ಉಚಿತ ಹಾಲು ಹಂಚಿಕೆಯಲ್ಲಿ ಮತ ರಾಜಕಾರಣ: ಎಎಪಿ ಖಂಡನೆ
ಬೆಂಗಳೂರು, ಏಪ್ರಿಲ್ 16: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಹಾಲು ಮಹಾಮಂಡಳದಿಂದ ಪ್ರತಿ ದಿವಸವೂ ಉಚಿತವಾಗಿ ಹಂಚುತ್ತಿರುವ ಹಾಲನ್ನು ಸ್ಥಳೀಯ ಬಿಜೆಪಿ ಮುಖಂಡರುಗಳು ತಮ್ಮ ಮತ ಬ್ಯಾಂಕ್ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಕ್ಷೇತ್ರದ ಬಸವೇಶ್ವರ ನಗರ ವಾರ್ಡಿನಲ್ಲಿ ಅಲ್ಲಿನ ಸ್ಥಳೀಯ ಕಾರ್ಪೊರೇಟರ್ ಪತಿ ಹಾಗೂ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಅವರು ಉಚಿತವಾಗಿ ಬಂದಿರುವ ಹಾಲನ್ನು ಮತ ಚೀಟಿಯನ್ನು ತೋರಿಸುವವರಿಗೆ ಮಾತ್ರ ಹಂಚುತ್ತಿರುವುದು ಆಮ್ ಆದ್ಮಿ ಪಕ್ಷದ ರಿಯಾಲಿಟಿ ಚೆಕ್ ನಿಂದ ತಿಳಿದು ಬಂದಿದೆ.
ವೈದ್ಯರಿಗೆ ಹಾಗೂ ನರ್ಸ್ ಗಳಿಗೆ ಸರ್ಕಾರ ರಕ್ಷಣೆ ನೀಡಲು ಎಎಪಿ ಆಗ್ರಹ
ಹಲವು ದಿವಸಗಳಿಂದ ಇದೇ ರೀತಿಯ ವರ್ತನೆಯನ್ನು ತೋರುತ್ತಿರುವ ಪದ್ಮರಾಜ್ ಹಾಗೂ ಅವರ ಅನುಯಾಯಿಗಳು ಕ್ಷೇತ್ರದಲ್ಲಿನ ಕಡು ಬಡವರಿಗೆ,ವಲಸಿಗ ಕಾರ್ಮಿಕರಿಗೆ, ನಿರ್ಗತಿಕರಿಗೆ ಈ ಉಚಿತ ಹಾಲನ್ನು ತಲುಪಿಸದೇ ತಮ್ಮ ಕ್ಷೇತ್ರದ ಮತದಾರರುಗಳಿಗೆ ಮಾತ್ರ ಈ ರೀತಿ ಹಂಚುತ್ತಿರುವುದು ತೀರಾ ವಿಪರ್ಯಾಸದ ಸಂಗತಿಯಾಗಿದೆ.
ಕೋರೋನಾ ಮಹಾಭೀತಿಯಂಥ ಈ ಸಂದರ್ಭದಲ್ಲಿ ಸರ್ಕಾರವು ಸದುದ್ದೇಶದಿಂದ ಪ್ರತಿ ದಿವಸ 2.5 ಕೋಟಿ ರೂ.ಗಳ ಎಂಟು ಲಕ್ಷ ಲೀಟರ್ ಹಾಲುಗಳನ್ನು ಬಡವರಿಗೆ ಹಂಚಲು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದರೆ, ಬೆಂಗಳೂರು ನಗರದಲ್ಲಿನ ಅನೇಕ ಶಾಸಕರುಗಳು, ಮಹಾನಗರ ಪಾಲಿಕೆ ಸದಸ್ಯರುಗಳು ಈ ಉದ್ದೇಶದ ಆಶಯವನ್ನೇ ಮರೆತು ಬಡವರಿಗೆ ತಲುಪಿಸದೆ ತಮ್ಮ ವೋಟ್ ಬ್ಯಾಂಕ್ ರಾಜಕೀಯವನ್ನು ಮಾಡುತ್ತಿರುವುದು ಅತ್ಯಂತ ದುರಂತದ ಸಂಗತಿ.
ಆಮ್ ಆದ್ಮಿ ಪಕ್ಷವು ಈ ಹಿಂದೆಯೂ ಸಹ ಉಚಿತ ಹಾಲು ಸಂಪೂರ್ಣ ಕಡು ಬಡವರಿಗೆ ತಲುಪದೇ ದುರ್ಬಳಕೆ ಆಗುತ್ತಿರುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು .
ಸರ್ಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ಇಂತಹ ದುರುಳ ರಾಜಕೀಯ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಬೇಕು ಹಾಗೂ ಕೋಟ್ಯಂತರ ರೂಗಳ ಈ ಹಾಲನ್ನು ಕಡು ಬಡವರಿಗೆ ನಿರ್ಗತಿಕರಿಗೆ ತಲುಪಿಸುವಂತಹ ಕಠಿಣ ಕ್ರಮಗಳನ್ನು ಈ ಕೂಡಲೇ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಗುರುಮೂರ್ತಿ ಅವರು ಆಗ್ರಹಿಸಿದ್ದಾರೆ.