ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಮುಂದಾದ ರಾಮಚಂದ್ರಾಪುರ ಮಠ
ಬೆಂಗಳೂರು, ಜೂನ್ 17: ವಿಷ್ಣುಗುಪ್ತ (ಚಾಣಕ್ಯ) ಹೆಸರಿನ ವಿಶ್ವವಿದ್ಯಾಪೀಠದ ಮಹಾಸಂಕಲ್ಪದ ಸಾಕಾರಕ್ಕಾಗಿ ರಾಘವೇಶ್ವರ ಶ್ರೀಗಳು ಜೂನ್ ತಿಂಗಳ 20ರಿಂದ ಸಮಗ್ರ ರಾಮಾಯಣ ಪ್ರವಚನ ಆರಂಭಿಸಲಿದ್ದಾರೆ. ರಾಘವೇಶ್ವರ ಸ್ವಾಮಿಗಳು ಪೀಠಾರೋಹಣ ಮಾಡಿ 25 ವಸಂತಗಳು ತುಂಬಿದ್ದು, ಸುವರ್ಣಯುಗ ಆರಂಭದ ನೆನಪಿಗಾಗಿ ಈ ವಿಶಿಷ್ಟ ಕೊಡುಗೆಯನ್ನು ರಾಮಚಂದ್ರಾಪುರ ಮಠ ಸಮಾಜಕ್ಕೆ ನೀಡುತ್ತಿದೆ.
ದೇಸಿ ಗೋವಂಶ ರಕ್ಷಣೆಗಾಗಿ ಕಳೆದ ವರ್ಷ ವಿಶ್ವದ ಏಕೈಕ ಗೋಸ್ವರ್ಗವನ್ನು ಸಮಾಜಕ್ಕೆ ನೀಡಿದ್ದ ಶ್ರೀಮಠ ಇದೀಗ ಆದಿಗುರು ಶಂಕರಾಚಾರ್ಯರಿಗೆ ಕಿರುಗಾಣಿಕೆಯಾಗಿ ದೇಸಿ ವಿದ್ಯೆಗಳ ಪುನರುತ್ಥಾನಕ್ಕೆ ಮುಡಿಪಾಗಿರುವ ವಿಶ್ವವಿದ್ಯಾಪೀಠವನ್ನು ಸಮರ್ಪಿಸುತ್ತಿದೆ. "ಬಾಳದಾರಿಗೆ ರಾಮದೀವಿಗೆ" ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು ಗಿರಿನಗರದಲ್ಲಿರುವ ರಾಮಾಶ್ರಮದಲ್ಲಿ ಪ್ರತಿದಿನ ಸಂಜೆ 6.45ರಿಂದ 8.15ರವರೆಗೆ ಆರು ತಿಂಗಳ ಕಾಲ ಎಡೆಬಿಡದೇ ಸಮಗ್ರ ರಾಮಾಯಣ ಪ್ರವಚನ ಶ್ರೀಗಳಿಂದ ನಡೆಯಲಿದೆ.
ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳ "ರಾಮಾಯಣ ಚಾತುರ್ಮಾಸ್ಯ"
ಧಾರಾ ರಾಮಾಯಣದ ಮೂಲಕ ಇಡೀ ಸಮಾಜದಲ್ಲಿ ಧರ್ಮಜಾಗೃತಿ ಹಾಗೂ ದೇಶದ ಸಂಸ್ಕೃತಿ ಪುನರುತ್ಥಾನಕ್ಕೆ ನಾಂದಿ ಹಾಡುವ ವಿಶ್ವವಿದ್ಯಾಪೀಠವೊಂದರ ಸ್ಥಾಪನೆಯ ಅಗತ್ಯತೆ- ಅನಿವಾರ್ಯತೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸಂಕಲ್ಪ ಶ್ರೀಗಳದ್ದು. ಧಾರಾ ರಾಮಾಯಣದ ಮೂಲಕ ಈ ಸಂದೇಶವನ್ನು ಸಮಸ್ತ ಕನ್ನಡ ಕುಲಕೋಟಿಗೆ ತಲುಪಿಸುವ ಕಾರ್ಯಯೋಜನೆಯನ್ನು ಮಠದ ಕಡೆಯಿಂದ ಹಮ್ಮಿಕೊಳ್ಳಲಾಗಿದೆ.
ಭರತಖಂಡದ ಸುವರ್ಣಯುಗದ ಕುರುಹಾಗಿ ಉಳಿದಿರುವ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಮತ್ತು ಧರ್ಮಯೋಧರ ಸೃಷ್ಟಿ ಈ ಯೋಜಿತ ವಿಶ್ವವಿದ್ಯಾಪೀಠದ ಮೂಲಧ್ಯೇಯವಾಗಿದೆ. ನಮ್ಮ ಪೂರ್ವಜರು ಕಂಡುಕೊಂಡ ಒಂದೊಂದು ವಿದ್ಯೆಯೂ ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ರೂಪುಗೆಟ್ಟಿದೆ ಅಥವಾ ಅರ್ಥ ಕಳೆದುಕೊಂಡಿದೆ. ಉಳಿದವು ಅಳಿವಿನ ಅಂಚಿನಲ್ಲಿವೆ. ಅಳಿದುಳಿದ ವಿದ್ಯೆಗಳ ಪುನರುಜ್ಜೀವನ ಉದ್ದೇಶಿತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ರಾಮಚಂದ್ರಾಪುರ ಮಠ ಹೇಳಿದೆ.
ರಾಘವೇಶ್ವರ ಶ್ರೀಗಳ ವಿರುದ್ದ ಷಡ್ಯಂತ್ರ: ಸೋಲಿನ ಸರಮಾಲೆಗೆ ಮತ್ತೊಂದು ಸೇರ್ಪಡೆ
ದಾಖಲೆ ಹತ್ತು ತಿಂಗಳ ಅವಧಿಯಲ್ಲಿ ಪರಿಪೂರ್ಣ ವಿಶ್ವವಿದ್ಯಾಪೀಠವನ್ನು ಸಮಾಜಕ್ಕೆ ಸಮರ್ಪಿಸಲು ಉದ್ದೇಶಿಸಲಾಗಿದೆ. ಭಾರತೀಯ ವಿದ್ಯೆಗಳನ್ನು ಉಳಿಸಿ ಬೆಳೆಸುವುದು ಹಾಗೂ ದೇಶರಕ್ಷಣೆ- ಧರ್ಮರಕ್ಷಣೆಗೆ ಬದ್ಧರಾದ, ಸಂಸ್ಕತಿಯ ಆಳ ಅರಿವು ಇರುವ ಧರ್ಮಯೋಧರನ್ನು ಸಿದ್ಧಪಡಿಸುವುದು ಈ ವಿಶ್ವವಿದ್ಯಾಪೀಠದ ಉದ್ದೇಶ.
ತಕ್ಷಶಿಲೆ ವಿಶ್ವವಿದ್ಯಾನಿಲಯದಲ್ಲಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನು ಧರ್ಮಯೋಧ ಚಂದ್ರಗುಪ್ತನನ್ನು ಸೃಷ್ಟಿಸಿ ಆತನ ಮೂಲಕ ನಂದನ ಅಂಧಕಾರಶಾಸನವನ್ನು ಕೊನೆಗೊಳಿಸಿ ಧರ್ಮಸಾಮ್ರಾಜ್ಯ ಉದಯಕ್ಕೆ ಕಾರಣನಾದಂತೆ ವಿಶ್ವವಿದ್ಯಾಪೀಠದ ಮಡಿಲಲ್ಲಿ ವಿಶ್ವವಿಜಯೀ ವಿದ್ಯಾವೀರರನ್ನು ಸೃಜಿಸುವ ಮೂಲಕ ಭಾರತವರ್ಷದಲ್ಲಿ ಮತ್ತೊಮ್ಮೆ ರಾಮರಾಜ್ಯವನ್ನು ಉದಯಗೊಳಿಸುವುದು, ಧರ್ಮಪ್ರಭುತ್ವವನ್ನು ಮರಳಿ ಸ್ಥಾಪಿಸುವುದು ಯೋಜಿತ ವಿಶ್ವವಿದ್ಯಾಪೀಠದ ಧ್ಯೇಯವಾಗಿದೆ.
ಜನರಿಗೂ, ದೇವರಿಗೂ ಸರ್ಕಾರದ ಆಡಳಿತ ಇಷ್ಟವಿಲ್ಲ: ರಾಘವೇಶ್ವರ ಶ್ರೀ
ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಮತ್ತು ಹಲವು ತಿಂಗಳ ಕಾಲ ವಾಸವಿದ್ದ, ಶಂಕರರ ಜ್ಞಾನಶಿಶು ಎನಿಸಿದ ರಾಮಚಂದ್ರಾಪುರ ಮಠದ ಮೂಲಸ್ಥಾನ, ಗೋಕರ್ಣ ಸಮೀಪದ ಅಶೋಕೆಯ ಸ್ವಚ್ಛ, ಸುಂದರ ಪರಿಸರದಲ್ಲಿ ನೂತನ ವಿಶ್ವವಿದ್ಯಾಪೀಠ ತಲೆ ಎತ್ತಲಿದೆ. ವಿಶ್ವದಲ್ಲಿ ಎಲ್ಲೂ ಇಲ್ಲದಂಥ ಅಪೂರ್ವ ವಿದ್ಯಾಪೀಠ ಆದಿಶಂಕರರ ನೆನಪಿನಲ್ಲಿ ಅವರಿಗೇ ಸಮರ್ಪಣೆಯಾಗಲಿದೆ.
ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾರ್ಥಿ ಬಾಹ್ಯಜಗತ್ತಿನಲ್ಲಿ ಅಪ್ರಸ್ತುತನಾಗಬಾರದು ಎಂಬ ಕಾರಣಕ್ಕೆ ಇಂಗ್ಲಿಷ್, ಹಿಂದಿ ಮೊದಲಾದ ಆಧುನಿಕ ಸಮಾಜ ಭಾಷೆಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಸಮಾಜದ ಎಲ್ಲ ವರ್ಗದವರಿಗೂ ಇಲ್ಲಿ ಅವಕಾಶವಿದ್ದು, ಅವರವರಿಗೆ ಸಲ್ಲುವ ವಿದ್ಯೆಗಳನ್ನು ಅವರು ಪಡೆದುಕೊಳ್ಳಬಹುದಾಗಿದೆ. ಒಂದು ವಿಷಯದಲ್ಲಿ ವಿದ್ಯಾರ್ಥಿ ಪರಿಪೂರ್ಣ ಪರಿಣತಿ ಪಡೆಯುವಂತೆ ರೂಪಿಸುವ ಜತೆಜತೆಗೆ ಬಾಕಿ ವಿದ್ಯೆಗಳ ಪರಿಚಯ ಇಲ್ಲಿನ ವಿದ್ಯಾವಿನ್ಯಾಸ ಎಂದು ಶ್ರೀಮಠ ಹೇಳಿದೆ.