ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಶಂಕಿತರು ಎಸ್ಐಟಿ ವಿಚಾರಣೆಗೆ ಹಾಜರು!
ಬೆಂಗಳೂರು, ಜೂ. 12: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣದಲ್ಲಿ ಅಜ್ಞಾತವಾಸಕ್ಕೆ ತೆರಳಿದ್ದ ಶಂಕಿತ ಆರೋಪಿಗಳಿಬ್ಬರು ನಿರೀಕ್ಷಣಾ ಜಾಮೀನು ಬಳಿಕ ಶನಿವಾರ ಬೆಳಗ್ಗೆ ವಿಶೇಷ ತನಿಖಾ ತಂಡದ ಎದುರು ಹಾಜರಾಗಿದ್ದಾರೆ. ತಮ್ಮ ವಕೀಲರ ಮೂಲಕ ಭೇಟಿ ಮಾಡಿರುವ ಇಬ್ಬರು ಶಂಕಿತರನ್ನು ಆಡುಗೋಡಿ ಟೆಕ್ನಿಕಲ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
60 ಪ್ರಶ್ನೆ ತಯಾರಿ : ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಬ್ಲಾಕ್ ಮೇಲ್, ಬೆದರಿಕೆ ಪ್ರಕರಣ ಸಂಬಂಧ ವಿಚಾರಣೆ ಎದುರಿಸಲಿದ್ದಾರೆ. ಸಿಡಿ ಸ್ಫೋಟಗೊಂಡ ಬಳಿಕ ಕಣ್ಮರೆಯಾಗಿದ್ದ ಶಂಕಿತರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಸಂತ್ರಸ್ತ ಯುವತಿ ಸರಣಿ ವಿಡಿಯೋ ಬಿಡುಗಡೆ ಮಾಡಿದ್ದಳು. ಇದರ ಬೆನ್ನಲ್ಲೇ ಸಂತ್ರಸ್ತ ಯುವತಿಯ ಪೋಷಕರು ಅಪಹರಣ ದೂರು ದಾಖಲಿಸಿದರು.ಇದರ ಬೆನ್ನಲ್ಲೇ ಶಂಕಿತರು ಕೂಡ ಬಿಡಗಡೆಯಾಗಿದ್ದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಶಂಕಿತ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಇವರಿಬ್ಬರ ಜತೆಗೆ ಉದ್ಯಮಿ ಶಿವಕುಮಾರ್ ಮತ್ತು ಆತನ ಕಾರು ಚಾಲಕ ಜಾಡು ಹಿಡಿದು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಮೂರು ತಿಂಗಳ ಬಳಿಕ ನ್ಯಾಯಾಲಯ ನಿರೀಕ್ಷಣಾ ಜಾಮೀನು ದೊರೆತ ಬೆನ್ನಲ್ಲೇ ಇಬ್ಬರ ಶಂಕಿತರು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಸುಮಾರು 60 ಪ್ರಶ್ನೆಗಳನ್ನು ಸಿದ್ಧಪಡಿಸಿರುವ ಎಸ್ಐಟಿ ಅಧಿಕಾರಿಗಳು ಶನಿವಾರ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಹೇಳಿಕೆ ದಾಖಲಿಸಲಿದ್ದಾರೆ. ಆನಂತರ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಉದ್ಯೋಗದ ಅಮಿಷೆ ಒಡ್ಡಿ ಯುವತಿಗೆ ಮೋಸ ಮಾಡಿದ್ದರು. ಸಹಾಯ ಕೋರಿ ನನ್ನ ನೆರವಿಗೆ ಬಂದಿದ್ದಳು. ಹೀಗಾಗಿ ನಾವು ನೆರವು ಮಾಡಿದ್ದೆವು ಎಂದು ಈ ಹಿಂದೆ ಶಂಕಿತ ಆರೋಪಿಗಳು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಉಲ್ಲೇಖಿಸಿದ್ದರು.
ಇದೀಗ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹಾಜರಾಗಿ ಸ್ವಯಂ ಹೇಳಿಕೆ ದಾಖಲಿಸಿದರೂ ಶಂಕಿತರು ವಾಪಸು ಬಂದಿರಲಿಲ್ಲ. ಮಾ. 2 ರಿಂದ ಈವರೆಗೂ ನಡೆದ ಬೆಳವಣಿಗೆ ಆಧರಿಸಿ ಎಸ್ಐಟಿ ಅಧಿಕಾರಿಗಳು ಪ್ರಶ್ನಾವಳಿಯನ್ನು ಸಿದ್ಧತೆ ಮಾಡಿಕೊಂಡಿದ್ದಾರೆ. ಅನಾಮಿಕರ ವಿರುದ್ಧ ಬ್ಲಾಕ್ ಮೇಲ್ ದೂರು ದಾಖಲಿಸಿದ್ದ ರಮೇಶ್ ಜಾರಕಿಹೊಳಿ ವಿಚಾರಣೆ ವೇಳೆ ತಾನು ದೂರುದಾರ ಯುವತಿಯ ಜತೆ ಸಮ್ಮತಿ ಸೆಕ್ಸ್ ನಡೆಸಿದ್ದಾಗಿ ಹೇಳಿಕೆ ನೀಡಿದ್ದರು. ಬಳಿಕ ಬ್ಲಾಕ್ ಮೇಲ್ ಹಾಗೂ ಬೆದರಿಕೆ ಕುರಿತು ತನ್ನ ಹೇಳಿಕೆಯಲ್ಲಿ ವಿವರಿಸಿದ್ದರು.
Recommended Video
ಈ ಮೂಲಕ ಇಡೀ ಸಿಡಿ ಸ್ಪೋಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿತ್ತು. ಇದೀಗ ಇಬ್ಬರು ಶಂಕಿತರು ಸಹ ನ್ಯಾಯಾಲಯದ ಷರತ್ತು ಅನ್ವಯ ವಿಚಾರಣೆಗೆ ಹಾಜರಾಗಿದ್ದು, ಇದೀಗ ಪ್ರಕರಣದ ಅಸಲಿ ಸತ್ಯಾಂಶ ಹೊರಗೆ ಬೀಳಲಿದೆ.