ಆರ್. ಆರ್. ನಗರ ಚುನಾವಣೆ; ಜೆಡಿಎಸ್ಗೆ ಮತ್ತೊಂದು ಹಿನ್ನಡೆ
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ವಿವಿಧ ತಂತ್ರಗಳನ್ನು ರೂಪಿಸುತ್ತಿದೆ. ಕ್ಷೇತ್ರದ ಜೆಡಿಎಸ್ ನಾಯಕ ಬಿಜೆಪಿ ಸೇರಿದ್ದು, ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ನಟಿ ಅಮೂಲ್ಯ ಮಾವ ಮತ್ತು ಜೆಡಿಎಸ್ ನಾಯಕರಾಗಿದ್ದ ಜಿ. ಎಚ್. ರಾಮಚಂದ್ರ ಭಾನುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಮುನಿರತ್ನಗೆ ಅವರು ಬೆಂಬಲ ಸೂಚಿಸಿದ್ದಾರೆ.
ಆರ್. ಆರ್. ನಗರ ಉಪ ಚುನಾವಣೆ; ಕಣದಲ್ಲಿ ಇಬ್ಬರು ಮುನಿರತ್ನ!
ಜಿ. ಎಚ್. ರಾಮಚಂದ್ರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್. ಆರ್. ನಗರದಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದರು. 60,360 ಮತಗಳನ್ನು ಪಡೆದಿದ್ದರು. ಈಗ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದಾರೆ. ಈ ಕುರಿತು ಫೇಸ್ ಬುಕ್ನಲ್ಲಿಯೂ ಪೋಸ್ಟ್ ಹಾಕಿದ್ದಾರೆ.
ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು!
ನವೆಂಬರ್ 3ರಂದು ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಮಾಜಿ ಶಾಸಕ ಮುನಿರತ್ನ ಅಭ್ಯರ್ಥಿ. ಕಾಂಗ್ರೆಸ್ನಿಂದ ಎಚ್. ಕುಸುಮಾ, ಜೆಡಿಎಸ್ನಿಂದ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ಆರ್. ಆರ್. ನಗರ ಉಪ ಚುನಾವಣೆ; ಡಿಕೆಶಿ ತುರ್ತು ಸುದ್ದಿಗೋಷ್ಠಿ
ಜಿ. ಎಚ್. ರಾಮಚಂದ್ರ ಫೇಸ್ ಬುಕ್ ಪೋಸ್ಟ್
"ರಾಜರಾಜೇಶ್ವರಿ ನಗರದ ಮಹಾ ಜನತೆಗೆ ನನ್ನ ನಮಸ್ಕಾರ. ನನ್ನ ಬಹುಕಾಲದ ಆತ್ಮೀಯರು, ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ. ಟಿ. ರವಿಯವರು ರಾಜರಾಜೇಶ್ವರಿ ನಗರದ ನನ್ನ ನಿವಾಸಕ್ಕೆ ಆಗಮಿಸಿ, ನಾನು 22 ವರ್ಷಗಳು ಸೇವೆ ಸಲ್ಲಿಸಿದ ಪಕ್ಷಕ್ಕೆ ಮರಳಿ ಬರುವಂತೆ ನೀಡಿರುವ ಆಹ್ವಾನವನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದೇನೆ" ಎಂದು ಜಿ. ಎಚ್. ರಾಮಚಂದ್ರ ಹೇಳಿದ್ದಾರೆ.
ಪಕ್ಷ ಸಂಘಟನೆ ಮಾಡುತ್ತೇನೆ
"ಒಂದೆರಡು ದಿನಗಳಲ್ಲಿ ಪಕ್ಷದ ಕಛೇರಿಯಲ್ಲಿ ವರಿಷ್ಠರನ್ನು ಭೇಟಿ ಮಾಡಲಿದ್ದೇನೆ. ಅವರ ಮಾರ್ಗದರ್ಶನದಂತೆ ಪಕ್ಷ ಸಂಘಟನೆ ಮಾಡಿ, ಭಾರತೀಯ ಜನತಾ ಪಕ್ಷದ ಕುಟುಂಬಕ್ಕೆ ರಾಜರಾಜೇಶ್ವರಿ ನಗರ ವಿಧಾನಸಭ ಕ್ಷೇತ್ರದಲ್ಲಿ ಹೆಚ್ಚಿನ ಬಲ ತುಂಬಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ" ಎಂದು ಜಿ. ಎಚ್. ರಾಮಚಂದ್ರ ಹೇಳಿದ್ದಾರೆ.
ಮುನಿರತ್ನ ಗೆಲ್ಲಿಸಲು ಮನವಿ
"ಈ ಬಾರಿಯ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುನಿರತ್ನ ಅವರನ್ನು ಗೆಲ್ಲಿಸಿ, ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಕೈ ಬಲಪಡಿಸಲು ಪಕ್ಷ ಕಾರ್ಯಸೂಚಿಗಳಿಗನುಗುಣವಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ" ಎಂದು ರಾಮಚಂದ್ರ ಹೇಳಿದ್ದಾರೆ.
ಮತದಾರರಿಗೆ ಕೃತಜ್ಞತೆ
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚಿನ ಮತ ನೀಡಿ ಬೆಂಬಲಿಸಿದ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿಯೂ ನಿಮ್ಮ ಅಮೂಲ್ಯವಾದ ಬೆಂಬಲ, ಸಹಕಾರ ಮತ್ತು ಪ್ರೀತಿಯನ್ನು ಬಯಸುತ್ತೇನೆ" ಎಂದು ರಾಮಚಂದ್ರ ಮನವಿ ಮಾಡಿದ್ದಾರೆ.
Recommended Video
ಹಲವು ನಾಯಕರು ಕಾಂಗ್ರೆಸ್ ಸೇರಿದ್ದರು
ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿದ್ದ ಬೆಟ್ಟಸ್ವಾಮಿ ಗೌಡ ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ವಿ. ಕೃಷ್ಣಮೂರ್ತಿಗೆ ಟಿಕೆಟ್ ನೀಡಿದ ಬಳಿಕ ಅವರು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ್ದರು. ಈಗ ಜಿ. ಎಚ್. ರಾಮಚಂದ್ರ ಬಿಜೆಪಿ ಸೇರಿದ್ದಾರೆ.