ಸಾಲು ಮರದ ತಿಮ್ಮಕ್ಕ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್
ಬೆಂಗಳೂರು, ಅಕ್ಟೋಬರ್ 18 : ಸಾಲು ಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಿಮ್ಮಕ್ಕ ಆಸ್ಪತ್ರೆ ಖರ್ಚನ್ನು ಭರಿಸುವ ಭರವಸೆ ನೀಡಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ (105) ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಹಣಕಾಸಿನ ಕೊರತೆ ಎದುರಾಗಿದೆ. ತಿಮ್ಮಕ್ಕ ಆರೋಗ್ಯದ ಖರ್ಚನ್ನು ನೋಡಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ.
ಸರಕಾರಕ್ಕೆ ಕೇಳುವುದೆ ತಿಮ್ಮಕ್ಕನ ಮೊರೆ?
ಸರ್ಕಾರದ ಕಡೆಯಿಂದ ಯಾರೂ ಬಂದು ಆರೋಗ್ಯ ವಿಚಾರಿಸಿಲ್ಲ. ಸಚಿವರು, ಶಾಸಕರು ಯಾರೂ ಸಹ ಹಣಕಾಸಿನ ಸಹಾಯ ಮಾಡಲು ಮುಂದೆ ಬಂದಿಲ್ಲ. ಬುಧವಾರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆಸ್ಪತ್ರೆಗೆ ಭೇಟಿ ನೀಡಿ ತಿಮ್ಮಕ್ಕ ಆರೋಗ್ಯ ವಿಚಾರಿಸಿದರು. ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಇಂದು ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿಯಾಗಿ ಅವರು ಶೀಘ್ರ ಗುಣಮುಖ ಆಗಲಿ ಎಂದು ಪ್ರಾರ್ಥಿಸಿದೆ. ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಅವರ ಆಸ್ಪತ್ರೆ ಖರ್ಚನ್ನು ಭರಿಸುವೆ.🙏
— Rajeev Chandrasekhar (@rajeev_mp) October 18, 2017
ತಿಮ್ಮಕ್ಕ ದತ್ತುಪುತ್ರ ಬಿ.ಎನ್.ಉಮೇಶ್ ತಿಮ್ಮಕ್ಕ ಜೊತೆ ಆಸ್ಪತ್ರೆಯಲ್ಲಿದ್ದಾರೆ. 'ಸರ್ಕಾರದ ಕಡೆಯಿಂದ ಯಾವ ನಾಯಕರು ಇಲ್ಲಿಗೆ ಬಂದಿಲ್ಲ. ವೈದ್ಯಕೀಯ ವೆಚ್ಚಗಳನ್ನು ಭರಿಸುವ ಭರವಸೆ ನೀಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಿಮ್ಮಕ್ಕ ಹೆಸರಿನಲ್ಲಿ ಉದ್ಯಾನವನ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು. ಅದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ' ಉಮೇಶ್.
'ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಏಳೆಂಟು ವರ್ಷಗಳಲ್ಲಿ 5 ಬಾರಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಸರ್ಕಾರ ಚಿಕಿತ್ಸೆಗೆ ಯಾವುದೇ ರೀತಿಯ ಸಹಕಾರ ನೀಡಿಲ್ಲ' ಎಂದು ಉಮೇಶ್ ಆರೋಪಿಸಿದ್ದಾರೆ.
ಕಳೆದ ಬಾರಿ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸರ್ಕಾರದಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ತಿಮ್ಮಕ್ಕ ಹುಟ್ಟೂರು ಮಾಗಡಿ ತಾಲೂಕಿನ ಹುಲಿಕಲ್ನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸಲು ಸಹಕಾರ ನೀಡುವುದಾಗಿ ಹೇಳಿದ್ದರು.
ಆದರೆ, ಜಾಗವನ್ನು ನೀಡಿರುವುದು ಬಿಟ್ಟು ಬೇರೆ ಯಾವುದೇ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿಲ್ಲ. ಆಸ್ಪತ್ರೆ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ.