ಸುರೇಶ್ಕುಮಾರ್ ಮುಖವಾಡ ಕಳಚಿದೆ ಎಂದು ಮಾಜಿ ಮೇಯರ್ ಪದ್ಮಾವತಿ
ಬೆಂಗಳೂರು, ಮೇ 10: ರಾಜಾಜಿನಗರದ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು 2008ರಲ್ಲೂ ಕೂಡ ಇದೇ ರೀತಿ ಹಣಹಂಚಿ ಗೆಲುವು ಸಾಧಿಸಿದ್ದರು ಇದೀಗ ಮತ್ತೆ ಅದೇ ಪ್ರಯತ್ನ ಮಾಡುತ್ತಿದ್ದಾರೆ.ದುರಾದೃಷ್ಟವಶಾತ್ ಈ ಸಲ ತಮ್ಮ ಪುತ್ರಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಜಿ ಪದ್ಮಾವತಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಕುಮಾರ್ ಪುತ್ರಿ ದಿಶಾ ಹಣ ಹಂಚುವ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆ ಬಳಿಕ ಸುರೇಶ್ ಕುಮಾರ್ ಈ ಘಟನೆಯನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ತಮ್ಮ ವಿರುದ್ಧ ನಿರಂತರ ವಯಕ್ತಿಕ ದಾಳಿ ನಡೆಸುತ್ತಿದ್ದಾರೆ.
ಆ ಹಣ ನನ್ನದು ಎಂದು ಸಾಬೀತಾದ್ರೆ, ರಾಜಕೀಯ ನಿವೃತ್ತಿ : ಸುರೇಶ್
ಐದು ವರ್ಷಗಳ ಕಾಲ ಸಚಿವರಾಗಿ ರಾಜಾಜಿನಗರ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡದ ಸುರೇಶ್ ಕುಮಾರ್ ಈಗ ತಮ್ಮ ಮೇಲೆ ಆರೋಪ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸುರೇಶ್ ಕುಮಾರ್ ಪ್ರಾಮಾಣಿಕತೆಯ ಮುಖವಾಡ ಕಳಚಿದ್ದು, ಚುನಾವಣೆ ಗೆಲುವಿಗಾಗಿ ಯಾವುದೇ ರೀತಿಯ ಅಕ್ರಮಕ್ಕೆ ಮುಂದಾಗಿದ್ದಾರೆ.
ಅವರು ಸಚಿವರಾಗಿದ್ದ ಸಂದರ್ಭದಲ್ಲೂ ಕೂಡ ಡಿ ನೋಟಿಫಿಕೇಷನ್ ಶೆರಿದಂತೆ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದರು. ಅಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗಗೆ ಉತ್ತರ ಕೊಡದೆ ಕೇವಲ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಆದರೆ ನಾನು ಒಂದು ವರ್ಷಗಳ ಕಾಲ ಮೇಯರ್ ಆಗಿದ್ದ ಸಂದರ್ಭದಲ್ಲಿ ರಾಜಾಜಿನಗರ ಕ್ಷೇತ್ರ ಸೇರಿದಂತೆ ಇಡೀ ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರುಸುತ್ತಿದ್ದೇನೆ. ಹೀಗಾಗಿ ಸೋಲಿನ ಬೀತಿಯಿಂದ ಸುರೇಶ್ ಕುಮಾರ್ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪದ್ಮಾವತಿ ಅಸಮಧಾನ ವ್ಯಕ್ತಪಡಿಸಿದರು.
ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ಅಕ್ರಮವಾಗಿ ಹಣ ಹಂಚುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.ಸುರೇಶ್ ಕುಮಾರ್ ಅವರ ಪುತ್ರಿ ನೀಡಿದ್ದರು. ನಾನು ಹಣ ಹಂಚಿಲ್ಲ, ನನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಇದೆಲ್ಲವೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾರ್ಪೊರೇಟರ್ ಕೃಷ್ಣಮೂರ್ತಿ ಅವರ ಪೂರ್ವ ನಿಯೋಜಿತ ಕೃತ್ಯ ಎಂದು ಸುರೇಶ್ ಕುಮಾರ್ ಆರೋಪವನ್ನು ತಳ್ಳಿಹಾಕಿದ್ದರು.