ಆರ್. ಆರ್. ನಗರ ಚುನಾವಣೆ; ಖುಷ್ಬೂ ಸುಂದರ್ ರೋಡ್ ಶೋ
ಬೆಂಗಳೂರು, ಅಕ್ಟೋಬರ್ 28 : ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಜೋರಾಗಿದೆ. ಬಿಜೆಪಿ ಅಭ್ಯರ್ಥಿ, ನಿರ್ಮಾಪಕ ಮುನಿರತ್ನ ಪರವಾಗಿ ನಟ-ನಟಿಯರು ಪ್ರಚಾರ ಆರಂಭಿಸಿದ್ದಾರೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, 10ರಂದು ಫಲಿತಾಂಶ ಪ್ರಕಟವಾಗಲಿದೆ.
ಬುಧವಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ತಮಿಳುನಾಡಿನ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಪ್ರಚಾರ ನಡೆಸಿದರು. ಲಗ್ಗೆರೆಯ ಕೆಂಪೇಗೌಡ ಆರ್ಚ್ ಸ್ಥಳದಿಂದ ಲಕ್ಷ್ಮಿದೇವಿ ನಗರ ಮತ್ತು ಯಶವಂತಪುರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.
ಗುರುವಾರ ಮುನಿರತ್ನ ಪರವಾಗಿ ನಟ ದರ್ಶನ್ ಪ್ರಚಾರ
ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿರುವ ಖುಷ್ಬೂ ಸುಂದರ್ ಕರ್ನಾಟಕದ ಜನರಿಗೆ ಚಿರಪರಿಚಿತರು. ಕನ್ನಡದ ಅನೇಕ ಚಿತ್ರಗಳಲ್ಲಿ ಖುಷ್ಬೂ ನಟಿಸಿದ್ದಾರೆ. ಆದ್ದರಿಂದ, ರಾಜ್ಯದಲ್ಲಿ ಪ್ರಚಾರ ಮಾಡಲು ಅವರು ಆಗಮಿಸಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಕಾರಣ ನೀಡಿದ ಖುಷ್ಬೂ
ಕೆಲವು ಬಡಾವಣೆಗಳಲ್ಲಿ ತಮಿಳು ಭಾಷೆಯಲ್ಲಿಯೇ ಖುಷ್ಬೂ ಮತಯಾಚನೆ ಮಾಡಿದರು. "ಮುನಿರತ್ನ ಅವರಿಗೆ ಮತ ಹಾಕಿ ಗೆಲ್ಲಿಸಿ. ನಿಮಗೆ ನನ್ನ ಮೇಲೆ ಬಹಳಷ್ಟು ಅಭಿಮಾನವಿದೆ. ಆ ಅಭಿಮಾನದ ಕಾರಣಕ್ಕಾಗಿಯೇ ಪ್ರಚಾರ ಮಾಡಲು ಬಂದಿದ್ದೇನೆ" ಎಂದರು.
ಆರ್. ಆರ್. ನಗರ ಚುನಾವಣೆ; ಜಾತಿ ಲೆಕ್ಕಾಚಾರದ್ದೇ ಮಾತು
"ಚುನಾವಣೆಯಲ್ಲಿ ಮುನಿರತ್ನ ಅವರು ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ. ಮುನಿರತ್ನ ಅವರು ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ" ಎಂದು ಖುಷ್ಬೂ ಹೇಳಿದರು.
"ನನಗೆ ಕನ್ನಡ ಅರ್ಥವಾಗುತ್ತದೆ. ಆದರೆ, ಕನ್ನಡ ಮಾತನಾಡಲು ಕೆಲವು ಸಮಯ ಬೇಕು ಅಷ್ಟು ಸಮಯ ಈಗ ನಮ್ಮ ಬಳಿ ಇಲ್ಲ" ಎಂದು ಹೇಳಿದ ಖುಷ್ಬೂ ಜನರತ್ತ ಕೈ ಬೀಸುತ್ತಾ ರೋಡ್ ಶೋ ನಡೆಸಿದರು.
"22 ವರ್ಷಗಳಿಂದ ಖುಷ್ಬೂ ಅವರ ಜೊತೆ ಬಾಂಧವ್ಯವಿದೆ. ನನಗೆ ಒಳ್ಳೆಯದನ್ನು ಬಯಸಿಕೊಂಡು ಬಂದಿದ್ದಾರೆ. ಆದ್ದರಿಂದ, ಮತಯಾಚನೆ ಮಾಡಲು ಬಂದಿದ್ದಾರೆ. ನಿಮ್ಮ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ" ಎಂದು ಮುನಿರತ್ನ ಹೇಳಿದರು.