ಪೊಲೀಸರ ವಿಚಾರಣೆಗೆ ಹಾಜರಾದ ದೂರುದಾರ ದಿನೇಶ್ ಕಲ್ಲಹಳ್ಳಿ
ಬೆಂಗಳೂರು, ಮಾರ್ಚ್ 05: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಹಾಜರಾಗಿ, ಸಿಡಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ವಿಚಾರಣೆ ವೇಳೆ ಕೆಲವು ಸ್ಫೋಟಕ ಅಂಶಗಳು ಬೆಳಕಿಗೆ ಬಂದಿದ್ದು, ಪೂರ್ಣ ವಿಚಾರಣೆ ಬಳಿಕ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.
ವಿಚಾರಣೆಗೆ ಹಾಜರಾಗಲು ಭದ್ರತೆ ಕಾರಣ ನೀಡಿ ಕಾಲಾವಕಾಶ ಕೇಳಿದ್ದ ದಿನೇಶ್ ಕಲ್ಲಹಳ್ಳಿ ಏಕಾಏಕಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಾರುತಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ದಿನೇಶ್ ನೀಡಿರುವ ದೂರಿನಲ್ಲಿ ಯುವತಿಯ ಬಗ್ಗೆ ಅಸ್ಪಷ್ಟ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು. ಎಫ್ಐಆರ್ ದಾಖಲಿಸಲು ಹೆಚ್ಚಿನ ಮಾಹಿತಿ ಕೋರಿದ್ದರು. ಇಂದು ಮಧ್ಯಾಹ್ನ ವಿಚಾರಣೆಗೆ ಹಾಜರಾಗಿ ಕೆಲವು ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ.
ಸುಳ್ಳು ಬಹಿರಂಗ: ಸಿಡಿಯನ್ನು ನನಗೆ ಯುವತಿಯ ಸಂಬಂಧಿಯೊಬ್ಬರು ಗಾಂಧಿನಗರದ ಲಾಡ್ಜ್ ವೊಂದರ ಸಮೀಪ ನೀಡಿದ್ದರು. ದೂರು ಕೊಡುವ ಮುನ್ನವಷ್ಟೇ ನನಗೆ ಪ್ರಭಾವಿ ಸಚಿವರ ಸಿಡಿ ಸಿಕ್ಕಿತ್ತು ಎಂಬ ದಿನೇಶ್ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂಬ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರ ಬಿದ್ದಿದೆ. ಇನ್ನು ದಿನೇಶ್ ನೀಡುವ ಮಾಹಿತಿ ಆಧಾರದ ಮೇಲೆ ಸಂತಸ್ತ್ರ ಯುವತಿಯನ್ನು ಪೊಲೀಸರು ಪತ್ತೆ ಮಾಡಿ ಹೇಳಿಕೆ ದಾಖಲಿಸಲಿದ್ದಾರಾ ಎಂಬುದು ಕುತೂಹಲ ಕೆರಳಿಸಿದೆ. ದಿನೇಶ್ ಕಲ್ಲಹಳ್ಳಿ ಹೇಳಿಕೆ ಮೇರೆಗೆ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿ, ಆಕೆ ಹೇಳಿಕೆ ನೀಡಿದ್ದೇ ಆದಲ್ಲಿ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯ, ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಲಿದೆ.
Recommended Video
ಸಿಡಿ ಸ್ಫೋಟಿಸುತ್ತಿದ್ದಂತೆ ಮೌನದ ಮೊರೆ ಹೋಗಿರುವ ರಮೇಶ್ ಜಾರಕಿಹೊಳಿ ಇನ್ನೂ ತನ್ನ ಹೆಜ್ಜೆ ಇಟ್ಟಿಲ್ಲ. ಒಂದು ವೇಳೆ ಯುವತಿ ಸ್ವಯಂ ಪ್ರೇರಿತಳಾಗಿ ದೂರು ನೀಡಿದ್ದೇ ಆದಲ್ಲಿ ಸಚಿವರು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಅಥವಾ ತನಿಖೆಯಲ್ಲಿ ಈ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡರೂ ಅಚ್ಚರಿ ಪಡಬೇಕಿಲ್ಲ. ಎಲ್ಲವೂ ದೂರುದಾರ ಹಾಗೂ ಸಂತ್ರಸ್ತ ಯುವತಿ ನೀಡುವ ಹೇಳಿಕೆ ಮೇಲೆ ನೀಂತಿದೆ. ದಿನೇಶ್ ವಿಚಾರಣೆ ಮಧ್ಯಾಹ್ನದ ಬಳಿಕ ಮುಂದುವರೆದಿದ್ದು, ಹೇಳಿಕೆ ಆಧರಿಸಿ ದೂರಿಗೆ ತಾರ್ಕಿಕ ಅಂತ್ಯ ಕಾಣಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇನ್ನು ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ವಿವರ ನೀಡಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲಪಂತ್ ಹೇಳಿದ್ದಾರೆ.