ಬಿಜೆಪಿಯಿಂದ ಮರಣೋತ್ತರ ಸದಸ್ಯತ್ವ ಅಭಿಯಾನ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಫೆಬ್ರವರಿ 14: 'ಬಿಜೆಪಿ ಮರೋಣೋತ್ತರ ಸದಸ್ಯತ್ವ ಅಭಿಯಾನ ಮಾಡುತ್ತಾರೆ, ರಾಜ್ಯದಲ್ಲಿ ಯಾರೇ ಸತ್ತರು ಅವರು ನಮ್ಮ ಪಕ್ಷದವರು ಅಂತಾ ಹೇಳಿ ಸುಳ್ಳು ಹೋರಾಟ ಮಾಡುತ್ತಾರೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟತ್ತು, ಬಿಜೆಪಿ ಅಧಿಕಾರಾವಧಿಯಲ್ಲಿ ಎಂಟು ಸಾವಿರ ಕೊಲೆಗಳು ನಡೆದಿದ್ದವು, ನಮ್ಮ ಸರ್ಕಾರದ ಅವಧಿಯಲ್ಲಿ 7 ಸಾವಿರ ಕೊಲೆಗಳು ನಡೆದಿವೆ' ಎಂದು ಲೆಕ್ಕ ಒಪ್ಪಿಸಿದರು.
ಡಿವಿಎಸ್ ಗೆ ಸುಳ್ಳು ಹೇಳಿಕೆ ನೀಡುವುದೇ ಖಯಾಲಿ: ರಾಮಲಿಂಗಾರೆಡ್ಡಿ
ಬಿಜೆಪಿಯ ಶೋಭಾ ಕರಂದ್ಲಾಜೆ ಮೇಲೆ ಹರಿಹಾಯ್ದ ರಾಮಲಿಂಗಾ ರೆಡ್ಡಿ 'ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ 23 ಹಿಂದೂಗಳ ಕೊಲೆ ಆಗಿವೆ ಎನ್ನುತ್ತಾರೆ, ಆದರೆ ಆಗಿರುವುದು 9 ಕೊಲೆ, ಉಳಿದ 14 ಕೊಲೆಗಳು ಬೇರೆ ಕಾರಣಗಳಿಗೆ ಆಗಿವೆ, ಅದರಲ್ಲಿ ಓರ್ವ ವ್ಯಕ್ತಿ ಬದುಕಿದ್ದಾರೆ, ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡುತ್ತಿದೆ' ಎಂದರು.
ಸುಳ್ಳು ಹೇಳೋದ್ರಲ್ಲಿ ಬಿಜೆಪಿಯವರು ನಿಸ್ಸೀಮರು: ರಾಮಲಿಂಗಾ ರೆಡ್ಡಿ
ಸಂಘ ಪರಿವಾರದ ಮೇಲೂ ವಾಗ್ದಾಳಿ ನಡೆಸಿದ ಅವರು ಕರಾವಳಿಯಲ್ಲಿ 13 ಕೊಲೆಗಳು ಸಂಘ ಪರಿವಾರದಿಂದಲೇ ನಡೆದಿವೆ, ಸಂಘ ಪರಿವಾರದವರು ಭಯೋತ್ಪಾದಕರ ಉತ್ಪಾದಿಸುವ ಫ್ಯಾಕ್ಟರಿ ಇದ್ದಂತೆ, ಆ ಫ್ಯಾಕ್ಟರಿ ಮುಚ್ಚೊ ಕೆಲಸ ಮೊದಲು ಆಗಬೇಕು, PFI & SDPI ಗಳನ್ನು ಬೆಳೆಸಿದ್ದೇ ಸಂಘ ಪರಿವಾರಗಳು' ಎಂದು ಆರೋಪ ಮಾಡಿದರು.