'ಮಾರೋ ಕಿಸಾನ್, ಮಾರೋ ಜವಾನ್' ಪ್ರಧಾನಿ ಮೋದಿ ಹೊಸ ಸ್ಲೋಗನ್!
ಬೆಂಗಳೂರು, ಸೆ. 02: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಮೋದಿ ಮೇಲೆ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ನಾವು ಜಾರಿಗೆ ತಂದಿದ್ದೇವು. ದೇಶದಲ್ಲಿನ ಅಷ್ಪೃಶ್ಯತೆ ನಿವಾರಣೆಗೆ ಈ ಕಾನೂನು ಜಾರಿಗೆ ತಂದಿದ್ದೇವು. ಆದರೆ ಅಂತಹ ಮಹತ್ವದ ಕಾನೂನನ್ನೇ ಕಿತ್ತು ಹಾಕುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಅಭಿವೃದ್ಧಿಯನ್ನೇ ಮರೆತಿರುವ ಕೇಂದ್ರ ಬಿಜೆಪಿ ಸರ್ಕಾರ
ಕೇವಲ ವಿರೋಧ ಪಕ್ಷಗಳ ದೂಷಣೆಯಲ್ಲೇ ತೊಡಗಿದೆ. ಅಧಿಕಾರ, ಹಣದ ಅಹಂ ಅವರ ನೆತ್ತಿಗೇರಿದೆ ಎಂದು ಪ್ರಧಾನಿ ಮೋದಿ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಈಗ ದುಷ್ಟರ ಕೈಯಲ್ಲಿ ಅಧಿಕಾರ ಸಿಕ್ಕಿದೆ. ಹೀಗಾಗಿ ಜೈ ಜವಾನ್ ಜೈ ಕಿಸಾನ್ ಮರೆಯಾಗಿ, ಮಾರೋ ಜವಾನ್ ಮಾರೋ ಕಿಸಾನ್ ಶುರುವಾಗಿದೆ. ಮಾರೋ ಕಿಸಾನ್ ಮಾರೋ ಜವಾನ್ ಇದು ಪ್ರಧಾನಿ ಮೋದಿ ಅವರ ಹೊಸ ಸ್ಲೋಗನ್. ನೋಟ್ ಬ್ಯಾನ್ ಮಾಡುವ ಮೂಲಕ ಇಡೀ ದೇಶದ ಆರ್ಥಿಕತೆ ಹಾಳು ಮಾಡಿದ್ರು. ಈಗ ಕೊರೊನಾ ಕಂಟ್ರೊಲ್ ನೆಪದಲ್ಲಿ ಲಾಕ್ಡೌನ್ ಮಾಡಿ ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಬೆಂಗಳೂರಿನಲ್ಲಿ ಆರೋಪಿಸಿದ್ದಾರೆ.
ಹೆಚ್ಚಾಗುತ್ತಿದೆ ದಲಿತರ ಮೇಲೆ ದೌರ್ಜನ್ಯ
ಗಾಂಧೀಜಿ ಅವರು ಚಳವಳಿ ಪ್ರಾರಂಭಿಸದಿದ್ದರೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. 1917ರ ಚಂಪಾರಣ್ ಚಳವಳಿ ಮಹತ್ವದ್ದು. ಖಿಲಾಪತ್ ಚಳವಳಿ ಮೂಲಕ ಇಡೀ ವಿಶ್ವಕ್ಕೇ ಮಹಾತ್ಮಾ ಮಾದರಿಯಾದರು. 1920ರ ಅಸಹಕಾರ ಚಳವಳಿ ಮೈಲಿಗಲ್ಲಾಯ್ತು. ಕ್ವಿಟ್ ಇಂಡಿಯಾ ಚಳವಳಿ ಸ್ವಾತಂತ್ರ್ಯಕ್ಕೆ ಕಾರಣವಾಯ್ತು. ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಸಮಾಜದ ಸ್ವಾತಂತ್ರ್ಯ ನಮಗೆ ಇನ್ನೂ ಸಿಕ್ಕಿಲ್ಲ. ಅದನ್ನು ಉತ್ತರ ಪ್ರದೇಶದಲ್ಲಿ ನೋಡುತ್ತಿದ್ದೇವೆ. ಅಲ್ಲಿ ಮಹಿಳೆ, ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ.
ಅಲ್ಲಿ ವರ್ಷದಲ್ಲೇ ಇಂತಹ ನೂರಾರು ಪ್ರಕರಣಗಳು ದಾಖಲಾಗಿವೆ. ಹೀಗಾಗಿಯೇ ಸಾಮಾಜಿಕ ನ್ಯಾಯಕ್ಕಾಗಿ ರಾಹುಲ್, ಪ್ರಿಯಾಂಕ ಗಾಂಧಿ ಅಲ್ಲಿಗೆ ಹೋಗಿದ್ದರು. ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ನಮಗೆಲ್ಲ ಗೊತ್ತಿದೆ. ಒಬ್ಬ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಆದರೆ ಕೊಲೆ ಗಡುಕರಿಗೆ ಅಲ್ಲಿ ಮರ್ಯಾದೆ ಇದೆ.
ಸಾಂತ್ವನ ಹೇಳಲು ಹೊರಟಿದ್ದರು
ಬಲಿಯಾದ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಹೊರಟಿದ್ದರು. ಅವರ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ರಾಷ್ಟ್ರೀಯ ಕ್ರೈಂ ಬ್ಯೂರೊ ಈ ಬಗ್ಗೆ ವರದಿ ನೀಡಿದೆ. ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆದ ಮೇಲೆ ಅಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕ್ರೈಂ ಬ್ಯೂರೋ ವರದಿಯಲ್ಲಿ ದಾಖಲಾಗಿದೆ ಎಂದು ಯೋಗಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಅವರು ವಾಗ್ದಾಳಿ ಮಾಡಿದ್ದಾರೆ.
ಬಿಡದ ಪ್ರಧಾನಿ ಮೋದಿ
ದೇಶದಲ್ಲಿ ಬಂದ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ಇಷ್ಟೆಲ್ಲಾ ಆದರೂ ಪ್ರಧಾನಿ ಮೋದಿ ಮಾತ್ರ ಬಾಯಿಬಿಡುತ್ತಿಲ್ಲ. ಅತಿ ದೊಡ್ಡ ಘಟನೆ ಆದಾಗ ಟ್ವೀಟ್ ಮಾಡುತ್ತಾರೆ. ಜಾತಿ ಜಾತಿಗಳನ್ನು ಒಡೆದು ಆಳೋಕೆ ಹೊರಟಿದ್ದಾರೆ. ಆರ್ಎಸ್ಎಸ್ನವರಿಗೆ ಇಂಥದ್ದೇ ಬೇಕು. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಸಹಜವಾಗಿದೆ. ಇತ್ತೀಚೆಗೆ ರೈತರು, ಕಾರ್ಮಿಕರ ಮೇಲೂ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
ರೈತ ವಿರೋಧಿ ಕಾನೂನು
ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇಂದಲ್ಲ ನಾಳೆ ಜನರು ರೊಚ್ಚಿಗೇಳುತ್ತಾರೆ. ಇದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಚಂಪಾರಣ್ ಚಳವಳಿಯನ್ನು ರೈತರೇ ಬೆಂಬಲಿಸಿದ್ದರು. ಹೀಗಾಗಿಯೇ ಪ್ರಧಾನಿ ಮೋದಿ ರೈತರನ್ನು ತುಳಿಯೋಕೆ ಹೊರಟಿದ್ದಾರೆ ಎಂದು ಪ್ರಧಾನಿ ನಡೆಯನ್ನು ಮಲ್ಲಿಕಾರ್ಜುನ್ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ.