ಶುಭ್ ಜ್ಯುವೆಲ್ಲರ್ಸ್ ಮಳಿಗೆ ಮೇಲೆ 'ಐಟಿ' ದಾಳಿ
ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಶುಭ್ ಜ್ಯುವೆಲ್ಲರ್ ಚಿನ್ನದ ಮಳಿಗೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವಿಚಾರಣೆ ಮುಂದುವರೆದಿದೆ. ದಾಳಿ ಸುದ್ದಿ ಹೊರಬಿದ್ದ ನಂತರವೂ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಷೇರುಗಳು ಏರಿಳಿತ ಕಾಣದೆ ಸುಸ್ಥಿತಿಯಲ್ಲಿರುವುದು ಕಂಡು ಬಂದಿದೆ.
ಬಿಎಸ್ ಇನಲ್ಲಿ ಡಿ.17 ರಂದು ಸಮಯ 2.40ರ ಸುಮಾರಿಗೆ 90.30 ರು ನಂತೆ ವಹಿವಾಟು ನಡೆಸಿದ್ದರೆ, ಎನ್ ಎಸ್ ಇನಲ್ಲಿ 90.30 ರು ನಂತೆ ಶೇ 0.44ರಷ್ಟು ಏರಿಕೆ ಕಂಡಿದೆ.
ಬೆಂಗಳೂರು ಮೂಲದ ರಾಜೇಶ್ ಎಕ್ಸ್ ಪೋಟ್ಸ್ ಸಂಸ್ಥೆಯ ಶುಭ್ ಜುವೆಲ್ಲರ್ಸ್ ವರ್ಷಾರಂಭದಲ್ಲೇ ಅರೇಬಿಯಾ ಸಂಸ್ಥೆಯಿಂದ ಭರ್ಜರಿ ಡೀಲ್ ಕುದುರಿಸಿತ್ತು. ಯುಎಇಯ ಅಲ್ ಮಲೆಕ್ ಜ್ಯುವೆಲ್ಲರಿ ಸಂಸ್ಥೆಯಿಂದ ಸುಮಾರು 432 ಕೋಟಿ ರು ಒಪ್ಪಂದಕ್ಕೆ ರಾಜೇಶ್ ಎಕ್ಸ್ ಪೋರ್ಟ್ಸ್ ಸಹಿ ಹಾಕಿತ್ತು. ಚಿನ್ನ ಮತ್ತು ವಜ್ರದ ಆಭರಣ ರಫ್ತು ಮಾಡಲು ರಾಜೇಶ್ ಎಕ್ಸ್ ಪೋರ್ಟ್ ಸಿದ್ಧತೆ ನಡೆಸಿತ್ತು.
ದಕ್ಷಿಣ ಭಾರತದಲ್ಲಿ ಡಾ. ವಿಷ್ಣುವರ್ಧನ್ ಹಾಗೂ ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿಸಿಕೊಂಡು ಸಂಸ್ಥೆ ಅಧಿಕ ಲಾಭ ಪಡೆದಿದೆ. ಇದಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ಸಂಸ್ಥೆ ಚೇರ್ ಮನ್ ರಾಜೇಶ್ ಮೆಹ್ತಾ ಅವರಂತೂ ಅನೇಕ ಬಾರಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು 40 ಕ್ಕೂ ಅಧಿಕ ಶುಭ್ ಜುವೆಲ್ಲರಿ ಶೋ ರೂಮ್ ಗಳನ್ನು ಆರಂಭಿಸುವ ಯೋಜನೆ ಕರ್ನಾಟಕದಲ್ಲಿ ಸಂಸ್ಥೆ ಉತ್ತಮ ಪ್ರಗತಿ ಕಂಡಿದೆ ಎಂದು ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಮುಖ್ಯಸ್ಥ ರಾಜೇಶ್ ಮೆಹ್ತಾ ಅವರು ವರ್ಷದ ಆರಂಭದಲ್ಲೇ ಯೋಜನೆ ಬಗ್ಗೆ ವಿವರಿಸಿದ್ದರು.
ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ಸುಮಾರು 2000ಕ್ಕೂ ಅಧಿಕ ಮದುವೆ ಸಂಬಂಧಿಸಿದ ಆಭರಣಗಳ ವಿನ್ಯಾಸವನ್ನು ರೂಪಿಸುತ್ತಿದೆ. 2014ರ ಸುಮಾರಿಗೆ ದಕ್ಷಿಣ ಭಾರತದಲ್ಲಿ 500 ಮಳಿಗೆಗಳನ್ನು ಹೊಂದಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.
2012ರ ದೀಪಾವಳಿ ಹಾಗೂ ಕ್ರಿಸ್ ಮಸ್ ಸಂದರ್ಭದಲ್ಲಿ ಸುಮಾರು ಶೇ 232 ರಷ್ಟು ಆದಾಯ ಗಳಿಸಿತ್ತು. ಅದಕ್ಕೂ ಹಿಂದಿನ ವರ್ಷ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 215ರಷ್ಟು ಅಧಿಕ ಪ್ರಗತಿ ಕಂಡಿತ್ತು. ಈ ವರ್ಷ ಆದಾಯ ಗಳಿಕೆ ದ್ವಿಗುಣವಾಗುವ ಸೂಚನೆ ಸಿಕ್ಕಿತ್ತು.