ನಾನು ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ: ರಾಮಲಿಂಗಾರೆಡ್ಡಿ
ಬೆಂಗಳೂರು, ಜುಲೈ 19: ನನ್ನ ರಾಜೀನಾಮೆಯನ್ನು ಮೊನ್ನೆಯೇ ವಾಪಸ್ ಪಡೆದಿದ್ದೇನೆ ಎಂದು ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ರಾಜೀನಾಮೆ ಹಿಂದೆಗೆದುಕೊಂಡು ವಿಶ್ವಾಸಮತ ಯಾಚನೆಗೆ ಹಾಜರಾಗಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.
ವಿಶ್ವಾಸಮತ LIVE: ಮೈತ್ರಿ ಸರ್ಕಾರದ ಅಳಿವು-ಉಳಿವು ಇಂದೇ ನಿರ್ಧಾರ?
ಇನ್ನು ಅತೃಪ್ತ ಶಾಸಕರು ಗುರುವಾರವಷ್ಟೇ ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ನಾವು ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿಯವರಂತೆ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದ್ದರು.
ಎಸ್.ಟಿ.ಸೋಮಶೇಖರ್, ಮುನಿರತ್ನ ಮತ್ತು ಭೈರತಿ ಬಸವರಾಜು ಅವರು ಒಟ್ಟಾಗಿ ವಿಡಿಯೋ ಸಂದೇಶ ರವಾನಿಸಿದ್ದು, ವಿಡಿಯೋದಲ್ಲಿ ಮಾತನಾಡಿರುವ ಶಾಸಕ ಎಸ್.ಟಿ.ಸೋಮಶೇಖರ್ ಅವರು, ನಾವು ರಾಮಲಿಂಗಾ ರೆಡ್ಡಿ ಅವರನ್ನು ಅನುಸರಿಸುವುದಿಲ್ಲ ಎಂದು ತಿಳಿಸಿದ್ದರು.
ಈ ಮೊದಲು ರಾಜೀನಾಮೆ ನಿರ್ಣಯ ತೆಗೆದುಕೊಂಡಾಗ ನಾವು ನಾಲ್ಕೂ ಜನ (ರಾಮಲಿಂಗಾ ರೆಡ್ಡಿ, ಮುನಿರತ್ನ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು) 'ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಬಾರದು ಎಂದು ನಿರ್ಣಯಿಸಿಕೊಂಡಿದ್ದೆವು, ಆದರೆ ಈಗ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದಿದ್ದಾರೆ' ಎಂದು ಸೋಮಶೇಖರ್ ಹೇಳಿದ್ದರು.
ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು
ಈಗ ರಾಮಲಿಂಗಾರೆಡ್ಡಿಯವರು ರಾಜೀನಾಮೆ ವಾಪಸ್ ತೆಗೆದುಕೊಂಡಿರುವುದಾಗಿ ಖುದ್ದಾಗಿ ತಿಳಿಸಿದ್ದು, ಅವರ ಜೊತೆಯಿದ್ದ ಅತೃಪ್ತರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪರ ವಕೀಲ ರಾಜೀವ್ ಧವನ್ ರಾಜ್ಯಪಾಲರು ವಿಶ್ವಾಸ ಮತ ಕುರಿತು ನೀಡಿದ್ದ ಸೂಚನೆಯ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ರಾಮಲಿಂಗಾರೆಡ್ಡಿಯವರು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರು, ಈಗ ಯಾವ ಕಾರಣಗಳಿಂದ ಹಿಂದಕ್ಕೆ ಪಡೆದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.