ಮುನಿರತ್ನ ವಿರುದ್ಧ ಡಿ. ಕೆ. ರವಿ ಪತ್ನಿ ಕಣಕ್ಕೆ?, ಸ್ವಾಮೀಜಿ ಭೇಟಿ
ಬೆಂಗಳೂರು, ಅಕ್ಟೋಬರ್ 01 : ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ನಿಂದ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ? ಎಂಬ ಚರ್ಚೆಗಳು ಕಾವು ಪಡೆದುಕೊಂಡಿದೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನ.10ರಂದು ಫಲಿತಾಂಶ ಪ್ರಕಟವಾಗಲಿದೆ.
ಗುರುವಾರ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ. ಕೆ. ರವಿ ಪತ್ನಿ ಹೆಚ್. ಕುಸುಮಾ ಭೇಟಿ ನೀಡಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದವನ್ನು ಪಡೆದರು. ಕುಸುಮಾ ತಂದೆ ಹನುಮಂತರಾಯಪ್ಪ ಈ ಸಂದರ್ಭದಲ್ಲಿ ಜೊತೆಗಿದ್ದರು.
ಆರ್. ಆರ್. ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ಹೆಚ್. ಕುಸುಮಾ ಅಥವ ಹನುಮಂತರಾಯಪ್ಪಗೆ ಆರ್. ಆರ್. ನಗರದಿಂದ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬ ಸುದ್ದಿಗಳು ಹಬ್ಬಿವೆ. ಇಂತಹ ಸಂದರ್ಭದಲ್ಲಿಯೇ ಕುಸುಮಾ ಮಠಕ್ಕೆ ಭೇಟಿ ನೀಡಿರುವುದು ಅಚ್ಚರಿಕೆ ಕಾರಣವಾಗಿದೆ. ಅಭ್ಯರ್ಥಿ ಯಾರು? ಎಂದು ಕಾಂಗ್ರೆಸ್ ಇನ್ನೂ ತೀರ್ಮಾನ ಕೈಗೊಂಡಿಲ್ಲ.
ಆರ್. ಆರ್. ನಗರ ಉಪ ಚುನಾವಣೆ; ಬಿಬಿಎಂಪಿ ಆಯುಕ್ತರ ಸಭೆ
ಆರ್. ಆರ್. ನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದ ಸಂಸದರು ಕಾಂಗ್ರೆಸ್ನ ಡಿ. ಕೆ. ಸುರೇಶ್, ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಆದ್ದರಿಂದ, ಉಪ ಚುನಾವಣೆ ಸಹೋದರರ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡ್ರಾ ಅನರ್ಹ ಶಾಸಕ ಮುನಿರತ್ನ?
ಹೆಚ್. ಕುಸುಮಾ ಕಾಂಗ್ರೆಸ್ ಅಭ್ಯರ್ಥಿ?
ಮಂಗಳವಾರ ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಹೆಚ್. ಕುಸುಮಾ ಅಥವ ಹನುಂತರಾಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ. ಕಳೆದ 2 ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಬಿಜೆಪಿಯಿಂದ ಮುನಿರತ್ನ ಸ್ಪರ್ಧೆ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮುನಿರತ್ನ ಅವರಿಂದಾಗಿ ಆರ್. ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಮುನಿರತ್ನ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ತಂತ್ರವನ್ನು ರೂಪಿಸುತ್ತಿದೆ. ಆದ್ದರಿಂದ, ಪ್ರಬಲ ಅಭ್ಯರ್ಥಿಯಾಗಿ ಹುಡುಕಾಟ ನಡೆಯುತ್ತಿದೆ.
ಮೈತ್ರಿ ಅಭ್ಯರ್ಥಿ ಕಣಕ್ಕೆ?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಮುನಿರತ್ನ ಅವರು ಸಹ ಕಾರಣ. ಆದ್ದರಿಂದ, ಎರಡೂ ಪಕ್ಷಗಳು ಸೇರಿ ಮುನಿರತ್ನ ಸೋಲಿಸಲ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂದು ಸಹ ಕಾರ್ಯಕರ್ತರು ಹೇಳುತ್ತಿದ್ದಾರೆ. ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಲು ಎಚ್. ಡಿ. ಕುಮಾರಸ್ವಾಮಿ ಒಪ್ಪಲಿದ್ದಾರೆಯೇ? ಕಾದು ನೋಡಬೇಕು.
Recommended Video
60 ಸಾವಿರ ಮತಗಳು
2018ರ ಚುನಾವಣೆಯಲ್ಲಿ ಜೆಡಿಎಸ್ ಆರ್. ಆರ್. ನಗರ ಕ್ಷೇತ್ರದಲ್ಲಿ 60,360 ಮತಗಳನ್ನು ಪಡೆದಿತ್ತು. ನಟಿ ಅಮೂಲ್ಯ ಮಾವ ಜಿ. ಎಚ್. ರಾಮಚಂದ್ರ ಅಭ್ಯರ್ಥಿಯಾಗಿದ್ದರು. ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರು? ಎಂದು ಗುರುವಾರ ಘೋಷಣೆಯಾಗುವ ನಿರೀಕ್ಷೆ ಇದೆ.