ನನ್ನ ಮಗಳನ್ನು ರಾಜಕೀಯವಾಗಿ ಬಳಸಿಕೊಂಡು ಅನ್ಯಾಯ
ಬೆಂಗಳೂರು, ಮಾರ್ಚ್ 29: ಯಾರದ್ದೋ ಒತ್ತಡಕ್ಕೆ ಮಣಿದು ನನ್ನ ಮಗಳು ಹೇಳಿಕೆ ಕೊಡುತ್ತಿದ್ದಾಳೆ. ನಾಲ್ಕು ದಿನ ನಮ್ಮ ಜತೆ ಇರಲು ಬಿಡಿ. ಸಿಡಿ ಗ್ಯಾಂಗ್ ಜತೆ ಸೇರಿ ಷಡ್ಯಂತ್ರ ನಡೆಸಿದ್ದಾರೆ ಎಂದು ಸಿಡಿಲೇಡಿ ಪೋಷಕರು ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೊಷ್ಠಿ ನಡೆಸಿದ ಸಿಡಿಲೇಡಿಯ ಪೋಷಕರು, ನನ್ನ ಮಗಳು ಕಳೆದ ಇಪ್ಪತ್ತೈದು ದಿನದಿಂದ ಒತ್ತಡಕ್ಕೆ ಸಿಲುಕಿದ್ದಾಳೆ. ಅವಳು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವ ಮೊದಲು ನಾಲ್ಕು ದಿನ ನಮ್ಮ ಜೊತೆ ಇರಲಿ. ಆಕೆಗೆ ಯಾವ ರೀತಿಯ ಚಿತ್ರಹಿಂಸೆ ನೀಡಿದ್ದಾರೋ ಗೊತ್ತಿಲ್ಲ. ಆಗ ಮಾತ್ರ ಸತ್ಯಾಂಶ ಹೊರ ಬರುತ್ತದೆ. ನಮ್ಮ ಮನವಿಯನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಸಿಡಿಲೇಡಿಯ ತಂದೆ, ಮಾಜಿ ಸೈನಿಕ ಮನವಿ ಮಾಡಿದ್ದಾರೆ.
ನಾನು ಪ್ರಾಮಾಣಿಕ ಜೀವನ ನಡೆಸುತ್ತಿದ್ದೇನೆ. ನನ್ನ ಮಗಳನ್ನು ಕೆಲವರು ತಮ್ಮ ರಾಜಕೀಯ ದಾಳವನ್ನಾಗಿ ಬಳಸಿಕೊಂಡಿದ್ದಾರೆ. ದಯವಿಟ್ಟು ನಮ್ಮ ಮಗಳನ್ನು ನಮಗೆ ವಹಿಸಿ. ನಾನು ಸೈನಿಕನಾಗಿ ದೇಶ ಕಾದು ಬಂದಿದ್ದೀನಿ. ನನ್ನ ಮಗಳನ್ನು ರಕ್ಷಣೆ ಮಾಡಿಕೊಳ್ಳುತ್ತೇನೆ ಎಂದು ಯುವತಿ ತಂದೆ ಮನವಿ ಮಾಡಿದ್ದಾರೆ.
ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿರುವ ಯುವತಿ ಸಹೋದರ, ಡಿ.ಕೆ.ಶಿವಕುಮಾರ್ ನನ್ನ ಸಹೋದರಿಯನ್ನು ಒತ್ತಡದಲ್ಲಿ ಇಟ್ಟುಕೊಂಡಿದ್ದಾರೆ. ಮಾ. 2 ರಂದು ನನ್ನ ಸಹೋದರಿ ಈ ಬಗ್ಗೆ ಮಾತನಾಡಿದಳು. ಮಾಧ್ಯಮಗಳಲ್ಲಿ ಸಿಡಿ ಬಂದ ಬಳಿಕ ಅದನ್ನು ಪ್ರಸ್ತಾಪಿಸಿ ಮಾತನಾಡಿದಾಗ ಡಿ.ಕೆ. ಶಿವಕುಮಾರ್ ಅವರ ಕಡೆಯವರ ಜತೆ ಇರುವುದಾಗಿ ತಿಳಿಸಿದಳು ಎಂದು ಅಡಿಯೋ ಬಿಡುಗಡೆ ಮಾಡಿದರು.
ಸಿಡಿಲೇಡಿ ತಾಯಿ ಮಾತನಾಡಿ, ನನ್ನ ಮಗಳ ಪೋನ್ ತೆಗೆದುಕೊಂಡು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ. ಅವಳು ಒತ್ತಡದಲ್ಲಿ ಸಿಲುಕಿದ್ದಾಳೆ. ಯಾಕಮ್ಮ ನಲವತ್ತು ಸಾವಿರ ಸಂಬಳ ಕೆಲಸ ಇದೆ. ಬೇರೆ ಕೆಲಸ ಏನಕ್ಕೆ ಬೇಕು. ನಿನಗೆ ಮದುವೆ ಮಾಡುತ್ತೇವೆ ಎಂದು ಹೇಳಿದ್ದೆವು. ಅಂದಿನಿಂದಲೂ ಆಕೆ ಒತ್ತಡದಲ್ಲಿ ಸಿಲುಕಿದ್ದಾಳೆ. ನಮ್ಮ ಮಗಳನ್ನು ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಡಿ. ನಾಲ್ಕು ದಿನ ಮುಕ್ತವಾಗಿ ಇರಲು ಬಿಡಿ. ಬಳಿಕ ಹೇಳಿಕೆ ದಾಖಲಿಸಿಕೊಳ್ಳಲಿ ಎಂದು ಮನವಿ ಮಾಡಿದ್ದಾರೆ.
Recommended Video
ಪೋಷಕರ ಹೇಳಿಕೆಗೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪೋಷಕರು ಯಾರದ್ದೋ ಒತ್ತಡಕ್ಕೆ ಸಿಲುಕಿ ಹೇಳಿಕೆ ನೀಡಿರಬಹುದು. ಆ ಪ್ರಕರಣಕ್ಕೂನನಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.