ಆಪ್ತ ರಮೇಶ್ ಆತ್ಮಹತ್ಯೆ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 12: ತಮ್ಮ ಬಹು ಕಾಲದ ಆಪ್ತ ಸಹಾಯಕ ರಮೇಶ್ ಸಾವಿನ ಬಗ್ಗೆ ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಸಾವಿನ ಬಗ್ಗೆ ಧಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಈ ಬಗ್ಗೆ ಚುಟುಕಾಗಿ ಮಾತನಾಡಿರುವ ಪರಮೇಶ್ವರ್, 'ರಮೇಶ್ ಸಾವು ಆಘಾತ ತಂದಿದೆ, ಆತ ಯಾವುದೇ ಪರಿಸ್ಥಿತಿಯಲ್ಲಿಯೂ ಚತುರತೆಯಿಂದ ಕೆಲಸ ಮಾಡುವ ಛಾತಿ ಉಳ್ಳವನಾಗಿದ್ದ' ಎಂದು ಹೇಳಿದ್ದಾರೆ.
'ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಿನಿಂದಲೂ ನಾನು ಆತನನ್ನು ಜೊತೆಗೆ ಇಟ್ಟುಕೊಂಡಿದ್ದೆ, ಬಹಳ ಒಳ್ಳೆಯ ಹುಡುಗ ಆತ, ಯಾವ ಕಾರಣಕ್ಕೆ ಈ ನಿರ್ಣಯ ಕೈಗೊಂಡಿದ್ದಾನೆ ಗೊತ್ತಿಲ್ಲ' ಎಂದು ಪರಮೇಶ್ವರ್ ಹೇಳಿದರು.
'ನಿನ್ನೆ ರಾತ್ರಿ ರಮೇಶ, ಕೇಶವ ಎಲ್ಲ ನಮ್ಮ ಜೊತೆಗೆ ಮನೆಯಲ್ಲಿದ್ದರು, ಐಟಿ ಅಧಿಕಾರಿಗಳಿಗೆ ಸಹಾಯ ಮಾಡುತ್ತಾ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇದ್ದ, ಬೆಳಿಗ್ಗೆ ಮನೆಯಿಂದ ಹೋದ' ಎಂದು ಪರಮೇಶ್ವರ್ ಹೇಳಿದ್ದಾರೆ.
'ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರವೋ ಇಲ್ಲವೋ ಗೊತ್ತಿಲ್ಲ, ಬೆಳಿಗ್ಗೆ ಮನೆಯಿಂದ ಹೊರಡುವಾಗ ನಾನೇ ಆತನಿಗೆ ಧೈರ್ಯ ಹೇಳಿದ್ದೆ, ಇದೆಲ್ಲವೂ ಸಾಮಾನ್ಯ ಧೈರ್ಯವಾಗಿರುವಂತೆ ತಿಳಿಸಿದ್ದೆ' ಎಂದು ಪರಮೇಶ್ವರ್ ಹೇಳಿದರು.
ರಮೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಹೋಗುವ ಧಾವಂತದಲ್ಲಿದ್ದ ಪರಮೇಶ್ವರ್ ಪತ್ರಕರ್ತರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.
ಕಳೆದ ಎಂಟು ವರ್ಷಗಳಿಂದಲೂ ಪರಮೇಶ್ವರ್ ಅವರಿಗೆ ಆಪ್ತ ಸಹಾಯಕನಾಗಿ ರಮೇಶ್ ಕೆಲಸ ಮಾಡಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಅವರನ್ನು ಪರಮೇಶ್ವರ್ ತನ್ನ ಆಪ್ತ ಸಹಾಯಕನಾಗಿ ನೇಮಿಸಿಕೊಂಡಿದ್ದರು. ಪರಮೇಶ್ವರ್ ಅವರ ವ್ಯವಹಾರಗಳನ್ನು ಅವರು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.