲಿರುವ ಸಂತ್ರಸ್ತೆ ಹಾಗೂ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿರುವುದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಸಂತ್ರಸ್ತ ಯುವತಿಯು ಸಮ್ಮತಿಯಿಂದಲೇ ವಿಡಿಯೋ ಕಾಲ್ ಮಾಡಿದ್ದಾರೆ. ಲೈಂಗಿಕ ಕ್ರಿಯೆಗೂ ಅವರು ಸಮ್ಮತಿಸಿದ್ದಾರೆ. ಇಲ್ಲಿ ಬಲವಂತದ ಲೈಂಗಿಕ ಕ್ರಿಯೆ ನಡೆದಿಲ್ಲ. ಸಮ್ಮತಿಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆದಿದ್ದು, ಇಂತಹ ಪ್ರಕರಣಗಳಲ್ಲಿ ಅನ್ಯಾಯವಾಗಿದ್ದರೆ ಸಂತ್ರಸ್ತೆ ದೂರು ನೀಡಬೇಕು. ಇಲ್ಲಿ ಯುವತಿ ದೂರು ನೀಡಿಲ್ಲ. ಆದರೆ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಷಡ್ಯಂತ್ರ ನಡೆದಿದೆ. ಅವರ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಹಮತದೊಂದಿಗೆ ಲೈಂಗಿಕ ಸಂಪರರ್ಕ ನಡೆಸುವುದು ಅವರ ವೈಯಕ್ತಿಕ ಸ್ವಾತಂತ್ರ್ಯವಾಗಿದೆ. ಅದನ್ನು ಪ್ರಶ್ನಿಸಲು ಸಾಮಾಜಿಕ ಹೋರಾಟಗಾರರಿಗೆ ಯಾವ ಹಕ್ಕೂ ಇಲ್ಲ. ಇದು ವೈಯಕ್ತಿಕ ವಿಚಾರವಾಗಿದ್ದು, ಇದರ ಹಿಂದೆ ದೊಡ್ಡ ವ್ಯಕ್ತಿಗಳಿದ್ದಾರೆ. ಆದ್ದರಿಂದ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಯುವತಿ ಹಾಗೂ ದೂರುದಾರ ದಿನೇಶ್ ಕಲ್ಲಹಳ್ಳಿ ಬಗ್ಗೆ ಸಂಪೂರ್ಣ ವಿಚಾರಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
Recommended Video
ಜಾರಕಿಹೊಳಿ ವಿರುದ್ಧ ದೂರು ನೀಡಿರುವ ದಿನೇಶ್ ಕಲ್ಲಹಳ್ಳಿ ಅವರಿಗೆ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಬುಧವಾರ ಬೆಳಿಗ್ಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿ, ದೂರಿಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ಸೂಚಿಸಲಾಗಿತ್ತು.