ವಿಶೇಷ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರು, ಹೇಳಿಕೆ ದಾಖಲು
ಬೆಂಗಳೂರು, ಮಾರ್ಚ್ 30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ತಿರುವು, ನಾಟಕೀಯ ಬೆಳವಣಿಗೆಗಳು ನಡೆದಿವೆ. 29 ದಿನಗಳ ಬಳಿಕ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಯುವತಿ ಹಾಜರಾಗಿದ್ದು, ಹೇಳಿಕೆ ದಾಖಲಿಸಿದ್ದಾರೆ.
ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಸಿಡಿ ಲೇಡಿ ಬರಲಿದ್ದಾರೆ ಎಂದು ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಕಾದಿದ್ದ ಮಾಧ್ಯಮದವರು, ಪೊಲೀಸರು, ವಕೀಲರು, ಸಾರ್ವಜನಿಕರು ಬೇಸ್ತು ಬೀಳುವಂಥ ಘಟನೆ ನಡೆಯಿತು. ಯುವತಿ ಪರ ವಕೀಲ ಹೇಳಿದಂತೆ 3.30ಕ್ಕೆ ಬರಬೇಕಿದ್ದ ಯುವತಿ ಕೋರ್ಟ್ ಆವರಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ, ಬದಲಿಗೆ 3 ಗಂಟೆ ಸುಮಾರಿಗೆ ಜಡ್ಜ್ ಹಾಗೂ ಟೈಪಿಸ್ಟ್ ಕಲ್ಪನಾ ಅವರು ಗುರುನಾನಕ್ ಭವನ್ ಕಡೆಗೆ ತೆರಳಿದ್ದಾರೆ ಎಂಬ ಮಾಹಿತಿ ತಡವಾಗಿ ತಿಳಿದು ಬಂದಾಗ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿದವರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವಂತಾಯಿತು.
ಸದ್ಯ ಯುವತಿ ಹೇಳಿಕೆ ಮೇಲೆ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ನಿಂತಿದೆ. ಕಳೆದ 29 ದಿನಗಳಿಂದ ವಿಡಿಯೋ ಹೇಳಿಕೆ, ಎಸ್ಐಟಿ ಶೋಧ, ರಾಜಕೀಯ ಕೆಸೆರೆರಚಾಟದಿಂದ ಕೂಡಿದ್ದ ಪ್ರಕರಣ ಇದೀಗ ನ್ಯಾಯಾಲಯದ ಕದ ತಟ್ಟಿದೆ.
ಬೆಂಗಳೂರಿನ ವಸಂತ ನಗರದಲ್ಲಿರುವ ಗುರುನಾನಕ್ ಭವನದಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ಜಡ್ಜ್ ಹಾಗೂ ಮಹಿಳಾ ಟೈಪಿಸ್ಟ್ ಮುಂದೆ ಯುವತಿ ಸಿಆರ್ಪಿಸಿ ಸೆಕ್ಷನ್ 164 ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಲಿದ್ದಾರೆ. ಈ ಹೇಳಿಕೆ ಗೌಪ್ಯವಾಗಿ ಇಡಲಾಗುತ್ತದೆ. ವಿಚಾರಣೆ ಸಂದರ್ಭದಲ್ಲಿ ಮಾತ್ರ ಯುವತಿ ಹೇಳಿಕೆ ಏನು ಎಂಬುದು ತಿಳಿದು ಬರಲಿದೆ.
ಈ ಪ್ರಕರಣದಲ್ಲಿ ಆರೋಪಿ ಪ್ರಭಾವ ವ್ಯಕ್ತಿಯಾಗಿದ್ದು, ಬೆದರಿಕೆ ಹಾಕುತ್ತಿದ್ದಾರೆ. ನನ್ನ ಕಕ್ಷಿದಾರ(ಸಿಡಿ ಲೇಡಿ)ರಿಗೆ ಸ್ವ ಇಚ್ಛಾ ಹೇಳಿಕೆಗೆ ಅವಕಾಶ ನೀಡಬೇಕು ಎಂದು ಯುವತಿ ಪರ ವಕೀಲ ಜಗದೀಶ್ ನ್ಯಾಯಾಲಯದ ರಿಜಿಸ್ಟ್ರಾರ್ಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಅನುಮತಿಯೂ ಸಿಕ್ಕು, ಇಂದು ಮಧ್ಯಾಹ್ನ ಸಮಯ ನಿಗದಿಯಾಗಿತ್ತು.
Recommended Video
ಕಾನೂನು ಪ್ರಕಾರ ನೋಡುವುದಾದರೆ,ಸಿಆರ್ಪಿಸಿಸೆಕ್ಷನ್ 164 (5)ರ ಪ್ರಕಾರ ಒಬ್ಬ ದೂರುದಾರೆ, ಸಂತ್ರಸ್ತೆ ಬಯಸಿದರೆ ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಅವಕಾಶವಿದೆ. ಆದರೆ, ಸದ್ಯ ಎಸ್ಐಟಿ ತನಿಖೆ ನಡೆಸುತ್ತಿರುವ ಅಧಿಸೂಚಿತ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿಕೆ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಮತ್ತೊಬ್ಬ ನ್ಯಾಯಾಧೀಶರನ್ನು ಅಧಿಸೂಚಿಸಿ ಅವರ ಮುಂದೆ ಯುವತಿ ಹೇಳಿಕೆ ದಾಖಲಿಸಲು ಅವಕಾಶವಿದೆ. ಇನ್ನು ಯುವತಿ ದೂರನ್ನಾಧರಿಸಿ ದಾಖಲಿಸಿರುವ ಐಪಿಸಿ ಸೆಕ್ಷನ್ 376 (c) ಬದಲಾಗಿ 376 ಅಡಿಯಲ್ಲಿ ಕೇಸು ದಾಖಲಿಸಬೇಕಾಗುತ್ತದೆ. ಒಂದು ವೇಳೆ ಯುವತಿ ನನ್ನ ಮೇಲೆ ಬಲತ್ಕಾರವಾಗಿದೆ. ನನಗೆ ಉದ್ಯೋಗದ ಅಮಿಷೆ ಒಡ್ಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಹೇಳಿಕೆ ನೀಡಿದರೂ ಅದು ರಮೇಶ್ ಜಾರಕಿಹೊಳಿ ಗೆ ಕಂಟಕವಾಗಬಹುದು.