ಕಾರಿನ ಸ್ಟೆಪ್ನಿಯಲ್ಲಿ ಗಾಂಜಾ ಇಟ್ಟು ಡೀಲ್ ಮಾಡಲು ಹೋಗಿ ಸಿಕ್ಕಿಬಿದ್ದ !
ಬೆಂಗಳೂರು, ಮೇ. 17: ಕಾರಿನ ಸ್ಟೆಪ್ನಿಯ ಸುರಕ್ಷಿತ ಜಾಗದಲ್ಲಿ 20 ಪಾಕೆಟ್ ಗಾಂಜಾ ಇಟ್ಟು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಿಂದ ಬೆಂಗಳೂರಿನ ವರೆಗೂ ತಂದಿದ್ದ. ಲಾಕ್ ಡೌನ್ ನಿಯಮ ಉಲ್ಲಂಘನೆ ಸಂಶಯದ ಮೇಲೆ ಪೊಲೀಸರು ಪರಿಶೀಲನೆ ಮಾಡುವಾಗ ರಾಮಮೂರ್ತಿನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ !
ನಾಗರವಾರದ ವೀರಣ್ಣಪಾಳ್ಯದ ನಿವಾಸಿ ಸುಬ್ಬರೆಡ್ಡಿ (42 ) ಬಂಧಿತ ಆರೋಪಿ. ಈತನಿಂದ ಆರು ಲಕ್ಷ ರೂ. ಮೌಲ್ಯದ 20 ಕೆ.ಜಿ ಗಾಂಜಾ ಮತ್ತು ಹೋಂಡಾ ಸಿಟಿ ಕಾರನ್ನು ರಾಮಮೂರ್ತಿನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ಪ್ರಶಂಸೆ ಮಾಡಿದ್ದಾರೆ.
Recommended Video
ಮೂಲತಃ ಆಂಧ್ರ ಪ್ರದೇಶದ ನೆಲ್ಲೂರು ಮೂಲದ ಸುಬ್ಬರೆಡ್ಡಿ ಬೆಂಗಳೂರಿನಲ್ಲಿ ಗಾಂಜಾಗೆ ಇರುವ ಬೇಡಿಕೆ ಬಗ್ಗೆ ತಿಳಿದುಕೊಂಡಿದ್ದ. ಲಾಕ್ ಡೌನ್ ನಿರ್ಬಂಧದ ನಡುವೆ ವಿಶಾಖಪಟ್ಟಣಂ ಬಳಿ ತಲಾ ಹತ್ತು ಸಾವಿರ ದಂತೆ 20 ಕೆ.ಜಿ. ಗಾಂಜಾ ಖರೀದಿ ಮಾಡಿದ್ದ. ಬೆಂಗಳೂರಿನಲ್ಲಿ ಒಂದು ಕೆ.ಜಿ. ಗಾಂಜಾವನ್ನು 25 ಸಾವಿರ ರೂ.ನಂತೆ ಮಾರಾಟ ಮಾಡಲು ವ್ಯವಹಾರ ಕುದುರಿಸಿದ್ದ. ಗಾಂಜಾವನ್ನು ಆಂಧ್ರಪ್ರದೇಶದಿಂದ ಸಾಗಿಸಲು ತನ್ನ ಹೊಂಡಾ ಸಿಟಿ ಕಾರಿನ ಸ್ಟೆಪ್ನಿ ಇಡುವ ಜಾಗವನ್ನು ಭಿನ್ನ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿದ್ದ. ಯಾರೇ ನೋಡಿದರೂ ಅನುಮಾನ ಬಾರದಂತೆ ಇದೇ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ. ಆಂಧ್ರ ಪ್ರದೇಶದಿಂದ ಕಾರಿನಲ್ಲಿ 20 ಕೆ.ಜಿ. ಗಾಂಜಾ ಸಾಗಣೆ ಮಾಡಿಕೊಂಡು ಬರುವಾಗ ಸಿಕ್ಕಿಬಿದ್ದಿದ್ದಾನೆ. ಕಾರಿನ ಸ್ಟೆಪ್ನಿ ಇಡುವ ಜಾಗದಲ್ಲಿ ಅವಿತಿಟ್ಟಿದ್ದ 20 ಕೆ.ಜಿ. ಗಾಂಜಾ ಪೊಟ್ಟಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.