ರಾಮಲಿಂಗಂ ಲಂಚ ಪ್ರಕರಣದಲ್ಲಿ ಮಾಜಿ ಸಿಎಂಗೆ ಸಮನ್ಸ್ ಜಾರಿ
ಬೆಂಗಳೂರು ಆ. 03: ರಾಮಲಿಂಗಂ ಕಂಪನಿಯಿಂದ 12 ಕೋಟಿ ರೂ. ಲಂಚ ಪಡೆದ ಭ್ರಷ್ಟಾಚಾರ ಆರೋಪ ಪ್ರಕರಣ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕುಟುಂಬ ಸದಸ್ಯರಿಗೆ ಕಂಟಕವಾಗುವ ಲಕ್ಷಣ ಗೋಚರಿಸುತ್ತಿದೆ. ರಾಜ್ಯಪಾಲರಿಂದ ಪೂರ್ವಾನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ದೂರುದಾರರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಬಿ.ಎಸ್. ಯಡಿಯೂರಪ್ಪ ಮತ್ತು ಇತರರ ವಿರುದ್ಧ ಸಲ್ಲಿಸಿದ್ ಪ್ರಕರಣವನ್ನು ರದ್ದು ಮಾಡಿ ಆದೇಶಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ರಾಜ್ಯಪಾಲರು ಅಭಿಯೋಜನಾ ಮಂಜೂರಾತಿ ನಿರಾಕರಣೆ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪದ ಭ್ರಷ್ಟಾಚಾರ ಪ್ರಕರಣವನ್ನು ವಜಾ ಮಾಡಿದ ವಿಶೇಷ ನ್ಯಾಯಾಲಯದ ಆದೇಶದ ಬಗ್ಗೆ ದೂರುದಾರ ಪರ ವಕೀಲರಾದ ವಿಕಾಸ್ ಉಪಾಧ್ಯಾಯ ಮತ್ತು ಅಶ್ವಿನ್ ನಾಯರ್ ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಾಲಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ಎಸ್. ಟಿ. ಸೋಮಶೇಖರ್, ಡಾ. ಜಿ.ಸಿ. ಪ್ರಕಾಶ್, ಕೆ.ರವಿ ಹಾಗೂ ವಿರುಪಾಕ್ಷಪ್ಪ ಯಮಕನಕರಡಿ ಅವರಿಗೆ ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ.
ಏನಿದು ಅಕ್ರಮ?: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕುಟುಂಬದ ಸದಸ್ಯರು ಭ್ರಷ್ಟಚಾರದ ಮೂಲಕ ಪಡೆದಿರುವ ಕೋಟ್ಯಂತರ ರೂಪಾಯಿ ಹಣ ವಹಿವಾಟು ನಡೆದಿದೆ. ಕೋಲ್ಕತಾ ಮೂಲದ ಶೆಲ್ ಕಂಪನಿ ಹಾಗೂ ಯಡಿಯೂರಪ್ಪ ಕುಟುಂಬ ಒಡೆತನಕ್ಕೆ ಸೇ ರಿದ ಹಲವು ಕಂಪನಿ ನಡುವೆ ಹಣಕಾಸಿನ ವಹಿವಾಟು ನಡೆದಿದ್ದು, ಇದೆಲ್ಲವೂ ಕಾನೂನು ಬಾಹಿರ ಬೇನಾಮಿ ವ್ಯವಹಾರ ನಡೆಸಿ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಪ್ರಕಾರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊದಲನೇ ಆರೋಪಿ. ಬಿ.ವೈ. ವಿಜಯೇಂದ್ರ ಎರಡನೇ ಆರೋಪಿ. ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ, ವಿರುಪಾಕ್ಷಪ್ಪ ಯಮಕನಮರಡಿ ಅವರ ಅಳಿಯ ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ದೂರು ಸಲ್ಲಿಕೆಯಾಗಿದೆ. ಬೇನಾಮಿ ವಹಿವಾಟಿನ ಕುರಿತು ಸಾಕ್ಷಾಧಾರ ಆಧರಿಸಿ ದೂರು ನೀಡಿದ್ದರು.
ಬಿಗ್ ರಿಲೀಫ್ ಕೊಟ್ಟಿದ್ದ ಕೋರ್ಟ್: ಖಾಸಗಿ ಕಂಪನಿಯಿಂದ 12 ಕೋಟಿ ರೂ. ಲಂಚ ಪಡೆದ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಡಿ ಅವರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರಿಲೀಫ್ ನೀಡಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ರದ್ದು ಮಾಡಿ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.
Recommended Video
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿರುವುದಕ್ಕೆ ಸಾಕ್ಷಾಧಾರಗಳ ಸಮೇತ ಖಾಸಗಿ ದೂರು ಸಲ್ಲಿಸಿದ್ದರೂ ಹಿಂದಿನ ರಾಜ್ಯಪಾಲ ವಜುಬಾಯಿ ವಾಲಾ ಅವರು ಅಭಿಯೊಜನಾ ಮಂಜೂರಾತಿ ನಿರಾಕರಣೆ ಮಾಡಿರುವ ಅಂಶವನ್ನೇ ಆಧಾರವಾಗಿಟ್ಟುಕೊಂಡು ನನ್ನ ದೂರನ್ನು ರದ್ದು ಮಾಡಲಾಗಿದೆ. ಯಡಿಯೂರಪ್ಪ ಕುಟುಂಬ ಈ ಪ್ರಕರಣದಲ್ಲಿ ಪ್ರಭಾವ ಬೀರಿದೆ ಎಂದು ದೂರುದಾರ ಅಬ್ರಹಾಂ ಆರೋಪಿಸಿದ್ದರು. ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.